ಮೆಲ್ಬರ್ನ್: ಭಾನುವಾರ ವಿಶ್ವದೆಲ್ಲೆಡೆ ಆಚರಿಸಲಾಗುತ್ತಿರುವ ಮಹಿಳಾ ದಿನದ ನಡುವೆಯೇ ಅತ್ತ ಎಂಸಿಜಿ ಮೈದಾನದಲ್ಲಿ ಭಾರತ ಮತ್ತು ಆಸ್ಟ್ಪೇಲಿಯಾದ ವನಿತೆಯರ ತಂಡಗಳು ಐಸಿಸಿ ಮಹಿಳಾ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿವೆ.
ಇದೇ ಮೊದಲ ಬಾರಿಗೆ ಭಾರತದ ಮಹಿಳಾ ಕ್ರಿಕೆಟ್ ತಂಡವು ವನಿತೆಯರ ಟ್ವೆಂಟಿ–20 ವಿಶ್ವಕಪ್ ಟೂರ್ನಿಯ ಫೈನಲ್ ಪ್ರವೇಶ ಮಾಡಿದ್ದು, ನಾಲ್ಕು ಬಾರಿಯ ಚಾಂಪಿಯನ್, ಆತಿಥೇಯ ಆಸ್ಟ್ರೇಲಿಯಾ ತಂಡದ ಎದುರು ಪ್ರಶಸ್ತಿಗಾಗಿ ಹಣಾಹಣಿ ನಡೆಸಲಿದೆ. ಕಳೆದ ಬಾರಿಯ ಟೂರ್ನಿಯಲ್ಲಿ ಸೆಮಿಫೈನಲ್ನಲ್ಲಿ ಆಸಿಸ್ ವಿರುದ್ಧ ಸೋತಿದ್ದ ಭಾರತವು ಈ ಬಾರಿ ಎ ಗುಂಪಿನಲ್ಲಿ ಎಲ್ಲ ನಾಲ್ಕು ಪಂದ್ಯಗಳನ್ನು ಗೆದ್ದು ನಾಲ್ಕರ ಘಟ್ಟ ಪ್ರವೇಶಿಸಿತ್ತು. ಇಂಗ್ಲೆಂಡ್ ಜೊತೆ ಆಡಲು ಸಿದ್ಧವಾಗಿತ್ತು. ಆದರೆ ಮಳೆ ಸುರಿದ ಕಾರಣ ಪಂದ್ಯ ರದ್ದಾಯಿತು. ಹರ್ಮನ್ಪ್ರೀತ್ ಕೌರ್ ಬಳಗವು ಗುಂಪು ಹಂತದ ಪಾಯಿಂಟ್ಸ್ ಆಧಾರದಲ್ಲಿ ಫೈನಲ್ ಪ್ರವೇಶಿಸಿತು. ಇನ್ನೊಂದು ಸೆಮಿ ಪೈನಲ್ ನಲ್ಲಿ ದಕ್ಷಿಣ ಆಫ್ರಿಕಾದ ಕಠಿಣ ಪೈಪೋಟಿಯನ್ನು ಮೆಟ್ಟಿ ನಿಂತ ‘ಹಾಲಿ ಚಾಂಪಿಯನ್’ ಆಸ್ಟ್ರೇಲಿಯಾ ಆರನೇ ಸಲ ಫೈನಲ್ಗೆ ಲಗ್ಗೆ ಇಟ್ಟಿತು.
ಇನ್ನು ಈ ಹಿಂದೆ ಗ್ರೂಪ್ ಸ್ಟೇಜ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಭಾರತ ಸೋಲಿನ ರುಚಿ ತೋರಿಸಿತ್ತು. ಹೀಗಾಗಿ ಇಂದು ಮೆಗ್ ಲ್ಯಾನಿಂಗ್ ಸೋಲಿನ ಸೇಡು ತೀರಿಸಿಕೊಂಡು ಪ್ರಶಸ್ತಿ ಪಡೆಯುವ ಹುಮ್ಮಸ್ಸಿನಲ್ಲಿದೆ. ಅಂತೆಯೇ ಆಸಿಸ್ ತಂಡವನ್ನು ಒಂದು ಪಂದ್ಯದಲ್ಲಿ ಸೋಲಿಸಿರುವ ಮತ್ತು ಟೂರ್ನಿಯಲ್ಲಿ ಅಜೇಯವಾಗಿಳಿದು ವಿಶ್ವಾಸ ಹೆಚ್ಚಿಸಿಕೊಂಡಿರುವ ಭಾರತ ತಂಡ ಈ ಪಂದ್ಯವನ್ನೂ ಗೆದ್ದು ಭಾರತಕ್ಕೆ ಮೊಟ್ಟ ಮೊದಲ ಟಿ20 ವಿಶ್ವಕಪ್ ತರುವ ವಿಶ್ವಾಸ ಹೊಂದಿದೆ.
ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಭರ್ಜರಿ ಫಾರ್ಮ್ ನಲ್ಲಿರುವುದು ಭಾರತದ ವಿಶ್ವಾಸವನ್ನು ಇಮ್ಮಡಿಗೊಳಿಸಿದೆಯಾದರೂ, ಮತ್ತು ಸ್ಮೃತಿ ಮಂದಾನ, ನಾಯಕಿ ನಾಯಕಿ ಹರ್ಮನ್ಪ್ರೀತ್ ಕೌರ್ ಅವರ ಬ್ಯಾಟ್ನಿಂದ ರನ್ಗಳು ಹರಿಯುತ್ತಿಲ್ಲ. ಸ್ಮೃತಿ ಮೂರು ಪಂದ್ಯಗಳಿಂದ ಕೇವಲ 38 ರನ್ ಗಳಿಸಿದ್ದಾರೆ. ಹರ್ಮನ್ ನಾಲ್ಕು ಪಂದ್ಯಗಳಿಂದ ಒಟ್ಟು 26 ರನ್ಗಳನ್ನು ಮಾತ್ರ ಸೇರಿಸಿದ್ದಾರೆ. ಇಂದು ಈ ಇಬ್ಬರೂ ಸ್ಟಾರ್ ಆಟಗಾರ್ತಿಯರೂ ಫಾರ್ಮ್ ಕಂಡುಕೊಂಡರೆ ಭಾರತಕ್ಕೆ ಆನೆ ಬಲ ಬಂದಂತಾಗುತ್ತದೆ. ಇತ್ತ ಬೌಲಿಂಗ್ ವಿಭಾಗದಲ್ಲಿ ಸ್ಪಿನ್ನರ್ ಪೂನಂ ಯಾದವ್, ರಾಧಾ ಯಾದವ್ ಮತ್ತು ರಾಜೇಶ್ವರಿ ಗಾಯಕವಾಡ್ ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದಾರೆ. ಇನ್ನು ಮಧ್ಯಮವೇಗಿಗಳಾದ ದೀಪ್ತಿ ಶರ್ಮಾ ಮತ್ತು ಶಿಖಾ ಪಾಂಡೆ ಕೂಡ ಎದುರಾಳಿಗಳಿಗೆ ಸವಾಲೊಡ್ಡುವ ಚಾಣಾಕ್ಷ ಬೌಲರ್ಗಳಾಗಿದ್ದಾರೆ.
ಇನ್ನು ಎಂಸಿಜಿ ಪಿಚ್ ಕುರಿತು ಹೇಳುವುದಾದರೆ, ಇಲ್ಲಿಯ ಸಪಾಟಾದ ಪಿಚ್ನಲ್ಲಿ ಹೆಚ್ಚು ರನ್ ಗಳನ್ನು ಗಳಿಸುವ ಅವಕಾಶ ಇದೆ. ಆದ್ದರಿಂದ ಬೌಲರ್ಗಳಿಗೆ ದೊಡ್ಡ ಸವಾಲಾಗುವುದು ಖಚಿತ. ಅಲ್ಲದೇ ಮಧ್ಯಮವೇಗಿಗಳಿಗೆ ಹೆಚ್ಚು ಅನುಕೂಲವಾಗುವ ಸಾಧ್ಯತೆ ಇರುವುದರಿಂದ ಭಾರತದ ಬ್ಯಾಟ್ಸ್ವುಮನ್ಗಳು ಲಯಕ್ಕೆ ಮರಳುವ ಅಗತ್ಯವಿದೆ. ಸುಮಾರು 90 ಸಾವಿರ ಪ್ರೇಕ್ಷಕರು ಸೇರುವ ನಿರೀಕ್ಷೆ ಇದ್ದು, ಏಕಾಗ್ರತೆಯನ್ನು ಕಾಪಾಡಿಕೊಂಡು ಆಡುವ ಸವಾಲು ಉಭಯ ತಂಡಗಳಿಗೂ ಇದೆ.
Advertisement