ಬೆಂಗಳೂರು: ಪಾದಚಾರಿ ಮಾರ್ಗದಲ್ಲಿದ್ದ ಬೀದಿ ದೀಪದ ಕಂಬವೊಂದು ಬಿದ್ದ ಪರಿಣಾಮ 14 ವರ್ಷದ ಬಾಲಕಿಯೊಬ್ಬಳು ಮೃತಪಟ್ಟಿರುವ ಘಟನೆ ಮಹದೇವಪುರ ವಲಯದ ಕಾಡುಗೋಡಿಯಲ್ಲಿ ನಡೆದಿದೆ.
ಯುವರಾಣಿ (14) ಮೃತಪಟ್ಟ ಬಾಲಕಿಯಾಗಿದ್ದಾಳೆ. ಭಾನುವಾರಿ ಬಾಲಕಿ ತನ್ನ ತಂದೆ ಹರೀಶ್ ಅವರೊಂದಿಗೆ ಶಿವನಾಪುರದಲ್ಲಿರುವ ಸಂಬಂಧಿಕರ ಮನೆ ಗೃಹ ಪ್ರವೇಸಕ್ಕೆ ತೆರಳಿ ಬೈಕ್ ನಲ್ಲಿ ವಾಪಸ್ ಆಗುತ್ತಿದ್ದಳು. ಈ ವೇಳೆ ಕಾಡುಗೋಡಿಯ ದಿನ್ನೂರು ಕ್ರಾಸ್ ಬಳಿಯ ಕಬ್ಬಿಣದ ಬೀದಿ ದೀಪದ ಕಂಬ ಮುರಿದು ಬೈಕ್'ನಲ್ಲಿ ತೆರಳುತ್ತಿದ್ದ ಹರೀಶ್ ಹಾಗೂ ಬಾಲಕಿ ಮೇಲೆ ಬಿದ್ದಿದೆ.
ಬೀದಿ ದೀಪದ ಕಂಬ ಬಿದ್ದ ಪರಿಣಾಮ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದಳು. ಕೂಡಲೇ ಆಕೆಯನ್ನು ನಾರಾಯಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಸಾವನ್ನಪ್ಪಿದ್ದಾಳೆ. ಘಟನೆಯಲ್ಲಿ ಬಾಲಕಿಯ ತಂದೆಗೂ ಕೂಡ ಸಣ್ಣಪುಟ್ಟ ಗಾಯಗಳಾಗಿವೆ.
ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯವೇ ಬಾಲಕಿ ಸಾವಿಗೆ ಕಾರಣ ಎಂದು ಆರೋಪಿಸಿ ಇದೀಗ ಬಾಲಕಿಯ ಪೋಷಕರು ಕಾಡುಗೋಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.