ಬೆಂಗಳೂರು: ಇಡೀ ಐಪಿಎಲ್ ಟೂರ್ನಿಯಲ್ಲಿ ಕೇವಲ ಒಬ್ಬ ಆಟಗಾರ ಇಡೀ ತಂಡವನ್ನು ಪ್ರಮುಖ ಹಂತಕ್ಕೆ ತಂದ ಉದಾಹರಣೆ ಅಂದರೆ ಸ್ಪಷ್ಟವಾಗಿ ಅದು ಸನ್ ರೈಸರ್ಸ್ ಹೈದರಾಬಾದ್ ತಂಡ ಎಂದು ಹೇಳಬಹುದು.
ಸನ್ರೈಸರ್ಸ್ ತಂಡದ ಗೆಲುವಿಗೆ ವಾರ್ನರ್ರ ಚಾಣಾಕ್ಷ ನಾಯಕತ್ವವೇ ಪ್ರಮುಖ ಕಾರಣ ಎಂದು ಹೇಳಬಹುದು. ಟೂರ್ನಿಯ ಆರಂಭದಿಂದಲೂ ಬ್ಯಾಟಿಂಗ್ ನಲ್ಲಿ ಒನ್ ಮ್ಯಾನ್ ಆರ್ಮಿಯಂತೆ ಹೋರಾಡಿದ್ದ ವಾರ್ನರ್ ಫೈನಲ್ ಪಂದ್ಯದಲ್ಲಿಯೂ ಅದೇ ಪ್ರದರ್ಶನವನ್ನು ನೀಡಿದ್ದರು. ಟಾಸ್ ಗೆದ್ದ ವಾರ್ನರ್ ಗೆ ಆರ್ ಸಿಬಿ ತಂಡದ ಬಲಿಷ್ಠ ಬ್ಯಾಟಿಂಗ್ ನ ಪರಿಚಯವಿತ್ತು. ಇದೇ ಕಾರಣಕ್ಕಾಗಿ ಚೇಸಿಂಗ್ ಸ್ವರ್ಗದಂತಿದ್ದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ತಮ್ಮ ಬೌಲಿಂಗ್ ಪಡೆಯ ಮೇಲೆ ವಿಶ್ವಾಸವಿರಿಸಿದ ವಾರ್ನರ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಇದು ಅವರ ಅಗ್ರೆಸಿವ್ ನಾಯಕತ್ವಕ್ಕೆ ಹಿಡಿದ ಕೈ ಗನ್ನಡಿಯಾಗಿದೆ. ತಂಡದಲ್ಲಿ ಯಾವುದೇ ಸ್ಟಾರ್ ಆಟಗಾರರು ಇಲ್ಲದೇ ಹೋದರೂ ತಾವೇ ಬ್ಯಾಟಿಂಗ್ ಜವಾಬ್ದಾರಿ ಹೊತ್ತು ವಾರ್ನರ್ ರನ್ ಗಳಿಕೆಗೆ ಮುಂದಾದರು. ಅದರಂತೆ ತಾವೂ ಸೇರಿದಂತೆ ತಂಡದ ಕೆಲ ಆಟಗಾರರು ನಿರ್ಣಾಯಕ ಘಟ್ಟದಲ್ಲಿ ಉತ್ತಮ ಆಡುವುದರೊಂದಿಗೆ ತಂಡ 200ರ ಗಡಿ ದಾಟಿತ್ತು.
ಬಳಿಕ ಬೌಲಿಂಗ್ ನಲ್ಲಿ ಆರಂಭದಲ್ಲಿ ವಿಫಲರಾದರೂ, ಅಗತ್ಯ ಬಿದ್ದ ಸಂದರ್ಭದಲ್ಲಿ ಬೌಲರ್ ಗಳ ಬದಲಾವಣೆ ಮಾಡುವ ಮೂಲಕ ಆರ್ ಸಿಬಿ ಆರಂಭಿಕರ ವಿಕೆಟ್ ಕೆಡವಿದರು. ಇದಕ್ಕೆ ಸ್ಪಷ್ಟ ಉದಾಹರಣೆ ಎಂದರೆ ಕ್ರಿಸ್ ಗೇಯ್ಲ್ ಔಟಾದ ಪರಿ. ಭರ್ಜರಿ ಹೊಡೆತಗಳನ್ನು ಸಿಡಿಸುತ್ತಿದ್ದ ಆರ್ ಸಿಬಿ ಆಟಗಾರ ಕ್ರಿಸ್ ಗೇಯ್ಲ್ ಅಪಾಯಕಾರಿಯಾಗುತ್ತಿದ್ದಾರೆ ಎಂಬ ಮುನ್ಸೂಚನೆ ಪಡೆದ ವಾರ್ನರ್ ಕೂಡಲೇ ಸ್ಟ್ರಾಟೆಜಿಕ್ ಟೈಮ್ ಔಟ್ ಪಡೆದು, ಬೌಲಿಂಗ್ ರಣತಂತ್ರ ರೂಪಿಸಿದರು. ಇದರ ಫಲವೇನೋ ಎಂಬಂತೆ 76 ರನ್ ಸಿಡಿಡಿ ಶತಕದತ್ತ ಮುನ್ನುಗ್ಗುತ್ತಿದ್ದ ಕ್ರಿಸ್ ಗೇಯ್ಲ್ ಕಟ್ಟಿಂಗ್ ಬೌಲಿಂಗ್ ನಲ್ಲಿ ದೊಡ್ಡ ಹೊಡೆತಕ್ಕೆ ಕೈಹಾಕಿ ಬಿಪುಲ್ ಶರ್ಮಾಗೆ ಕ್ಯಾಚ್ ನೀಡಿ ಹೊರ ನಡೆದರು.
ಬಳಿಕ ವಿರಾಟ್ ಕೊಹ್ಲಿ ಕೂಡ ಕೆಲ ಭರ್ಜರಿ ಬೌಂಡರಿಗಳ ಮೂಲಕ ಅರ್ಧಶತಕ ದಾಖಲಿಸಿ ಅಪಾಯಕಾರಿಯಾಗುವ ಮುನ್ಸೂಚನೆ ನೀಡಿದರು. ಆಗ ಮತ್ತೆ ಬೌಲಿಂಗ್ ನಲ್ಲಿ ಬದಲಾವಣೆ ತಂದ ವಾರ್ನರ್ ಸ್ರಾನ್ ಕೈಗೆ ಬಾಲ್ ನೀಡಿದರು. 13ನೇ ಓವರ್ ಎಸೆದ ಸ್ರಾನ್ ಅಂತಿಮ ಎಸೆತದಲ್ಲಿ ಕೊಹ್ಲಿ ಅವರನ್ನು ಕ್ಲೀನ್ ಬೋಲ್ಡ್ ಮಾಡುವಲ್ಲಿ ಯಶಸ್ವಿಯಾದರು. ಈ ಹಂತದಲ್ಲಿ ಭುವನೇಶ್ವರ್ ಕುಮಾರ್ ಮತ್ತು ಮುಸ್ತಫಿಜುರ್ ವಿಕೆಟ್ ಪಡೆಯದೇ ಇದ್ದರೂ ಉತ್ತಮ ಬೌಲಿಂಗ್ ಮಾಡುತ್ತಿದ್ದರು. ತಮ್ಮ ಲೈನ್ ಅಂಡ್ ಲೆಂತ್ ಮೂಲಕ ಆರ್ ಸಿಬಿ ರನ್ ಗಳಿಕೆಗೆ ಕಡಿವಾಣ ಹಾಕಿದ್ದರು. ಹೀಗಾಗಿ ಇವರ ಸಾಮರ್ಥ್ಯ ಅರಿತಿದ್ದ ವಾರ್ನರ್ ಸ್ಲಾಗ್ ಓವರ್ ಗಳಿಗಾಗಿ ಈ ಜೋಡಿ ಬಾಕಿ ಓವರ್ ಗಳನ್ನು ಉಳಿಸಿಕೊಳ್ಳುವ ಮೂಲಕ ಅಂತಿಮ ಹಂತದ ಓವರ್ ಗಳನ್ನು ಈ ಜೋಡಿಗೆ ನೀಡಿದರು. ಇನ್ನು ಆಲ್ರೌಂಡರ್ಗಳಾದ ಹೆನ್ರಿಕ್ಸ್ ಹಾಗೂ ಬೆನ್ ಕಟ್ಟಿಂಗ್, ತಂಡದ ಆಯ್ಕೆಯಲ್ಲಿ ವಾರ್ನರ್ ತೋರಿದ ಸ್ಥಿರತೆ ಗೆಲುವಿಗೆ ಕಾರಣವಾದ ಅಂಶಗಳು.
ಒಟ್ಟಾರೆ ಇಡೀ ಟೂರ್ನಿಯಲ್ಲಿ ನಾಯಕನ ಜವಾಬ್ದಾರಿಯೊಂದಿಗೆ ಆರಂಭಿಕ ಬ್ಯಾಟ್ಸಮನ್ ಜವಾಬ್ದಾರಿ ಹೊತ್ತಿದ್ದ ವಾರ್ನರ್ ಕೆಲಸ ನಿಜಕ್ಕೂ ಸವಾಲಿನದಾಗಿತ್ತು. ಅದನ್ನು ಮೆಟ್ಟಿನಿಂತ ವಾರ್ನರ್ ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಒಟ್ಟು 17 ಪಂದ್ಯ 60.57 ಸರಾಸರಿ ಮತ್ತು 151.52 ಸ್ಟ್ರೈಕ್ ರೇಟ್ ನಲ್ಲಿ 848 ರನ್ ಗಳಿಸಿದ್ದಾರೆ. ಆ ಮೂಲಕ ಟೂರ್ನಿಯಲ್ಲಿ ಅತ್ಯಧಿಕ ರನ್ ಗಳಿಸಿದ ಬ್ಯಾಟ್ಸಮನ್ ಗಳ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ. ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ಮೊದಲ ಸ್ಥಾನದಲ್ಲಿದ್ದಾರೆ.
Advertisement