ಆಕ್ಲೆಂಡ್: ಭಾರತದ ಯಾರ್ಕರ್ ಸ್ಪೆಷಲಿಸ್ಟ್ ಜಸ್ ಪ್ರೀತ್ ಬುಮ್ರಾಗೆ ಏನಾಯ್ತು...? ಇಂತಹುದೊಂದು ಪ್ರಶ್ನೆಯನ್ನು ಅಭಿಮಾನಿಗಳು ಕೇಳುತ್ತಿದ್ದು.. ಇದಕ್ಕೆ ಕಾರಣ ಅವರ ಇತ್ತೀಚೆಗಿನ ಪ್ರದರ್ಶನ..
ಹೌದು.. ಗಾಯಗೊಂಡು ತಂಡದಿಂದ ದೂರ ಉಳಿದಿದ್ದ ಜಸ್ ಪ್ರೀತ್ ಬುಮ್ರಾ, ತಂಡಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆಯಾದರೂ ಅವರ ಪ್ರದರ್ಶನದಲ್ಲಿ ಸಾಕಷ್ಟು ಬದಲಾವಣೆ ಕಂಡು ಬಂದಿದೆ. ಗಾಯಗೊಳ್ಳುವುದಕ್ಕೂ ಮುನ್ನ ಬುಮ್ರಾ ಅವರ ಬೌಲಿಂಗ್ ನಲ್ಲಿ ಮೊನಚು ಈಗ ಕಾಣುತ್ತಿಲ್ಲ ಎಂದು ಕ್ರಿಕೆಟ್ ಪಂಡಿತರು ಅಭಿಪ್ರಾಯಪಡುತ್ತಿದ್ದಾರೆ. ಇದಕ್ಕೆ ಇಂಬು ನೀಡುವಂತೆ ಅಂಕಿ ಅಂಶಗಳೂ ಕೂಡ ಇದ್ದು, ಗಾಯದ ಬಳಿಕ ಬುಮ್ರಾ ಏಕೋ ಮಂಕಾಗಿದ್ದಾರೆ.
ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಿನ ಸರಣಿ ಸೇರಿದಂತೆ ಬುಮ್ರಾ ಗಾಯದ ಬಳಿಕ ಒಟ್ಟು ಐದು ಏಕದಿನ ಪಂದ್ಯಗಳನ್ನಾಡಿದ್ದು, 5.13 ಸರಾಸರಿಯಲ್ಲಿ ಬೌಲಿಂಗ್ ಮಾಡಿದ್ದಾರೆ. ಈ ಐದೂ ಪಂದ್ಯಗಳಿಂದ ಬುಮ್ರಾ ಗಳಿಸಿರುವುದು ಕೇವಲ ಒಂದೇ ಒಂದು ವಿಕೆಟ್.. ಕಳೆದ ಮೂರು ಏಕದಿನ ಪಂದ್ಯಗಳಿಂದ ಬುಮ್ರಾ ಒಂದೇ ಒಂದು ವಿಕೆಟ್ ಪಡೆದಿಲ್ಲ. ಬುಮ್ರಾ ಕ್ರಿಕೆಟ್ ವೃತ್ತಿ ಜೀವನದಲ್ಲೇ ಸತತ ಮೂರು ಪಂದ್ಯಗಳಲ್ಲಿ ವಿಕೆಟ್ ಪಡೆಯದೇ ಇರುವುದು ಇದೇ ಮೊದಲು. ಇದು ಅವರ ಪ್ರದರ್ಶನ ಮಂಕಾಗಿರುವುದಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ. ಇದೇ ಕಾರಣಕ್ಕೆ ಅಭಿಮಾನಿಗಳು ಭಾರತದ ಯಾರ್ಕರ್ ಸ್ಪೆಷಲಿಸ್ಟ್ ಗೆ ಏನಾಗಿದೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ಒಟ್ಟಾರೆ ಗಾಯದ ಬಳಿಕ ಬುಮ್ರಾ ತಂಡಕ್ಕೆ ವಾಪಸ್ ಆಗಿರುವುದು ಖುಷಿಯ ವಿಚಾರವೇ ಆದರೂ, ಬುಮ್ರಾ ಶೀಘ್ರವೇ ತಮ್ಮ ಹಳೆಯ ಫಾರ್ಮ್ ಗೆ ಮರಳಲಿ. ತಮ್ಮ ಮೊನಚಾದ ಬೌಲಿಂಗ್ ದಾಳಿ ಮೂಲಕ ಎದುರಾಳಿಗಳ ಕಟ್ಟಿ ಹಾಕಲಿ ಎಂಬುದು ನಮ್ಮ ಆಶಯ...
Advertisement