ಇದೇ ವಿಚಾರಕ್ಕೆ ಸಂಬಂಧಿಸಿದಂತೆ ದಿನದಾಟದ ಅಂತ್ಯದ ಬಳಿಕ ಮಾತನಾಡಿ ಇಂಗ್ಲೆಂಡ್ ವೇಗಿ ಜೇಮ್ಸ್ ಆ್ಯಂಡರ್ಸನ್, ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅದ್ಭುತ ಆಟವನ್ನೇನೂ ಆಡಲಿಲ್ಲ, ಸ್ಲಿಪ್ ಕ್ಷೇತ್ರರಕ್ಷಕರು ಕ್ಯಾಚ್ ಕೈಚೆಲ್ಲಿದ್ದು ತಮ್ಮ ತಂಡಕ್ಕೆ ಮುಳುವಾಗಿದೆ ಎಂದು ಹೇಳಿದ್ದಾರೆ. '21ರನ್ ಗಳಿಸಿದ್ದ ವೇಳೆ ಕೊಹ್ಲಿ ಕ್ಯಾಚ್ ಅನ್ನು ಬಿಟ್ಟಿದ್ದು ಪ್ರಮಾದವಾಯಿತು. ಅವರು ಜಗತ್ತಿನ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಈ ರೀತಿಯ ಅವಕಾಶಗಳನ್ನು ಅವರು ಬಳಸಿಕೊಳ್ಳಲಿದ್ದಾರೆ. ಕ್ಯಾಚ್ ಪಡೆದಿದ್ದರೆ, ನಾವೀಗ ಇನ್ನಷ್ಟು ಉತ್ತಮ ಪರಿಸ್ಥಿತಿಯಲ್ಲಿ ಇರುತ್ತಿದ್ದೆವು. ಕ್ರಿಕೆಟ್ ಜಗತ್ತಿನಲ್ಲಿ ಯಾರೂ ಅಜೇಯರಲ್ಲ, ಅವರ ವಿಕೆಟ್ ಅನ್ನು ಪಡೆಯಬಹುದಾಗಿದೆ' ಎಂದು ಆ್ಯಂಡರ್ಸನ್ ತಿಳಿಸಿದ್ದಾರೆ.