ಕೋವಿಡ್-19: ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಇಳಿಕೆ, ಸಾವಿನ ಪ್ರಮಾಣ ಏರಿಕೆ!
ಬೆಂಗಳೂರು: ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿದ್ದರೂ, ಸಾವಿನ ಪ್ರಮಾಣ ಏರಿಕೆಯಾಗುತ್ತಿರುವುದು ಆತಂಕವನ್ನು ಹೆಚ್ಚಾಗುವಂತೆ ಮಾಡಿದೆ.
ಮಂಗಳವಾರ ಒಂದೇ ದಿನ ರಾಜ್ಯದಲ್ಲಿ 588 ಮಂದಿ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 26 ಸಾವಿರ ಗಡಿದಾಟಿದಂತಾಗಿದೆ. ಆದರೆ, ಸೋಂಕು ಇಳಿಕೆಯಾಗುತ್ತಿದ್ದು, ನಿನ್ನೆ 22,758 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.
ಕಳೆದ ಮೂರು ದಿನಗಳಿಂದ ಶೇ.2 ಮೀರಿದ ಮರಣ ದರ ದಾಖಲಾಗಿದ್ದು, ಒಟ್ಟು 1,743 ಮಂದಿ ಮರಣವನ್ನಪ್ಪಿದ್ದಾರೆ. ರಾಜ್ಯದ ಈವರೆಗಿನ ಒಟ್ಟು ಮರಣದಲ್ಲಿ ಶೇ.7ರಷ್ಟು ಈ ಮೂರು ದಿನಗಳಲ್ಲಿ ಘಟಿಸಿರುವುದು ಆತಂಕ ಸೃಷ್ಟಿಸಿದೆ.
ಇನ್ನು ಬೆಂಗಳೂರು ನಗರದಲ್ಲಿ 350 ಮಂದಿ ಮೃತರಾಗಿದ್ದು, ಇತರೆ, 12 ಜಿಲ್ಲೆಗಳಲ್ಲಿ ಹತ್ತಕ್ಕಿಂತ ಹೆಚ್ಚು ಸಾವು ಸಂಭವಿಸಿದೆ. ನಗರದಲ್ಲಿ ಸಾವಿನ ಪ್ರಮಾಣ 1.02ರಿಂದ 1.04ಕ್ಕೆ ಏರಿಕೆಯಾಗಿದೆ.
ಇದೇ ವೇಳೆ ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಬರೋಬ್ಬರಿ 38,224 ಮಂದಿ ಗುಣಮುಖರಾಗಿದ್ದಾರೆ. ಸತತ 8ನೇ ದಿನ ಗುಣಮುಖರ ಸಂಖ್ಯೆ ಹೊಸ ಸೋಂಕಿತರಿಗಿಂತ ಹೆಚ್ಚಾಗಿದೆ. ರಾಜ್ಯದಲ್ಲಿ ಗುಣಮುಖ ಪ್ರಮಾಣ ಶೇ.80.97 ರಿಂದ 81.77ಕ್ಕೆ ಏರಿಕೆಯಾಗಿದೆ. ಇನ್ನು ಸಕ್ರಿಯ ಪ್ರಕರಣಗಳ ಸಂಖ್ಯೆ 4,40,435 ರಿಂದ 4,24,381ಕ್ಕೆ ಇಳಿಕೆಯಾಗಿದೆ.
ಬೆಂಗಳೂರಿನಲ್ಲಿ ನಿನ್ನೆ ಒಂದೇ ದಿನ 6,243 ಪ್ರಕರಣಗಳು ವರದಿಯಾಗಿದ್ದು, ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 11,31,496ಕ್ಕೆ ತಲುಪಿದೆ. ನಗರದಲ್ಲಿ ಗುಣಮುಖರ ಪ್ರಮಾಣ ಶೇ.78.81ರಿಂದ ಶೇ.79.54ಕ್ಕೆ ಏರಿಕೆಯಾಗಿದೆ. ಇನ್ನು ಸಕ್ರಿಯ ಪ್ರಕರಣಗಳ ಸಂಖ್ಯೆ 2,26,868 ರಿಂದ 2,19,551ಕ್ಕೆ ಇಳಿಕೆಯಾಗಿದೆ.