ಚಾಮರಾಜಪೇಟೆ ಮೈದಾನದಲ್ಲಿ ಅದ್ಧೂರಿ ಗಣೇಶೋತ್ಸವಕ್ಕೆ ಸಿದ್ಧತೆ, ನಾಗರಿಕ ಒಕ್ಕೂಟದಲ್ಲೇ ಬಿರುಕು!

ಚಾಮರಾಜಪೇಟೆ ಮೈದಾನದಲ್ಲಿ ಅದ್ಧೂರಿ ಗಣೇಶೋತ್ಸವಕ್ಕೆ ಸಿದ್ಧತೆ ನಡೆಸಲಾಗಿದ್ದು, ಇದೇ ವಿಚಾರವಾಗಿ ಚಾಮರಾಜಪೇಟೆ ನಾಗರೀಕರ ಒಕ್ಕೂಟದಲ್ಲೇ ಬಿರುಕು ಕಾಣಿಸಿಕೊಂಡಿದೆ ಎನ್ನಲಾಗಿದೆ.
ಚಾಮರಾಜಪೇಟೆ ಆಟದ ಮೈದಾನ
ಚಾಮರಾಜಪೇಟೆ ಆಟದ ಮೈದಾನ

ಬೆಂಗಳೂರು: ಚಾಮರಾಜಪೇಟೆ ಮೈದಾನದಲ್ಲಿ ಅದ್ಧೂರಿ ಗಣೇಶೋತ್ಸವಕ್ಕೆ ಸಿದ್ಧತೆ ನಡೆಸಲಾಗಿದ್ದು, ಇದೇ ವಿಚಾರವಾಗಿ ಚಾಮರಾಜಪೇಟೆ ನಾಗರೀಕರ ಒಕ್ಕೂಟದಲ್ಲೇ ಬಿರುಕು ಕಾಣಿಸಿಕೊಂಡಿದೆ ಎನ್ನಲಾಗಿದೆ.

ಹೌದು.. ಭಾರಿ ಸುದ್ದಿಗೆ ಗ್ರಾಸವಾಗಿದ್ದ ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅನುಮತಿ ನೀಡಬಾರದು ಎಂದು ಪೊಲೀಸರು ಗುಪ್ತ ಸೂಚನೆ ನೀಡಿದ್ದರೂ ಈ ಬಾರಿ ಮೈದಾನದಲ್ಲಿ ಅದ್ದೂರಿ ಗಣೇಶೊತ್ಸವಕ್ಕೆ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ. ಇದೇ ಆಗಸ್ಟ್ 31 ರಿಂದ ಸೆಪ್ಟೆಂಬರ್ 10 ರವರೆಗೆ ಚಾಮರಾಜಪೇಟೆ ಮೈದಾನದಲ್ಲಿ ಬೆಂಗಳೂರು ಮಹಾನಗರ ಗಣೇಶೋತ್ಸವ ಸಮಿತಿ ಸಹಯೋಗದೊಂದಿಗೆ ಅದ್ಧೂರಿ ಗಣೇಶೋತ್ಸವ ಆಚರಿಸಲಾಗುವುದು ಎಂದು ಚಾಮರಾಜಪೇಟೆ ಗಣೇಶೋತ್ಸವ ಸಮಿತಿ ಘೋಷಣೆ ಮಾಡಿದೆ.

ಈ ಕುರಿತಂತೆ ಈಗಾಗಲೇ ಭರ್ಜರಿ ಪೋಸ್ಟರ್ ರಿಲೀಸ್ ಮಾಡಿರುವ ಸಮಿತಿಯವರು ಆಗಸ್ಟ್ 31ರಂದು ಬೆಳಿಗ್ಗೆ 9 ಗಂಟೆಗೆ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುವುದು. ಗಣೇಶ ಪ್ರತಿಷ್ಠಾಪನೆ ನಂತರ ಹತ್ತು ದಿನಗಳ ಕಾಲ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಸೆಪ್ಟೆಂಬರ್ 10 ರಂದು ಚಾಮರಾಜಪೇಟೆಯ ಗಲ್ಲಿಗಲ್ಲಿಗಳಲ್ಲಿ ಗಣೇಶೋತ್ಸವ ಮೆರವಣೆಗೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಹೇಳಿದೆ.

ಅಲ್ಲದೆ ಈದ್ಗಾ ಮೈದಾನ ಎಂದೇ ಹೇಳಲಾಗುತ್ತಿದ್ದ ಚಾಮರಾಜಪೇಟೆ ಆಟದ ಮೈದಾನವನ್ನು ಪೋಸ್ಟರ್‍ ನಲ್ಲಿ ಜಯಚಾಮರಾಜೇಂದ್ರ ಒಡೆಯರ್ ಆಟದ ಮೈದಾನವೆಂದೂ ಉಲ್ಲೇಖಿಸಲಾಗಿದೆ. 

ನಾಗರಿಕ ಒಕ್ಕೂಟದಲ್ಲೇ ಬಿರುಕು!
ಗಣೇಶೋತ್ಸವ ಆಚರಣೆ ಕುರಿತಂತೆ ಕೈಗೊಂಡಿರುವ ತೀರ್ಮಾನಕ್ಕೆ ಚಾಮರಾಜಪೇಟೆ ನಾಗರಿಕರ ಒಕ್ಕೂಟದಲ್ಲಿ ಬಿರುಕು ಕಾಣಿಸಿಕೊಂಡಿದೆ. ಗಣೇಶೋತ್ಸವ ಆಚರಣೆ ಕುರಿತಂತೆ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ರುಕ್ಮಾಂಗದ ಏಕಾಏಕಿ ತೀರ್ಮಾನ ಕೈಗೊಂಡಿದ್ದಾರೆ ಎಂದು ಒಕ್ಕೂಟದ ಅಧ್ಯಕ್ಷ ರಾಮೇಗೌಡ ಹಾಗೂ ಕೆಲ ಸದಸ್ಯರು ಆರೋಪಿಸಿದ್ದಾರೆ.

ಜಮೀರ್ ಜೊತೆ ರಾಮೇಗೌಡ ಶಾಮೀಲು: ರುಕ್ಮಾಂಗದ ಕಿಡಿ
ಗಣೇಶೋತ್ಸವಕ್ಕೆ ಯಾರದೇ ವಿರೋಧ ಇಲ್ಲ. ಆದರೆ, ರಾಮೇಗೌಡರು ಶಾಸಕ ಜಮೀರ್ ಆಹ್ಮದ್‍ಖಾನ್ ಅವರೊಂದಿಗೆ ಷಾಮಿಲ್ಲಾಗಿ ವಿನಾಕಾರಣ ಹೇಳಿಕೆ ನೀಡುತ್ತಿದ್ದಾರೆ ಎಂದು ರುಕ್ಮಾಂಗದ ಕಿಡಿ ಕಾರಿದ್ದಾರೆ. ಜಯ ಚಾಮರಾಜೇಂದ್ರ ಒಡೆಯರ್ ಮೈದಾನದಲ್ಲಿ ಗಣೇಶೋತ್ಸವ ನಡೆಸಲು ಬೆಂಗಳೂರು ಗಣೇಶೋತ್ಸವ ಸಮಿತಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿದೆ. ಆದರೆ, ಕೆಲವರು ವಿವಾದ ಸೃಷ್ಟಿಸಲು ಹವಣಿಸುತ್ತಿದ್ದಾರೆ ಎಂದು ಅವರು ದೂರಿದ್ದಾರೆ.

ತಿರುಗೇಟು
ರುಕ್ಮಾಂಗದ ಹೇಳಿಕೆಗೆ ತಿರುಗೇಟು ನೀಡಿರುವ ರಾಮೇಗೌಡರು ನಾನು ಶಾಸಕರ ಜೊತೆ ಸೇರಿಲ್ಲ. ಅವರೇ ಪಿತೂರಿ ನಡೆಸುತ್ತಿದ್ದಾರೆ. ಇದರಲ್ಲಿ ಬಿಜೆಪಿ ಕೈವಾಡ ಇರಬಹುದು ಎಂಬ ಶಂಕೆ ಇದೆ ಎಂದಿದ್ದಾರೆ. ಗಣೇಶೋತ್ಸವ ಆಚರಿಸಲು ನಾವು ಬೆಂಗಳೂರು ಗಣೇಶೋತ್ಸವ ಸಮಿತಿ ಜೊತೆ ನಾವು ಸೇರುವುದಿಲ್ಲ. ಅವರೇ ಬೇಕಾದರೆ ನಮ್ಮೊಂದಿಗೆ ಬರಲಿ ಎಂದು ಸಲಹೆ ನೀಡಿದ್ದಾರೆ.

ಬಿಬಿಎಂಪಿ ಸಭೆ
ಈ ಎಲ್ಲ ಬೆಳವಣಿಗೆಗಳ ನಡುವೆ ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅನುಮತಿ ನೀಡಬೇಕೇ, ಬೇಡವೇ ಎಂದು ಬಿಬಿಎಂಪಿ ಅಧಿಕಾರಿಗಳು ಮತ್ತು ಪೊಲೀಸರು ಸಭೆ ನಡೆಸುತ್ತಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com