ಬೆಂಗಳೂರು: ಕೊರೋನಾ ಸಾಂಕ್ರಾಮಿಕ ರೋಗದ ಸಂಕಷ್ಟದ ನಡುವೆಯೇ ವಿದ್ಯುತ್ ದರ ಏರಿಕೆ ಮಾಡಿರುವ ಸರ್ಕಾರದ ನಡೆಗೆ ರಾಜ್ಯದ ಜನತೆಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರತಿ ಯೂನಿಟ್ಗೆ ಸರಾಸರಿ 30 ಪೈಸೆ ಹೆಚ್ಚಳವು ಗ್ರಾಹಕರಿಗೆ ಹೊರೆಯಾಗಲಿದೆ ಮತ್ತು ಉತ್ಪಾದನಾ ವೆಚ್ಚ ಮತ್ತು ಎಲ್ಲಾ ಕೈಗಾರಿಕೆಗಳಿಗೆ ಪ್ರಾಥಮಿಕವಾಗಿರುವ ಕಬ್ಬಿಣ, ಉಕ್ಕು ಮತ್ತು ಎರಕದಂತಹ ಕಚ್ಚಾ ವಸ್ತುಗಳ ಮಾರಾಟದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಬೆಂಗಳೂರಿನ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್ಕೆಸಿಸಿಐ) ಅಧ್ಯಕ್ಷ ಪೆರಿಕಲ್ ಎಂ. ಸುಂದರ್ ಅವರು ಹೇಳಿದ್ದಾರೆ.
ಕೊರೋನಾ ಎರಡನೇ ಅಲೆ ಹಾಗೂ ಲಾಕ್ಡೌನ್ ಸಂದರ್ಭದಲ್ಲಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್'ಸಿ) ಇಂತಹ ನಿರ್ಧಾರ ಕೈಗೊಂಡಿರುವುದು ಸಾಕಷ್ಟು ಹೊರೆಯಾಗಲಿದೆ. ರಾಜ್ಯದಲ್ಲಿ ಹೆಚ್ಚುವರಿ ವಿದ್ಯುತ್ ಉತ್ಪಾದನೆಯಾಗಿದ್ದು, ಇತರೆ ರಾಜ್ಯಗಳಿಗೆ ಮಾರಾಟ ಮಾಡುವುದಾಗಿ ತಿಳಿಸಿದೆ. ವಿದ್ಯುತ್ ದರ ಹೆಚ್ಚಳ ಜನರಿಗೆ ಹೊರೆಯಾಗಲಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೂಡಲೇ ಆದೇಶವನ್ನು ಹಿಂಪಡೆಯುವಂತೆ ಕೆಇಆರ್'ಸಿಗೆ ಸೂಚಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ವಿದ್ಯುತ್ ದರ ಹೆಚ್ಚಳ ನಿರ್ಧಾರಕ್ಕೆ ರಾಜ್ಯದ ಜನರೂ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಕೊರೋನಾದಿಂದಾಗಿ ಗ್ರಾಹಕರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ವಿದ್ಯುತ್ ದರ ಹೆಚ್ಚಳ ಮಾಡುವ ಮೂಲಕ ಕೆಇಆರ್'ಸಿ ಗ್ರಾಹಕರಿಗೆ ಹೆಚ್ಚಿನ ಸಂಕಷ್ಟವನ್ನು ನೀಡುತ್ತಿದೆ ಎಂದು ಸಿಟಿಜನ್ಸ್ ಫಾನ್ ಸಿಟಿಜನ್ಸ್ ಸಂಚಾಲಕ ರಾಜ್ ಕುಮಾರ್ ದುಗಾರ್ ಅವರು ಹೇಳಿದ್ದಾರೆ.
Advertisement