ಬೆಂಗಳೂರು: ಬೆಂಗಳೂರು ಮೂಲದ ಯುವತಿಗೆ ವೈವಾಹಿಕ ಜಾಲತಾಣದಲ್ಲಿ ಪರಿಚಯವಾಗಿ ವಂಚಿಸಿದ್ದ ಖದೀಮನೋರ್ವನನ್ನು ವೈಟ್ಫೀಲ್ಡ್ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
ಬ್ರೈಟ್ ಬಿನ್ ಮುದಖಾಸ್ ಬಂಧಿತ ಆರೋಪಿ. ಬಂಧಿತನಿಂದ 8 ಲಕ್ಷ ಹಣ ಹಾಗೂ ಫೋನ್, ಲ್ಯಾಪ್ಟಾಪ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಒಂದು ತಿಂಗಳ ಹಿಂದೆ ಶಾದಿ ಡಾಟ್ ಕಾಮ್ನಲ್ಲಿ ಯುವತಿಗೆ ಸ್ವೈನ್ ರಾಜ್ ಕಿಶೋರ್ ಎಂಬಾತನ ಪರಿಚಯವಾಗಿತ್ತು. ತಾನು ಸಿವಿಲ್ ಇಂಜಿನಿಯರ್ ಎಂದು ಹೇಳಿಕೊಂಡಿದ್ದ ಆತ ಮದುವೆಯಾಗುವುದಾಗಿ ಭರವಸೆ ನೀಡಿದ್ದನು. ನಂತರ ಸ್ವೈನ್ ರಾಜ್, ಕೆಲಸದ ನಿಮಿತ್ತ ತಾವು ಮಲೇಷಿಯಾಗೆ ತೆರಳುತ್ತಿದ್ದು, ಉಡುಗೊರೆ ತರುತ್ತೇನೆ ಎಂದು ಯುವತಿಗೆ ಹೇಳಿದ್ದನು.
ಕೆಲ ದಿನಗಳ ನಂತರ, ತಾನು ಮಲೇಶಿಯಾದಲ್ಲಿದ್ದು, ಸೆಕ್ಯೂರಿಟಿ ಕಾರಣಕ್ಕೆ ಅಕೌಂಟ್ ಸ್ಥಗಿತಗೊಂಡಿದೆ. ಆದ್ದರಿಂದ ಕಾಮಗಾರಿಯ ವಸ್ತುಗಳನ್ನು ಖರೀದಿಸಲು ಅಗತ್ಯವಾಗಿ ಹಣ ಬೇಕಿದೆ ಎಂದು ನಾಟಕವಾಡಿದ್ದನು. ಆತನ ಮಾತು ನಂಬಿದ ಯುವತಿ, ರಾಜ್ ಕಿಶೋರ್ ನೀಡಿದ ಆತನ ಗೆಳೆಯನ ಅಕೌಂಟ್ಗೆ 25.25 ಲಕ್ಷ ಹಣ ಕಳುಹಿಸಿಕೊಟ್ಟಿದ್ದಾಳು. ನಂತರ ಹಣ ಪಡೆದ ತಕ್ಷಣವೇ ಆತ ತನ್ನ ಫೋನ್, ಸಾಮಾಜಿಕ ಜಾಲತಾಣವೆಲ್ಲವೂ ಬ್ಲಾಕ್ ಮಾಡಿ ಬಿಟ್ಟಿದ್ದನು.
ತಾನು ಮೋಸ ಹೋಗಿರುವುದು ಗೊತ್ತಾಗುತ್ತಿದ್ದಂತೆ ಯುವತಿ ವೈಟ್ಫೀಲ್ಡ್ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದರು. ಆರೋಪಿಯ ಎಲ್ಲಾ ಮಾಹಿತಿ ಕಲೆ ಹಾಕಿದ ಪೊಲೀಸರು ತಂಡ ರಚಿಸಿ ನ. 23ರಂದು ದೆಹಲಿಯಲ್ಲಿ ಆರೋಪಿಯನ್ನು ಬಂಧಿಸಿ ಬೆಂಗಳೂರಿಗೆ ಕರೆತಂದಿದ್ದಾರೆ.
ಆತನ ನಿಜ ಹೆಸರು ಬ್ರೈಟ್ ಬಿನ್ ಮುದಖಾಸ್ ಎಂದು ತಿಳಿದುಬಂದಿದ್ದು, ಆತನ ಹಿಂದೆ ದೊಡ್ಡ ಜಾಲವಿದೆ. ಇತ ವೈವಾಹಿಕ ಜಾಲತಾಣದಲ್ಲಿ ಅನೇಕ ಮಹಿಳೆ, ಯುವತಿಯರಿಗೆ ವಂಚಿಸಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.
Advertisement