ಕೆಎಸ್ ಆರ್ ಟಿಸಿ ವಿವಾದ: ಕೋರ್ಟ್ ತೀರ್ಪಿನ ಪ್ರತಿ ಕೈ ಸೇರಿದ ಬಳಿಕ ಮುಂದಿನ ಕಾನೂನು ಹೋರಾಟ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಕೆಎಸ್ಆರ್`ಟಿಸಿ ಪದ ಬಳಕೆ ವಿವಾದಕ್ಕೆ ಸಂಬಂಧಿಸಿದಂತೆ ಕೋರ್ಟ್ ತೀರ್ಪಿನ ಪ್ರತಿ ಕೈ ಸೇರಿದ ಬಳಿಕ ಮುಂದಿನ ಕಾನೂನು ಹೋರಾಟದ ಕುರಿತು ನಿರ್ಧರಿಸಲಾಗುತ್ತದೆ ಎಂದು ರಾಜ್ಯ ಉಪ ಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಹೇಳಿದ್ದಾರೆ.
ಲಕ್ಷ್ಮಣ್ ಸವದಿ
ಲಕ್ಷ್ಮಣ್ ಸವದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಕೆಎಸ್ಆರ್`ಟಿಸಿ ಪದ ಬಳಕೆ ವಿವಾದಕ್ಕೆ ಸಂಬಂಧಿಸಿದಂತೆ ಕೋರ್ಟ್ ತೀರ್ಪಿನ ಪ್ರತಿ ಕೈ ಸೇರಿದ ಬಳಿಕ ಮುಂದಿನ ಕಾನೂನು ಹೋರಾಟದ ಕುರಿತು ನಿರ್ಧರಿಸಲಾಗುತ್ತದೆ ಎಂದು ರಾಜ್ಯ ಉಪ ಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಹೇಳಿದ್ದಾರೆ.

ತೀರ್ಪಿನ ಬಳಿಕ ಇದೇ ಮೊದಲ ಬಾರಿಗೆ ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಲಕ್ಷ್ಮಣ್ ಸವದಿ ಅವರು, ಕೇರಳವು ಕೆಎಸ್‌ಆರ್‌ಟಿಸಿ ಎಂಬ ಪದವನ್ನು ತಾವೇ ಮೊದಲು ಬಳಸಿದ್ದರಿಂದ ಕರ್ನಾಟಕ ಈ ಪದವನ್ನು ಬಳಸಬಾರದು ಎಂದು ತಕರಾರು ತೆಗೆದ ಬಗ್ಗೆ ಈಗ ಟ್ರೇಡ್‌ ಮಾರ್ಕ್‌ ರಿಜಿಸ್ಟ್ರಿಯು ತೀರ್ಪು  ನೀಡಿದೆ. ಈ ತೀರ್ಪಿನಲ್ಲಿ ಏನಿದೆ ಎಂಬ ಅಂಶ ಅಧಿಕೃತವಾಗಿ ಇನ್ನೂ ಬಂದಿಲ್ಲ. ಅದು ಲಭ್ಯವಾದ ಬಳಿಕ ರಾಜ್ಯದ ಮುಂದಿನ ನಿಲುವು ಮತ್ತು ಕಾನೂನು ಹೋರಾಟದ ಬಗ್ಗೆ ತೀರ್ಮಾನಿಸಲಾಗುವುದು ಎಂದು ಹೇಳಿದ್ದಾರೆ.

ಅಂತೆಯೇ 'ನಮ್ಮದು ಒಕ್ಕೂಟ ವ್ಯವಸ್ಥೆ. ಒಂದು ರಾಜ್ಯವು ಮತ್ತೊಂದು ರಾಜ್ಯದ ಜೊತೆಗೆ ಯಾವುದೇ ಸಂಘರ್ಷವಿಲ್ಲದೆ ಸೌಹಾರ್ದಯುತವಾಗಿ ಸಂಬಂಧ ಇಟ್ಟುಕೊಂಡು ಹೋಗಬೇಕೆಂದು ಈ ಒಕ್ಕೂಟ ವ್ಯವಸ್ಥೆ ಹೇಳುತ್ತದೆ. ಆದರೆ, ದುರಾದೃಷ್ಟವಶಾತ್ ಈ ವಿವಾದ ಅನಗತ್ಯವಾಗಿ ಎದ್ದಿದೆ. ಖಾಸಗಿ ಸಂಸ್ಥೆಗಳಲ್ಲಾದರೆ ಈ ರೀತಿಯ ಹೆಸರು ಅಥವಾ ಟ್ರೇಡ್‌ ಮಾರ್ಕ್‌ಗಳಿಂದ ವ್ಯವಹಾರ ಮತ್ತು ಲಾಭಗಳ ಮೇಲೆ ಪ್ರಭಾವ ಬೀಳುತ್ತದೆ. ಆದರೆ, ಸರ್ಕಾರಿ ಸಂಸ್ಥೆಗಳು ಹಾಗಲ್ಲ. ಇಲ್ಲಿ ಜನರ ಸೇವೆ ಮುಖ್ಯ. ಕರ್ನಾಟಕವಾಗಲಿ, ಕೇರಳವಾಗಲಿ ಪರಸ್ಪರ ಸಾರಿಗೆ ಕ್ಷೇತ್ರದಲ್ಲಿ ಲಾಭ ಗಳಿಸುವ ಮೇಲಾಟಕ್ಕೆ ಅಥವಾ ಸ್ಪರ್ಧೆಗೆ ಮುಂದಾಗದೆ ಸಾರ್ವಜನಿಕರ ಹಿತಾಸಕ್ತಿ ಮತ್ತು ಸೇವೆ ಗಮನದಲ್ಲಿ ಇಟ್ಟುಕೊಂಡು ಕೆಲಸ ಮಾಡುತ್ತಿವೆ'. 

ಹೀಗಾಗಿ ಈ ವಿಷಯವನ್ನು ಯಾವುದೇ ರಾಜ್ಯಗಳು ಪ್ರತಿಷ್ಠೆಯ ವಿಷಯವಾಗಿ ಮಾಡಿಕೊಳ್ಳಬಾರದು. ಇದರಿಂದ ಕೇರಳ ರಾಜ್ಯಕ್ಕೆ ಸಂಭ್ರಮಪಡುವಂಥ ವಿಚಾರವೇನೂ ಅಲ್ಲ. ಕರ್ನಾಟಕದಲ್ಲಿ ಕೆಎಸ್ಆರ್‌ಟಿಸಿ ಎಂಬ ಹೆಸರಿದ್ದರೆ ಅದರಿಂದ ಕೇರಳದ ಕೆಎಸ್ಆರ್‌ಟಿಸಿ ಸಂಸ್ಥೆಗೆ ಯಾವುದೇ ನಷ್ಟ ಇಲ್ಲ. ಕರ್ನಾಟಕವು ಕೇರಳದ ಸಾರಿಗೆ ಸಂಸ್ಥೆಗಳೊಂದಿಗೆ ಎಂದೂ ಪೈಪೋಟಿಗೆ ಇಳಿದಿದ್ದಿಲ್ಲ ಎಂಬುದನ್ನು ಕೇರಳ ಮೊದಲು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.

ಅಂತೆಯೇ 'ಇಂಥ ವಿಷಯಗಳಲ್ಲಿ ಅನಗತ್ಯವಾಗಿ ವಿವಾದಗಳನ್ನು ಹೆಚ್ಚು ಮಾಡುತ್ತಾ ಪರಸ್ಪರ ರಾಜ್ಯಗಳಲ್ಲಿ ವಿವಾದಗಳನ್ನು ಬೆಳೆಸುವ ಪರಿಪಾಠಕ್ಕೆ ನಾವೆಲ್ಲರೂ ಅಂತ್ಯ ಹಾಡಬೇಕು. ದೇಶದ ಹಿತದೃಷ್ಟಿಯಿಂದ ರಾಜ್ಯ-ರಾಜ್ಯಗಳ ನಡುವಿನ ಬಾಂಧವ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳುವುದು ಬಹಳ ಮುಖ್ಯ' ಎಂದು ಸವದಿ ಅಭಿಪ್ರಾಯಟ್ಟಿದ್ದಾರೆ.

ಇನ್ನು 1948ರಲ್ಲಿ ಕರ್ನಾಟಕದಲ್ಲಿ ಬಸ್ ಸೇವೆ ಆರಂಭವಾದಾಗ ಅದನ್ನು ಮೈಸೂರು ಸರ್ಕಾರಿ ರಸ್ತೆ ಸಾರಿಗೆ ಇಲಾಖೆ(ಎಂಜಿಆರ್‌ಟಿಡಿ) ಎಂದು ಕರೆಯಲಾಗಿತ್ತು. ಆದರೆ 1973ರ ನಂತರ ಮೈಸೂರು ಕರ್ನಾಟಕ ಅಂತ ನಾಮಕರಣವಾದ ಮೇಲೆ ಕೆಎಸ್ಆರ್‌ಟಿಸಿ ಪದ ಬಳಸಲು ಆರಂಭಿಸಿತ್ತು. ಕೇರಳದಲ್ಲೂ  ಕೆಎಸ್ಆರ್‌ಟಿಸಿಗೂ ಮೊದಲು ತಿರುವಾಂಕೂರು ರಾಜ್ಯ ಸಾರಿಗೆ ಇಲಾಖೆ(ಟಿಎಸ್ಟಿಡಿ) ಎಂದು ಕರೆಯಾಗುತ್ತಿತ್ತು. ಬಳಿಕ 1965 ಕೇರಳ ಸ್ಟೇಟ್ ಟ್ರಾನ್ಸ್ ಪೋರ್ಟ್ ಕಾರ್ಪೋರೇಶನ್ ಆಗಿತ್ತು. ಇದನ್ನು ಮುಂದಿಟ್ಟುಕೊಂಡು ಕೇರಳ ವಾದ ಮಂಡಿಸಿ ಸಮರದಲ್ಲಿ ಯಶಸ್ವಿಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com