Ind vs Aus T20: ನಾಯಕನಾಗಿ ಮೊದಲ ಪಂದ್ಯ ಗೆದ್ದ ಬಳಿಕ ಸೂರ್ಯಕುಮಾರ್ ಹೇಳಿದ್ದೇನು?

ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟರ್ ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ ಮತ್ತು ರಿಂಕು ಸಿಂಗ್ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಭಾರತ ಗೆಲುವು ಸಾಧಿಸಿದೆ. ತಾವು ನಾಯಕನಾಗಿರುವ ಮೊದಲ ಪಂದ್ಯದಲ್ಲಿ ದೇಶವನ್ನು ಗೆಲುವಿನತ್ತ ಕೊಂಡೊಯ್ಯುವುದು 'ಹೆಮ್ಮೆ' ಎಂದು ಸೂರ್ಯಕುಮಾರ್ ಹೇಳಿದ್ದಾರೆ.
ಟೀಂ ಇಂಡಿಯಾದ ನಾಯಕ ಸೂರ್ಯಕುಮಾರ್ ಯಾದವ್
ಟೀಂ ಇಂಡಿಯಾದ ನಾಯಕ ಸೂರ್ಯಕುಮಾರ್ ಯಾದವ್

ವಿಶಾಖಪಟ್ಟಣಂ: ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟರ್ ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ ಮತ್ತು ರಿಂಕು ಸಿಂಗ್ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಭಾರತ ಗೆಲುವು ಸಾಧಿಸಿದೆ. ತಾವು ನಾಯಕನಾಗಿರುವ ಮೊದಲ ಪಂದ್ಯದಲ್ಲಿ ದೇಶವನ್ನು ಗೆಲುವಿನತ್ತ ಕೊಂಡೊಯ್ಯುವುದು 'ಹೆಮ್ಮೆ' ಎಂದು ಸೂರ್ಯಕುಮಾರ್ ಹೇಳಿದ್ದಾರೆ.

ಸೂರ್ಯಕುಮಾರ್ ಯಾದವ್ ಅವರು 42 ಎಸೆತಗಳಲ್ಲಿ 9 ಬೌಂಡರಿ ಮತ್ತು 4 ಸಿಕ್ಸರ್ ಸಿಡಿಸುವ ಮೂಲತ 80 ರನ್ ಗಳಿಸಿದರು. ಇಶಾನ್ ಕಿಶನ್ ಅವರೊಂದಿಗೆ 112 ರನ್ ಜೊತೆಯಾಟವಾಡಿದರು. ಗುರುವಾರ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾದ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಭಾರತ ಎರಡು ವಿಕೆಟ್‌ಗಳ ರೋಚಕ ಜಯ ಸಾಧಿಸಿತು.

ಭಾನುವಾರ ನಡೆದ ಆಸ್ಟ್ರೇಲಿಯಾ ವಿರುದ್ಧದ ವಿಶ್ವಕಪ್ ಫೈನಲ್‌ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಅವರು ಕೇವಲ 18 ರನ್‌ಗಳ ಕೊಡುಗೆ ನೀಡಿದ್ದರು. ಈ ಮೂಲಕ ಭಾರತ ಆರು ವಿಕೆಟ್‌ಗಳಿಂದ ಸೋಲು ಕಂಡಿತ್ತು.

ಗಾಯಾಳು ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಿದ ಸೂರ್ಯಕುಮಾರ್ ಅವರು, ಐದು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಲು ಸಹಾಯ ಮಾಡಿದರು. ಆಸ್ಟ್ರೇಲಿಯಾದ ಜೋಶ್ ಇಂಗ್ಲಿಸ್ ತಮ್ಮ ಚೊಚ್ಚಲ ಟಿ20 ಶತಕ ಸಿಡಿಸಿ ಮಿಂಚಿದರು. 50 ಎಸೆತಗಳಲ್ಲಿ 11 ಬೌಂಡರಿ 8 ಸಿಕ್ಸರ್ ಸಿಡಿಸುವ ಮೂಲಕ 110 ರನ್ ಗಳಿಸಿ ಆಸ್ಟ್ರೇಲಿಯಾ ಬೃಹತ್ ಮೊತ್ತ ಪೇರಿಸಲು ಕಾರಣವಾದರು. ಭಾರತಕ್ಕೆ 209 ರನ್‌ಗಳ ಗುರಿ ನೀಡಿದ್ದರು.

ಅವರ ಈ ಆಟವನ್ನು ಒಂದೇ ಪದದಲ್ಲಿ ವಿವರಿಸಲು ಕೇಳಿದಾಗ ಉತ್ತರಿಸಿದ ಸೂರ್ಯಕುಮಾರ್, 'ಮಿಸ್ಟರ್ 360 ಡಿಗ್ರಿ', 'ನಿರ್ಭೀತಿ' ಎಂದು ಹೇಳಿದರು. ಬೃಹತ್ ಗುರಿಯನ್ನು ಬೇಧಿಸಲು ತಂಡಕ್ಕೆ ಸಹಾಯ ಮಾಡಿದ ಇಶಾನ್ ಕಿಶನ್ ಅವರನ್ನು ಶ್ಲಾಘಿಸಿದರು.

'ಇಶಾನ್ ನನಗೆ ನಿಜವಾಗಿಯೂ ಸಹಾಯ ಮಾಡಿದರು ಎಂದು ನಾನು ಭಾವಿಸುತ್ತೇನೆ. ನಾನು ನಿರ್ಭೀತಿಯಿಂದ ಆಡಲು, ಇಶಾನ್ ಅವರ ಉತ್ತಮ ಜೊತೆಯಾಟ ಬಹಳ ಮುಖ್ಯವಾಗಿತ್ತು. ಅವರ ಸ್ಟ್ರೈಕ್ ರೇಟ್ 190.47 ಚೇಸ್‌ಗೆ ಪ್ರಮುಖವಾಗಿತ್ತು' ಎಂದು ಸೂರ್ಯಕುಮಾರ್ ಹೇಳಿದರು.

8 ಎಸೆತಗಳಲ್ಲಿ 2 ಬೌಂಡರಿ 2 ಸಿಕ್ಸರ್ ಸಹಿತ 21 ರನ್ ಗಳಿಸಿ ಯಶಸ್ವಿ ಜೈಸ್ವಾಲ್ ಅವರು ಭಾರತಕ್ಕೆ ಸ್ಫೋಟಕ ಆರಂಭ ನೀಡಿದರು. ಅವರು ವಿಕೆಟ್ ಒಪ್ಪಿಸಿದ ನಂತರ ಬಂದ ರುತುರಾಜ್ ಗಾಯಕ್ವಾಡ್ ಒಂದೂ ಎಸೆತ ಎದುರಿಸದೆ ರನೌಟ್ ಆಗುವ ಮೂಲಕ ಭಾರತಕ್ಕೆ ಆರಂಭಿಕ ಆಘಾತ ನೀಡಿದರು. ನಂತರ ಬಂದ ಇಶಾನ್ ಕಿಶನ್, 39 ಎಸೆತಗಳಲ್ಲಿ 2 ಬೌಂಡರಿ 5 ಸಿಕ್ಸರ್ ಸಿಡಿಸಿ 58 ರನ್ ಗಳಿಸುವ ಮೂಲಕ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ, ರಿಂಕು ಸಿಂಗ್ 14 ಎಸೆತಗಳಲ್ಲಿ ಅಜೇಯ 22 ರನ್ ಗಳಿಸಿ ಭಾರತವನ್ನು ಗೆಲುವಿನತ್ತ ಮುನ್ನಡೆಸಿದರು.

'ಅವರು (ರಿಂಕು) ತುಂಬಾ ಶಾಂತವಾಗಿದ್ದರು ಎಂದು ನಾನು ಭಾವಿಸುತ್ತೇನೆ. ಅದು ಒತ್ತಡದ ಪರಿಸ್ಥಿತಿಯಾಗಿದ್ದರೂ, ಅವರು ಬ್ಯಾಟಿಂಗ್‌ಗೆ ಬಂದಾಗ ತುಂಬಾ ಶಾಂತರಾಗಿದ್ದರು ಮತ್ತು ಅವರು  ತೋರಿದ ಬ್ಯಾಟಿಂಗ್ ಪ್ರದರ್ಶನ ನೋಡಲು ಅದ್ಭುತವಾಗಿತ್ತು ಎಂದು ನಾನು ಭಾವಿಸುತ್ತೇನೆ' ಎಂದು ಸೂರ್ಯಕುಮಾರ್ ಬಿಸಿಸಿಐಗೆ ತಿಳಿಸಿದರು.

ಆಸ್ಟ್ರೇಲಿಯಾದ 200 ಪ್ಲಸ್ ಮೊತ್ತವನ್ನು ಕಂಡ ನಂತರ ಡ್ರೆಸ್ಸಿಂಗ್ ರೂಮ್‌ನಲ್ಲಿ ಉದ್ವಿಗ್ನ ಪರಿಸ್ಥಿತಿಯಿತ್ತೇ ಎಂಬ ಬಗ್ಗೆ ಉತ್ತರಿಸಿದ ಅವರು, 'ಸ್ವಲ್ಪ'. ಡ್ರೆಸ್ಸಿಂಗ್ ರೂಮ್‌ನಲ್ಲಿ ಅಷ್ಟೊಂದು ಉದ್ವಿಗ್ನತೆಯ ಪರಿಸ್ಥಿತಿಯಿರಲಿಲ್ಲ. ಆದರೆ, ಹುಡುಗರೆಲ್ಲರೂ ಉತ್ಸುಕರಾಗಿದ್ದರು' ಎಂದು ಹೇಳಿದರು.

'ಆಸ್ಟ್ರೇಲಿಯಾದ ಬೃಹತ್ ಮೊತ್ತವನ್ನು ಕಂಡಾಗ ಅವರು ಒಂದೇ ಒಂದು ಮಾತನ್ನು ಹೇಳಿದರು. ನಾವು ಈ ಆಟವನ್ನು ಗೆದ್ದರೆ ಅದು ನಿಜವಾಗಿಯೂ ಆನಂದದಾಯಕವಾಗಿರುತ್ತದೆ' ಎಂದು ಹೇಳಿದರು.

'ದೇಶಕ್ಕೆ ಗೆಲುವನ್ನು ತಂದುಕೊಡಲು ಹೆಮ್ಮೆಯ ಮತ್ತು ನಾಯಕನಾಗಿ ನನ್ನ ಮೊದಲ ಪಂದ್ಯದಲ್ಲಿ ಕೊಡುಗೆ ನೀಡಲು ತುಂಬಾ ಸಂತೋಷವಾಗಿದೆ. ಮುಂದಿನ ಪಂದ್ಯ ಮತ್ತು ಅದು ಹೇಗೆ ನಡೆಯುತ್ತದೆ ಎಂಬುದನ್ನು ನೋಡಲು ಎದುರು ನೋಡುತ್ತಿದ್ದೇನೆ' ಎಂದು ಸೂರ್ಯಕುಮಾರ್ ಸೇರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com