
ಬೆಂಗಳೂರು: ಹಾಲಿ ಐಪಿಎಲ್ ಟೂರ್ನಿಯಲ್ಲಿ ನಿನ್ನೆ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಡುವಿನ ಪಂದ್ಯದ ಬಳಿಕ ಮೈದಾನದ ಹೊರಗೆ ಅಭಿಮಾನಿಗಳು ಪರಸ್ಪರ ಕೈಕೈ ಮಿಲಾಯಿಸಿದ ಘಟನೆ ನಡೆದಿದೆ.
ನಿನ್ನೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 2 ರನ್ ಗಳ ವಿರೋಚಿತ ಗೆಲುವು ಸಾಧಿಸಿತು.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ ನಿಗಧಿತ 20 ಓವರ್ ನಲ್ಲಿ ಜೇಕಬ್ ಬೆಥೆಲ್ (55 ರನ್), ವಿರಾಟ್ ಕೊಹ್ಲಿ (62 ರನ್) ಮತ್ತು ರೊಮಾರಿಯೋ ಶೆಫರ್ಡ್ (ಅಜೇಯ 53 ರನ್) ಅರ್ಧಶತಕಗಳ ನೆರವಿನಿಂದ 213 ರನ್ ಗಳ ಬೃಹತ್ ಮೊತ್ತ ಪೇರಿಸಿತು.
ಈ ಗುರಿಯನ್ನು ಬೆನ್ನುಹತ್ತಿದ ಚೆನ್ನೈ ಸೂಪರ್ ಕಿಂಗ್ಸ್ ಆಯುಶ್ ಮ್ಹಾತ್ರೆ (94 ರನ್), ರವೀಂದ್ರ ಜಡೇಜಾ (77 ರನ್) ಭರ್ಜರಿ ಬ್ಯಾಟಿಗ್ ಹೊರತಾಗಿಯೂ ನಿಗಧಿತ 20 ಓವರ್ ನಲ್ಲಿ 5 ನವಿಕೆಟ್ ನಷ್ಟಕ್ಕೆ 211 ರನ್ ಗಳಿಸಿ ಕೇವಲ 2 ರನ್ ಗಳ ಅಂತರದಲ್ಲಿ ವಿರೋಚಿತ ಗೆಲುವು ಸಾಧಿಸಿತು.
ಇನ್ನು ಈ ಪಂದ್ಯದ ಬಳಿಕ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಚೆನ್ನೈ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಭಿಮಾನಿಗಳು ಗಲಾಟೆ ಮಾಡಿಕೊಂಡಿದ್ದು, ಪರಸ್ಪರ ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ. ಪೊಲೀಸರ ಮಧ್ಯಪ್ರವೇಶದ ಬಳಿಕ ಉಭಯ ತಂಡದ ಅಭಿಮಾನಿಗಳು ತಮ್ಮ ತಮ್ಮ ಮನೆಗಳಿಗೆ ಹೋಗಿದ್ದಾರೆ.
ಆರ್ ಸಿಬಿ ಪಂದ್ಯ ಗೆದ್ದ ಬಳಿಕ ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್ ಕ್ರೀಡಾಂಗಣದ ಹೊರಗೆ ಸಿಎಸ್ ಕೆ ಅಭಿಮಾನಿಯನ್ನು ಆರ್ ಸಿಬಿ ಅಭಿಮಾನಿಗಳು ಕೆಣಕಿದ್ದಾರೆ. ಈ ವೇಳೆ ಸಿಎಸ್ ಕೆ ಅಭಿಮಾನಿ ಕೆರಳಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎಂದು ಆರ್ ಸಿಬಿ ಅಭಿಮಾನಿಗಳು ಆರೋಪಿಸಿದ್ದಾರೆ.
ಇದೇ ಸಂದರ್ಭದಲ್ಲಿ ಪರಸ್ಪರರ ನಡುವೆ ವಾಗ್ವಾದ ನಡೆದಿದ್ದು, ವಾಕ್ಸಮರ ವಿಕೋಪಕ್ಕೆ ತಿರುಗಿ ಕೈಕೈ ಮಿಲಾಯಿಸಿದ್ದಾರೆ. ಈ ವೇಳೆ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ಪೊಲೀಸ್ ವಾಹನದ ಎದುರೇ, ಪೊಲೀಸರ ಸಮ್ಮುಖದಲ್ಲೇ ಇಬ್ಬರು ಅಭಿಮಾನಿಗಳು ಕಿತ್ತಾಡಿಕೊಂಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಚೆನ್ನೈ – ಆರ್ಸಿಬಿ ಅಭಿಮಾನಿಗಳ ನಡುವೆ ಈ ರೀತಿಯ ಕಿತ್ತಾಟ ಮೊದಲಲ್ಲ. ಈ ಹಿಂದೆ ಕಳೆದ ವರ್ಷದ ಎಲಿಮಿನೇಟರ್ ಪಂದ್ಯದ ಬಳಿಕವೂ ಅಭಿಮಾನಿಗಳ ನಡುವೆ ಗಲಾಟೆ ನಡೆದಿತ್ತು.
Advertisement