ದುಬೈ: ಐಸಿಸಿ ವಿಶ್ವಕಪ್ ಟೂರ್ನಿಯ ಮೊದಲ ಹೈವೋಲ್ಟೇಜ್ ಪಂದ್ಯ ಎಂದೇ ಕರೆಯಲಾಗುತ್ತಿದ್ದ ಭಾರತ-ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಭಾರತ 10 ವಿಕೆಟ್ ಗಳ ಅಂತರದ ಹೀನಾಯ ಸೋಲುಕಂಡಿದ್ದು, ಆ ಮೂಲಕ ವಿಶ್ವಕಪ್ ನಲ್ಲಿ ಪಾಕಿಸ್ತಾನದ ವಿರುದ್ಧದ ತನ್ನ 'ಅಜೇಯ' ಎಂಬ ಹಿರಿಮೆಯನ್ನು ಕಳೆದುಕೊಂಡಿದೆ. ಭಾರತ ಸೋಲಿಗೆ ಕಾರಣವಾದ ಅಂಶಗಳಾದರೂ ಏನು?
ಟಾಸ್
ಸಾಮಾನ್ಯವಾಗಿ ಯಾವುದೇ ಕ್ರಿಕೆಟ್ ಪಂದ್ಯದಲ್ಲಿ ಟಾಸ್ ಪ್ರಮುಖವಾಗುತ್ತದೆ. ನಿನ್ನೆ ಭಾರತ-ಪಾಕ್ ಪಂದ್ಯದಲ್ಲೂ ಟಾಸ್ ಮಹತ್ತರ ಪಾತ್ರವಹಿಸಿತ್ತು. ಟಾಸ್ ಗೆದ್ದ ಪಾಕಿಸ್ತಾನ ಪಿಚ್ ಕಂಡೀಷನ್ ಗೆ ಅನುಗುಣವಾಗಿ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಟೀಂ ಇಂಡಿಯಾವನ್ನು 151 ರನ್ ಗಳಿಗೆ ಕಟ್ಟಿಹಾಕಿದರು.
ಅಗ್ರ ಕ್ರಮಾಂಕದ ವೈಫಲ್ಯ
ಟೀಂ ಇಂಡಿಯಾ ಯಶಸ್ಸಿನ ಮೂಲ ಅದು ಬಲಿಷ್ಠ ಬ್ಯಾಟಿಂಗ್ ಪಡೆ. ಆದರೆ ನಿನ್ನೆಯ ಪಂದ್ಯದಲ್ಲಿ ಇದೇ ಬಲಿಷ್ಠ ಬ್ಯಾಟಿಂಗ್ ಪಡೆ ಸಂಪೂರ್ಣ ವಿಫಲವಾಗಿತ್ತು. ರೋಹಿತ್ ಶರ್ಮಾ ಶೂನ್ಯ ಸುತ್ತಿದರೆ, ಕೆಎಲ್ ರಾಹುಲ್ ವಿವಾದಾತ್ಮವಾಗಿ ಔಟ್ ಆದರು. ಸೂರ್ಯ ಕುಮಾರ್ ಯಾದವ್ ಆನಾವಶ್ಯಕವಾಗಿ ಗ್ಲಾಮರ್ ಶಾಟ್ ಗೆ ಮುಂದಾಗಿ ಹಸನ್ ಅಲಿಗೆ ವಿಕೆಟ್ ಒಪ್ಪಿಸಿದರು. ಕ್ಯಾಪ್ಟನ್ ಕೊಹ್ಲಿಗೆ ಉತ್ತಮ ಸಾಥ್ ನೀಡುತ್ತಿದ್ದ ಪಂತ್ ಕೂಡ 39 ರನ್ ಗಳಿಸಿದ್ದ ವೇಳೆ ತಾಳ್ಮೆ ಕಳೆದುಕೊಂಡು ಶಾದಾಬ್ ಖಾನ್ ಎಸೆದ ಅದ್ಬುತ ಎಸೆತಕ್ಕೆ ಬಲಿಯಾದರು. ಅಂತಿಮ ಹಂತದಲ್ಲಿ ಕೆಳ ಕ್ರಮಾಂಕದ ಬ್ಯಾಟರ್ ಗಳು ಒತ್ತಡದಲ್ಲಿದ್ದ ಕಾರಣ ನಿರೀಕ್ಷಿತ ಪ್ರಮಾಣದಲ್ಲಿ ರನ್ ಗಳು ಬರಲಿಲ್ಲ.
ಪಾಕಿಸ್ತಾನದ ಫೀಲ್ಡಿಂಗ್
ಇನ್ನು ನಿನ್ನೆಯ ಪಂದ್ಯದಲ್ಲಿ ಪಾಕ್ ನಾಯಕ ಬಾಬರ್ ಅಜಂ ಆನ್ ಫೀಲ್ಜ್ ಫೀಲ್ಡಿಂಗ್ ಸೆಟಪ್ ತುಂಬಾ ಅಚ್ಚುಕಟ್ಟಾಗಿ ಮಾಡಿದ್ದರು. ಟೀಂ ಇಂಡಿಯಾದ ಫೆವರಿಟ್ ರನ್ ಸ್ಪಾಟ್ ಆಫ್ ಸೈಡ್ ಮತ್ತು ಲೆಗ್ ಸೈಡ್ ನಲ್ಲಿ ಪ್ರಮುಖ ಫೀಲ್ಜರ್ ಗಳನ್ನು ಇಟ್ಟು ಅಲ್ಲಿ ಹೆಚ್ಚು ರನ್ ಗಳು ಹರಿಯದಂತೆ ಚಾಣಾಕ್ಷತೆ ತೋರಿದರು. ಅಲ್ಲದೆ ಬೌಲರ್ ಗಳೂ ಕೂಡ ಅವರಿಗೆ ಉತ್ತಮ ಸಾಥ್ ನೀಡಿ ಭಾರತದ ಬ್ಯಾಟರ್ ಗಳನ್ನು ಕೆಣಕುವ ಅಥವಾ ರಕ್ಷಣಾತ್ಮಕವಾಗಿ ಆಡುವ ಎಸೆತಗಳನ್ನಷ್ಟೇ ಹಾಕುತ್ತಿದ್ದರು.
ಕೈ ಕೊಟ್ಟ ಕೊಹ್ಲಿ ಆನ್ ಫೀಲ್ಡ್ ಫೀಲ್ಡಿಂಗ್ ಸೆಟಪ್
ಭಾರತ ನೀಡಿದ 151 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಪಾಕಿಸ್ತಾನಕ್ಕೆ ಪಂದ್ಯದ ಯಾವುದೇ ಹಂತದಲ್ಲೂ ಈ ಗುರಿ ಸವಾಲಿನದ್ದು ಎನಿಸಲೇ ಇಲ್ಲ. ಕಾರಣ ಪಾಕ್ ನಾಯಕ ಬಾಬರ್ ಅಜಂ ಮತ್ತು ರಿಜ್ವಾನ್ ರ ಸಮಯೋಚಿತ ಬ್ಯಾಟಿಂಗ್. ಇಬ್ಬರೂ ಆಟಗಾರರು ಶತಾಯಗತಾಯ ವಿಕೆಟ್ ಕೊಡಬಾರದು ಎಂದು ಗಟ್ಟಿ ನಿರ್ಧಾರ ಮಾಡಿಯೇ ಕ್ರೀಸ್ ಗೆ ಬಂದಂತ್ತಿತ್ತು. ಅದಕ್ಕೆ ಇಂಬು ನೀಡುವಂತೆ ಭಾರತ ಫೀಲ್ಡಿಂಗ್ ಸೆಟಪ್ ಕೂಡ ಸಮಾಧಾನಕರವಾಗಿರಲಿಲ್ಲ. ಫೀಲ್ಡಿಂಗ್ ಸೆಟಪ್ ನಲ್ಲಿ ಕೊಹ್ಲಿ ಗೊಂದಲಕ್ಕೀಡಾಗಿದ್ದ ಪರಿಸ್ಥಿತಿ ಹಲವು ಬಾರಿ ಕಂಡುಬಂತು. ಆಗಾಗ ಬೌಲರ್ ಗಳ ಬದಲಾವಣೆ, ಎಸೆತದಿಂದ ಎಸೆತಕ್ಕೆ ಫೀಲ್ಡಿಂಗ್ ನಲ್ಲಿ ಬದಲಾಣೆ ಅವರ ಗೊಂದಲಕ್ಕೆ ಸಾಕ್ಷಿ ಎಂಬಂತಿತ್ತು.
ಭಾರತೀಯ ಬೌಲರ್ ಗಳ 'ಶಾರ್ಟ್ ಪಿಚ್' ಮೋಹ
ಇನ್ನು ಒಂದೆಡೆ ಪಾಕಿಸ್ತಾನದ ಇಬ್ಬರು ಅಗ್ರ ಕ್ರಮಾಂಕದ ಆಟಗಾರರು ಯಾವುದೇ ಒತ್ತಡವಿಲ್ಲದೇ ಆಡುತ್ತಿದ್ದರೆ ಇತ್ತ ಅಕ್ಷರಶಃ ಒತ್ತಡದಲ್ಲಿದ್ದ ಭಾರತೀಯ ಬೌಲರ್ ಗಳು ಆಗಾಗ ಲಯ ತಪ್ಪಿ 'ಶಾರ್ಟ್ ಪಿಚ್' ದಂಡನೆಗೆ ಗುರಿಯಾಗುತ್ತಿದ್ದರು. ಪ್ರಮುಖವಾಗಿ ವರುಣ್ ಚಕ್ರವರ್ತಿ, ಭುವನೇಶ್ವರ್ ಕುಮಾರ್ ಮತ್ತು ಶಮಿ ಹೆಚ್ಚು ರನ್ ನೀಡಿದ್ದೇ ಈ ಶಾರ್ಟ್ ಪಿಚ್ ಎಸೆತಗಳಿಗೆ.. ಪಂದ್ಯ ನಿರ್ಣಾಯಕ ಹಂತ ತಲುಪಿದ್ದಾಗ ಟೀಂ ಇಂಡಿಯಾ ಬೌಲರ್ ಗಳು ಎಸೆದ ಕೆಲವೇ ಶಾರ್ಟ್ ಪಿಚ್ ಗಳು ಅವರಿಗೆ ದುಬಾರಿಯಾಗಿ ಪರಿಣಮಿಸಿದವು.
ಇಬ್ಬನಿ
ದುಬೈ ಕ್ರೀಡಾಂಗಣದಲ್ಲಿ ಭಾರತದ ಸೋಲಿಗೆ ಮಹತ್ತರ ಕಾರಣವಾಗಿದ್ದು ಇಬ್ಬನಿ.. ಭಾರತದ ಬ್ಯಾಟಿಂಗ್ ವೇಳೆ ಹೊಸ ಚೆಂಡನ್ನು ಟಿ ಟ್ವೆಂಟಿ ಪಂದ್ಯಗಳಲ್ಲಿ ಯಾವ ರೀತಿ ಉಪಯೋಗಿಸಬೇಕೋ ಅದನ್ನು ಶಾಹಿನ್ ಅಫ್ರಿದಿ ಯಶಸ್ವಿಯಾಗಿ ಮಾಡಿದರು. ಹೊಸ ಚೆಂಡನ್ನು ಬಳಸಿ ಚಾಣಾಕ್ಷತನದಿಂದ ವಿಕೆಟ್ ಕಬಳಿಸಿದರು. ಆದರೆ ಪಾಕಿಸ್ತಾನದ ಬ್ಯಾಟಿಂಗ್ ವೇಳೆ ಭಾರತೀಯ ಬೌಲರ್ ಗಳಿಗೆ ಇಬ್ಬನಿ ಭಾರಿ ತೊಂದರೆ ನೀಡಿತು. ಇಬ್ಬನಿಯ ತೊಂದರೆ ಇದ್ದ ಕಾರಣ ಬೌಲರ್ ಗಳ ಕೈ ಜಾರುತ್ತಿತ್ತು. ಹೀಗಾಗಿ ಬೌಲಿಂಗ್ ಪರಿಣಾಮಕಾರಿಯಾಗಿರಲಿಲ್ಲ.
Advertisement