ಸರ್ಕಾರಿ ಕಾರ್ಯಕ್ರಮದಲ್ಲಿ ಹಾರ-ತುರಾಯಿಗೆ ಬ್ರೇಕ್: ಸರ್ಕಾರಿ ಆದೇಶದ ವಿರುದ್ಧ ಸಿಡಿದೆದ್ದ ಹೂ ಬೆಳೆಗಾರರು, ಬೃಹತ್ ಪ್ರತಿಭಟನೆ
ಬೆಂಗಳೂರು: ಸಭೆ-ಸಮಾರಂಭಗಳಲ್ಲಿ ಹೂಗುಚ್ಚ , ಹಾರ ತುರಾಯಿ ಮತ್ತು ಹಣ್ಣಿನ ಬುಟ್ಟಿ ನೀಡುವಂತಿಲ್ಲ ಎಂಬ ಹೊಸ ಸರ್ಕಾರದ ಆದೇಶದ ವಿರುದ್ಧ ಹೂ ಬೆಳಗಾರರು ಸಿಡಿದೆದ್ದು ಬೀದಿಗಿಳಿಯಲು ತೀರ್ಮಾನ ಮಾಡಿದ್ದಾರೆ.
ಕೂಡಲೇ ಆದೇಶ ಹಿಂಪಡೆಯುವಂತೆ ಒತ್ತಾಯಿಸಿ ನಾಳೆ ಹೂವಿನ ಬೆಳೆಗಾರರು ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ ಎಂದು ದಕ್ಷಿಣ ಭಾರತ ಹೂ ಬೆಳೆಗಾರರ ಸಂಘದ ಅಧ್ಯಕ್ಷ ಟಿ.ಎಂ.ಅರವಿಂದ್, ನಿರ್ದೇಶಕ ಶ್ರೀಕಾಂತ್ ಬೆಲ್ಲಂಪಳ್ಳಿ ಹೇಳಿದ್ದಾರೆ.
ರಾಜ್ಯದ ಎಲ್ಲಾ ಹೂ ಬೆಳೆಗಾರರರು, ಪುಷ್ಟ ಕೃಷಿ ರೈತ ಸಂಘಟನೆಗಳು ಮತ್ತು ರಾಜ್ಯದ ಎಲ್ಲಾ ಪುಷ್ಟ ಮಾರಾಟಗಾರರು ಮತ್ತು ಪುಷ್ಪ ಮಾರಾಟಗಾರರ ಸಂಘದ ನೇತೃತ್ವದಲ್ಲಿ ಬೆಂಗಳೂರಿನ ಅಂತರಾಷ್ಟ್ರೀಯ ಪುಷ್ಪ ಮಾರುಕಟ್ಟೆಯ ಎದುರು ಬೆಳಿಗ್ಗೆ 11.15ಕ್ಕೆ ಬೃಹತ್ ಪ್ರತಿಭಟನೆಗೆ ನಿರ್ಧರಿಸಲಾಗಿದೆ. ಹೂಗುಚ್ಚ, ಹಾರ, ಹಣ್ಣಿನ ಬುಟ್ಟಿಯನ್ನು ಹಿಡಿದುಕೊಂಡು ವಿನೂತನವಾಗಿ ಪ್ರತಿಭಟನೆಯನ್ನು ನಡೆಸಲಾಗುತ್ತದೆ ಎಂದು ತಿಳಿದುಬಂದಿದೆ.
ನಿನ್ನೆ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಗೆ ಆಗಮಿಸಿದ ಮುಖ್ಯಮಂತ್ರಿಗಳು, ಹೂಗುಚ್ಛ ಸ್ವೀಕರಿಸಲು ನಿರಾಕರಿಸಿದರು. ಇದು ಅನವಶ್ಯಕ ವೆಚ್ಚ. ಸಭೆಗಳಲ್ಲಿ ಶಿಷ್ಟಾಚಾರದ ಹೆಸರಿನಲ್ಲಿ ಹೂಗುಚ್ಛ, ಹಾರ, ಶಾಲುಗಳನ್ನು ನೀಡುವ ಅಗತ್ಯವಿಲ್ಲ. ಇನ್ನು ಮುಂದೆ ಆ ಸಂಪ್ರದಾಯ ಬೇಡ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದರು.
ಅಲ್ಲದೆ ಸರ್ಕಾರಿ ಸಭೆ, ಸಮಾರಂಭಗಳಲ್ಲಿ ಹೂಗುಚ್ಚ, ಹಾರ, ತುರಾಯಿ, ಹಣ್ಣಿನ ಬುಟ್ಟಿ ನೀಡುವಂತಿಲ್ಲ ಬದಲಾಗಿ ಪುಸ್ತಕ ಕಾಣಿಕೆಯಾಗಿ ಕೊಡಬಹುದು ಎಂದು ನಿನ್ನೆ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು.
ತಕ್ಷಣ ಆದೇಶವನ್ನು ಹಿಂದಕ್ಕೆ ತಗೆದುಕೊಳ್ಳಬೇಕೆಂದು ಸರಕಾರವನ್ನು ಒತ್ತಾಯಿಸಲು ರಾಜ್ಯದ ಎಲ್ಲಾ ಹೂ ಬೆಳೆಗಾರರರು, ಪುಷ್ಪ ಕೃಷಿ ರೈತ ಸಂಘಟನೆಗಳು ಮತ್ತು ರಾಜ್ಯದ ಎಲ್ಲಾ ಪುಷ್ಟ ಮಾರಾಟಗಾರರು ಮತ್ತು ಪುಷ್ಪ ಮಾರಾಟಗಾರರ ಸಂಘದ ನೇತೃತ್ವದಲ್ಲಿ ನಾಳೆ ಬೆಂಗಳೂರಿನ ಅಂತರಾಷ್ಟ್ರೀಯ ಪುಷ್ಪ ಮಾರುಕಟ್ಟೆಯ ಎದುರು ಬೃಹತ್ ಪ್ರತಿಭಟನೆಗೆ ನಡೆಸುವುದಾಗಿ ಹೇಳಿದರು. ಹೂಗುಚ್ಚ, ಹಾರ, ಹಣ್ಣಿನ ಬುಟ್ಟಿಯನ್ನು ಹಿಡಿದುಕೊಂಡೇ ವಿನೂತನ ಪ್ರತಿಭಟನೆ ನಡೆಸುವುದಾಗಿಯೂ ಅವರು ಸ್ಪಷ್ಟಪಡಿಸಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ