ಬೆಂಗಳೂರು: ಸಹಕಾರಿ ಮತ್ತು ಸಕ್ಕರೆ ಸಚಿವ ಎಚ್ ಎಸ್ ಮಹದೇವ ಪ್ರಸಾದ್ ಅವರ ಸಾವಿನ ಹಿನ್ನಲೆಯಲ್ಲಿ ಮಂಗಳವಾರ ಸರ್ಕಾರಿ ರಜೆ ಘೋಷಣೆ ಮಾಡಲಾಗಿದ್ದು, 3 ದಿನಗಳ ಕಾಲ ಶೋಕಾಚರಣೆ ಇರಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಪ್ರಸಾದ್ ಅವರ ದಿಢೀರ್ ಸಾವಿನ ಹಿನ್ನಲೆಯಲ್ಲಿ ಇಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಅಂತೆಯೇ ರಾಜ್ಯಾದ್ಯಂತ ಮೂರು ದಿನಗಳ ಕಾಲ ಶೋಕಾಚರಣೆ ಮಾಡಲಾಗುತ್ತದೆ ಎಂದು ತಿಳಿಸಿದರು. ಅಂತೆಯೇ ಇಂದು ತುರ್ತು ಸಚಿವ ಸಂಪುಟಸಭೆ ಕರೆಯಲಾಗಿದ್ದು, ಸಭೆಯಲ್ಲಿ ಪ್ರಸಾದ್ ಅವರ ಸಾವಿಗೆ ಮೌನಾಚಾರಣೆ ನಡೆಸಿ ಬಳಿಕ ಮುಂದಿನ ಕ್ರಮಗಳ ಕುರಿತು ಚರ್ಚಿಸಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಇದೇ ವೇಳೆ ಮಾತನಾಡಿದ ಗೃಹ ಸಚಿವ ಜಿ ಪರಮೇಶ್ಪರ ಅವರು, ಪ್ರಸಾದ್ ಅವರ ಸಾವಿಗೆ ಕಂಬನಿ ಮಿಡಿದರು. ಅಂತೆಯೇ ಅವರ ಅಂತ್ಯ ಸಂಸ್ಕಾರಕ್ಕೆ ಸಂಬಂಧಿಸಿದಂತೆ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡಲಿದೆ. ಈಗಷ್ಟೇ ಸಾವಿನ ಕುರಿತು ಮಾಹಿತಿ ತಿಳಿದಿದ್ದು, ಅವರ ಕುಟುಂಬ ವರ್ಗ ನಿರ್ಧಾರದಂತೆ ಪ್ರಸಾದ್ ಅವರ ಅಂತ್ಯ ಸಂಸ್ಕ್ರಾರ ನಡೆಸಲಾಗುತ್ತದೆ ಎಂದು ತಿಳಿಸಿದರು.
ಹುಟ್ಟೂರು ಹಾಲಳ್ಳಿಯಲ್ಲಿ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ
ಇನ್ನು ಮಹದೇವ ಪ್ರಸಾದ್ ಅವರ ಹುಟ್ಟೂರಾದ ಚಾಮರಾಜನಗರ ಗುಂಡ್ಲುಪೇಟೆ ತಾಲ್ಲೂಕಿನ ಹಾಲಳ್ಳಿಯಲ್ಲಿ ಅಂತ್ಯ ಸಂಸ್ಕಾರ ನಡೆಸುವ ಕುರಿತು ಕುಟುಂಬವರ್ಗದವರು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದ್ದು, ಈಗಾಗಲೇ ಹಾಲಳ್ಳಿಯಲ್ಲಿ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆಗಳ ನಡೆಯುತ್ತಿವೆ ಎಂದು ತಿಳಿದುಬಂದಿದೆ.
Advertisement