ಸರ್ಕಾರಿ ಗೌರವಗಳೊಂದಿಗೆ ಭಾನುವಾರ ಪುನೀತ್ ರಾಜಕುಮಾರ್ ಅಂತ್ಯಕ್ರಿಯೆ

ಹೃದಯಾಘಾತದಿಂದಾಗಿ ಇಂದು ವಿಧಿವಶರಾಗಿರುವ ಪುನೀತ್ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಕಂಠೀರವ ಸ್ಟೇಡಿಯಂ ನಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಇಂದು ಸಂಜೆಯಿಂದ ನಾಳೆ ಇಡೀ ದಿನ ಅವಕಾಶ ಸಿಗಲಿದೆ. 
ಪುನೀತ್ ರಾಜಕುಮಾರ್
ಪುನೀತ್ ರಾಜಕುಮಾರ್

ಬೆಂಗಳೂರು: ನಟ ಪುನೀತ್ ರಾಜ್ ಕುಮಾರ್(46) ಅವರ ಅಂತಿಮ ವಿಧಿವಿಧಾನ ಭಾನುವಾರ ನೆರವೇರಲಿದೆ.  ಹೃದಯಾಘಾತದಿಂದಾಗಿ ಇಂದು ವಿಧಿವಶರಾಗಿರುವ ಪುನೀತ್ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಕಂಠೀರವ ಸ್ಟೇಡಿಯಂ ನಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಇಂದು ಸಂಜೆಯಿಂದ ನಾಳೆ ಇಡೀದಿನ ಅವಕಾಶ ಸಿಗಲಿದೆ. ನಾಡಿದ್ದು, ಕುಟುಂಬದವರ ನಿರ್ಧಾರದಂತೆ ಅವರು ಸೂಚಿಸುವ ಸ್ಥಳದಲ್ಲಿ, ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ.

ಪುನೀತ್ ರಾಜಕುಮಾರ್ ನಿಧನಕ್ಕೆ ಮುಖ್ಯಮಂತ್ರಿ ಸಂತಾಪ

ವರನಟ ಡಾ.ರಾಜಕುಮಾರ್ ಸುಪುತ್ರ, ಖ್ಯಾತ ನಟ ಪುನೀತ್ ರಾಜಕುಮಾರ್ ಅಕಾಲಿಕ ನಿಧನ ಹೊಂದಿರುವುದು ಅತೀವ ಆಘಾತವನ್ನುಂಟು ಮಾಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.

ಕಿರಿಯ ವಯಸ್ಸಿನಲ್ಲಿಯೇ ದೊಡ್ಡ ಸಾಧನೆ ಮಾಡಿದ ರಾಷ್ಟ್ರಪ್ರಶಸ್ತಿ ಪುರಸ್ಕೃತ ಜನಪ್ರಿಯ ಮೇರು ನಟ, ಯುವಜನತೆಯ ಕಣ್ಮಣಿ, ಯೂಥ್ ಐಕಾನ್ ಆಗಿದ್ದ ಪುನೀತ್ ನಿಧನ ಹೊಂದಿರುವುದು ಕಲಾರಂಗಕ್ಕೆ ಬಹಳ ದೊಡ್ಡ ನಷ್ಟ, ಇದು ವಿಧಿಯ ಕ್ರೂರ ಆಟ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.

"ವೈಯಕ್ತಿಕವಾಗಿ ಅತ್ಯಂತ ಆತ್ಮೀಯ ಸಹೃದಯ ಬಂಧುವನ್ನು ಕಳೆದುಕೊಂಡಿದ್ದೇನೆ. ಅವರ ಉತ್ಸಾಹ, ಪ್ರತಿಭೆ, ಅವರ ಅನೇಕ ಅತ್ಯುತ್ತಮ ಚಲನಚಿತ್ರಗಳನ್ನು, ಕನ್ನಡದ ಸಾಂಸ್ಕೃತಿಕ ರಾಯಭಾರಿಯಂತೆ ನಾಡಿನ ಸಮಸ್ತ ಜನತೆಯ ಮನೆ, ಮನ ತಲುಪಿದ್ದ ಅವರ ವ್ಯಕ್ತಿತ್ವವನ್ನು ಮರೆಯುವುದು ಸಾಧ್ಯವೇ ಇಲ್ಲ. ಅವರ ಆತ್ಮಕ್ಕೆ ಸದ್ಗತಿಯನ್ನು ಪ್ರಾರ್ಥಿಸುತ್ತೇನೆ." ಅವರ ಕುಟುಂಬದವರಿಗೆ ದುಃಖ ಸಹಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಕೋರುತ್ತೇನೆ ಎಂದು ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಸಂಯಮದಿಂದ ವರ್ತಿಸಿ: ಅಭಿಮಾನಿಗಳಿಗೆ ಮನವಿ

ಅಭಿಮಾನಿಗಳು ಈ ದುಃಖಕರ ಸನ್ನಿವೇಶದಲ್ಲಿ, ಭಾವಾವೇಶಕ್ಕೆ ಒಳಗಾಗಿ ಅಹಿತಕರ ಘಟನೆಗಳಿಗೆ ಅವಕಾಶ ಕೊಡಬೇಡಿ. ಶಾಂತಿ, ಸಂಯಮದಿಂದ ವರ್ತಿಸಿ ಅಂತಿಮ ನಮನಗಳನ್ನು ಸಲ್ಲಿಸೋಣ ಎಂದು ಮುಖ್ಯಮಂತ್ರಿಗಳು ಪುನೀತ್ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

ಪುನೀತ್ ರಾಜ್ ಕುಮಾರ್ ಅವರ ಅಂತ್ಯಕ್ರಿಯೆಯ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com