ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಸುತ್ತಮುತ್ತ ಹನಿಟ್ರಾಪ್ ಮೂಲಕ ಶ್ರೀಮಂತ ಉದ್ಯಮಿಗಳನ್ನು ಬಲೆಗೆ ಕೆಡವಿ ವಂಚಿಸುತ್ತಿದ್ದ 26 ವರ್ಷದ ಯುವತಿಯನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸರು ಇಂದು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ವಿನೂತಾಗೌಡ ಎಂದು ಗುರುತಿಸಲಾಗಿದೆ. ಪದವಿ ಮುಗಿಸಿದ ಈಕೆ ಜ್ಞಾನಭಾರತಿಯಲ್ಲಿ ವಾಸವಾಗಿದ್ದಳು ಎಂಬುದು ತಿಳಿದುಬಂದಿದೆ.
ರಾಕೇಶ್ ( ಹೆಸರು ಬದಲಾಯಿಸಲಾಗಿದೆ) ನೀಡಿದ ದೂರಿನ ಆಧಾರದ ಮೇಲೆ ಇಂದು ವಿನೂತಾಳನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ರಾಮನಗರದಲ್ಲಿನ ಜಮೀನು ಮಾರಾಟ ಸಂಬಂಧ ಚರ್ಚೆ ನಡೆಸಲು ರಾಕೇಶ್ ಶಾಪ್ ಬಳಿ ಬಂದಿದ್ದ ವಿನೂತಾ ಒಂದು ತಿಂಗಳ ಹಿಂದೆ ಜಮೀನೊಂದರ ಬಳಿಗೆ ಕೆರೆದುಕೊಂಡು ಹೋಗಿದ್ದಾಳೆ. ನಂತರ ಮನೆಗೆ ವಾಪಾಸ್ ಬರುವಾಗ ಆತನನ್ನು ಊಟಕ್ಕೆ ಆಹ್ವಾನಿಸಿದ್ದಾಳೆ.
ರಾಕೇಶ್ ಊಟಕ್ಕೆಂದು ಹೋದ ಸಂದರ್ಭದಲ್ಲಿ ದೈಹಿಕ ಸಂಪರ್ಕ ಹೊಂದುವಂತೆ ಪೀಡಿಸಿದ್ದಾಳೆ. ನಂತರ ಹಿಡನ್ ಕ್ಯಾಮರಾದ ಮೂಲಕ ಅದನ್ನು ಸೆರೆ ಹಿಡಿದುಕೊಂಡಿದ್ದಾಳೆ. ಸ್ವಲ್ಪ ದಿನ ಕಳೆದ ನಂತರ ಆಕೆ ಬ್ಲಾಕ್ ಮೇಲ್ ಮಾಡಲು ಶುರು ಮಾಡಿದ್ದು, ವಿಡಿಯೋವನ್ನು ರಾಕೇಶ್ ಕುಟುಂಬಸ್ಥರು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡುವುದಾಗಿ ಬೆದರಿಕೆವೊಡ್ಡಿದ್ದಾಳೆ.
ಇದರಿಂದ ಭೀತಿಗೊಂಡ ರಾಕೇಶ್ 11 ಲಕ್ಷ ರೂಪಾಯಿಯನ್ನು ವಿನೂತಾಳಿಗೆ ನೀಡಿದ್ದಾನೆ. ಆದರೆ, ಆಕೆ ಮತ್ತೆ ಬೇಡಿಕೆ ಮುಂದಿಟ್ಟಿದ್ದಾಗ ರಾಕೇಶ್ ಪೊಲೀಸರಿಗೆ ದೂರು ನೀಡಿದ್ದಾನೆ. ಸಹಚರ ಶ್ರೀನಿವಾಸ್ ಎಂಬವರ ಮೂಲಕ ವಿನೂತಾ ಬೆದರಿಕೆ ಹಾಕುತ್ತಿದ್ದಳು ಎಂಬುದು ತಿಳಿದುಬಂದಿದೆ. ಕುಟುಂಬದಲ್ಲಿನ ತೊಂದರೆ ಹಾಗೂ ಆರ್ಥಿಕ ಸಂಕಷ್ಟದಿಂದಾಗಿ ರಾಕೇಶ್ ವಂಚಿಸಿರುವುದಾಗಿ ಆಕೆ ಹೇಳಿದ್ದಾಳೆ.
ಈ ಹಿಂದೆಯೂ ಕೂಡಾ ಆಕೆ ಕೆಲವರನ್ನು ವಂಚಿಸಿರುವ ಸಾಧ್ಯತೆ ಇದ್ದು,ಪೊಲೀಸರು ತನಿಖೆ ನಡೆಸುತ್ತಿದ್ದಾರೆ . ಕ್ಯಾಬ್ ಡ್ರೈವರ್ ಶ್ರೀನಿವಾಸ್ ಬಂಧನಕ್ಕೆ ಬಲೆ ಬೀಸಿದ್ದಾರೆ.
Advertisement