ರಾಜ್ಯದಲ್ಲಿ ಆತ್ಮಹತ್ಯೆ ಪ್ರಮಾಣ ಹೆಚ್ಚಳ: ಕೊರೊನಾ ಹಿನ್ನೆಲೆಯ ಬಡತನ ಮತ್ತು ನಿರುದ್ಯೋಗ ಕಾರಣ

ರಾಜ್ಯ ಸರ್ಕಾರ ಕೊರೊನಾ ಲಸಿಕೆ ನೀಡುವ ಮೂಲಕ ಕೊರೊನಾ ಸಾಂಕ್ರಾಮಿಕದಿಂದ ಜನರನ್ನು ರಕ್ಷಿಸುತ್ತಿದೆ ನಿಜ, ಆದರೆ ಕೊರೊನಾದಿಂದ ಉಂಟಾಗಿರುವ ನಿರುದ್ಯೋಗ, ಆರ್ಥಿಕ ಸಂಕಷ್ಟ, ನಷ್ಟ ದಂಥ ಸಮಸ್ಯೆಗಳಿಗೆ ಪರಿಹಾರ ನೀಡುವವರಾರು ಎನ್ನುವುದು ಬಗೆಹರಿಯದ ಸಮಸ್ಯೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೊರೊನಾದಿಂದ ಆರ್ಥಿಕ ಸಂಕಷ್ಟ ಉಂಟಾಗಿ ಜನರ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದನೆ ನೀಡುತ್ತಿದೆ. ಆರ್ಥಿಕ ಸಂಕಷ್ಟ, ನಿರುದ್ಯೋಗ ಮುಂತಾದ ಕಾರಣಗಳಿಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವರ ಸಂಖ್ಯೆ ರಾಜ್ಯದಲ್ಲಿ ಹೆಚ್ಚುತ್ತಿದೆ. 

ರಾಜ್ಯದಲ್ಲಿ ಸಂಭ್ವಿಸಿರುವ ಆತ್ಮಹತ್ಯೆ ಪ್ರಕರಣಗಳನ್ನು ಅಧ್ಯಯನಕ್ಕೊಳಪಡಿಸಿದಾಗ ಆರ್ಥಿಕ ಮುಗ್ಗಟ್ಟು, ನಿರುದ್ಯೋಗ, ವ್ಯಾಪಾರದಲ್ಲಿ ನಷ್ಟ ಮುಂತಾದ ಕಾರಣಗಳು ದೊರೆಯುತ್ತವೆ. ಇವೆಲ್ಲಾ ಕಾರಣಗಳಿಗೂ ಕೊರೊನಾ ಸಾಂಕ್ರಾಮಿಕ ನೇರ ನಂಟನ್ನು ಹೊಂದಿರುವುದನ್ನು ಪರಿಣತರು ಗುರುತಿಸಿದ್ದಾರೆ. 

ರಾಜ್ಯ ಸರ್ಕಾರ ಕೊರೊನಾ ಲಸಿಕೆ ನೀಡುವ ಮೂಲಕ ಕೊರೊನಾ ಸಾಂಕ್ರಾಮಿಕದಿಂದ ಜನರನ್ನು ರಕ್ಷಿಸುತ್ತಿದೆ ನಿಜ, ಆದರೆ ಕೊರೊನಾದಿಂದ ಉಂಟಾಗಿರುವ ನಿರುದ್ಯೋಗ, ಆರ್ಥಿಕ ಸಂಕಷ್ಟ, ನಷ್ಟ ದಂಥ ಸಮಸ್ಯೆಗಳಿಗೆ ಪರಿಹಾರ ನೀಡುವವರಾರು ಎನ್ನುವುದು ಬಗೆಹರಿಯದ ಸಮಸ್ಯೆಯಾಗಿದೆ.

ಮಾರ್ಚ್ 2020ರಿಂದ ಇದುವರೆಗೂ 850 ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ. ಅದರಲ್ಲಿ 10 ಪ್ರಕರಣಗಳು ವರದಕ್ಷಿಣೆಯದ್ದು. 373 ಪ್ರಕರಣಗಳು ಇತರರ ಕುಮ್ಮಕ್ಕಿನಿಂದ ಉಂಟಾದವು. ಇನ್ನುಳಿದ 344 ಪ್ರಕರಣಗಳು ನಿರುದ್ಯೋಗ, ಆರ್ಥಿಕ ಸಂಕಷ್ಟದಿಂದ ಸಂಭವಿಸಿದ ಆತ್ಮಹತ್ಯೆಗಳಾಗಿವೆ. 

ಜೀವನದ ಗುಣಮಟ್ಟ ಕುಗ್ಗಿದಾಗ ಅದರೊಂದಿಗೆ ಹೊಂದಿಕೊಳ್ಳುವುದು ಕಷ್ತವಾಗಿ ಆತ್ಮಹತ್ಯೆಯ ದಾರಿ ಹಿಡಿಯುತ್ತಾರೆ ಎಂದು ಮನೋವೈದ್ಯರು ಹೇಳಿದ್ದಾರೆ. ಈ ಕಾಲದಲ್ಲಿ ಜನರು ಇತರರ ಮೇಲೆ ತುಂಬಾ ಅವಲಂಬಿತರಾಗುತ್ತಿದ್ದಾರೆ.  ಸಾಲ ಮಾಡಲು ಹಿಂದೆ ಮುಂದೆ ನೋಡುತ್ತಿಲ್ಲ. ನ್ಯೂಕ್ಲಿಯರ್ ಫ್ಯಾಮಿಲಿಗಳಾಗುತ್ತಿವೆ. ಇವೆಲ್ಲದರಿಂದಾಗಿ ಸಮಸ್ಯೆಗಳು ಎದುರಾದಾಗ ಅವರು ಏಕಾಂಗಿಗಳಾಗಿಬಿಡುತ್ತಾರೆ. ಅತ್ಮಹತ್ಯೆಗೆ ಇದು ಪ್ರಮುಖ ಕಾರಣ ಎನ್ನುತ್ತಾರೆ ವೈದ್ಯರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com