ಸ್ಮಾರ್ಟ್ ಸಿಟಿ: ಕಮರ್ಷಿಯಲ್ ಸ್ಟ್ರೀಟ್ ಬಳಿಕ ವಿವಿ ಪುರಂ ಫುಡ್ ಸ್ಟ್ರೀಟ್'ಗೆ ಹೊಸ ಲುಕ್ ಕೊಡುವತ್ತ ಬಿಬಿಎಂಪಿ ಗಮನ!

ಸ್ಮಾರ್ಟ್ ಸಿಟಿ ಬೆಂಗಳೂರು ಲಿಮಿಟೆಡ್ ಅಡಿಯಲ್ಲಿ ಚರ್ಚ್ ಸ್ಟ್ರೀಟ್ ಮತ್ತು ಕಮರ್ಷಿಯಲ್ ಸ್ಟ್ರೀಟ್‌ಗಳಿಗೆ ಹೊಸ ರೂಪ ನೀಡುವಲ್ಲಿ ಯಶಸ್ವಿಯಾಗಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಇದೀಗ ವಿವಿ ಪುರಂ ಫುಡ್ ಸ್ಟ್ರೀಟ್ ಮತ್ತು ಸಜ್ಜನ್ ರಾವ್ ಸರ್ಕಲ್‌ ನತ್ತ ಗಮನಹರಿಸಿದೆ.
ವಿವಿ ಪುರಂ ಫುಡ್ ಸ್ಟ್ರೀಟ್
ವಿವಿ ಪುರಂ ಫುಡ್ ಸ್ಟ್ರೀಟ್
Updated on

ಬೆಂಗಳೂರು: ಸ್ಮಾರ್ಟ್ ಸಿಟಿ ಬೆಂಗಳೂರು ಲಿಮಿಟೆಡ್ ಅಡಿಯಲ್ಲಿ ಚರ್ಚ್ ಸ್ಟ್ರೀಟ್ ಮತ್ತು ಕಮರ್ಷಿಯಲ್ ಸ್ಟ್ರೀಟ್‌ಗಳಿಗೆ ಹೊಸ ರೂಪ ನೀಡುವಲ್ಲಿ ಯಶಸ್ವಿಯಾಗಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಇದೀಗ ವಿವಿ ಪುರಂ ಫುಡ್ ಸ್ಟ್ರೀಟ್ ಮತ್ತು ಸಜ್ಜನ್ ರಾವ್ ಸರ್ಕಲ್‌ ನತ್ತ ಗಮನಹರಿಸಿದೆ.

ಈ ಕುರಿತು ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಮ್ ರಾಯಪುರ ಅವರು ಮಾತನಾಡಿ, “ವಿವಿ ಪುರಂ ಫುಡ್ ಸ್ಟ್ರೀಟ್ ನ ಆರು ಸ್ಥಳಗಳಲ್ಲಿ ಹ್ಯಾಂಡ್ ವಾಶ್, ಜನರು ಕುಳಿತು ತಿನ್ನಲು ಅಲಂಕಾರಿಕ ಬೆಂಚ್‌ಗಳು ಮತ್ತು ವ್ಯವಸ್ಥಿತ ಪಾರ್ಕಿಂಗ್‌ನಂತಹ ಸೌಕರ್ಯಗಳ ಒದಗಿಸುವತ್ತ ಹೆಚ್ಚಿನ ಗಮನ ಹರಿಸಲಾಗುತ್ತಿದೆ. ಜನರು ಮುಕ್ತವಾಗಿ ನಡೆಯಲು ಮತ್ತು ಊಟ ಮಾಡಲು ಅನುವು ಮಾಡಿಕೊಡಲು ಸಂಜೆ 6 ಗಂಟೆಯ ನಂತರ ವಾಹನ ಸವಾರರಿಗೆ ರಸ್ತೆಯನ್ನು ಬಂದ್ ಮಾಡಲು ನಿರ್ಧರಿಸಲಾಗಿದೆ. ರೂ. 6 ಕೋಟಿ ವೆಚ್ಚದಲ್ಲಿ ಯೋಜನೆ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಈ ಭಾಗದ ಎಲ್ಲಾ 39 ಸ್ಟಾಲ್ ಮಾಲೀಕರನ್ನು ಬಿಬಿಎಂಪಿ ವಿಶ್ವಾಸಕ್ಕೆ ತೆಗೆದುಕೊಂಡಿದ್ದು, ಯೋಜನೆಗೆ ಮಂಗಳವಾರ ಶಂಕುಸ್ಥಾಪನೆ ನೆರವೇರಲಿದೆ. ನಂತರ ಕೆಲಸಗಳು ಪ್ರಾರಂಭವಾಗಲಿದೆ ಎಂದು ಹೇಳಿದರು.

ಕೆಲಸಗಳು ಒಮ್ಮೆ ಪೂರ್ಣಗೊಂಡರೆ, ಯೋಜನೆಯು "ಮಾದರಿ ರಸ್ತೆ" ಆಗಿ ಕಾರ್ಯನಿರ್ವಹಿಸುತ್ತದೆ ಮತ್ತು ಆಹಾರ ಪ್ರಿಯರಿಗೆ ಬೆಂಗಳೂರು ಪ್ರಮುಖ ನಗರವಾಗಲಿದೆ ಎಂದು ತಿಳಿಸಿದರು.

ತೆರೆದ ಸ್ಥಳಗಳೂ ಕೂಡ ಲಭ್ಯವಿರಲಿದ್ದು, ಅದನ್ನೂ ಅಭಿವೃದ್ಧಿಪಡಿಸಲಾಗುತ್ತಿದೆ. ಅಂತಹ ಸ್ಥಳಗಳಲ್ಲಿ ಚಿತ್ರಮಂದಿರಗಳನ್ನು ತೆರೆಯುವ ಮೂಲಕ ಸಾಂಸ್ಕೃತಿಕ ಚಟುವಟಿಕೆಗಳನ್ನು ಉತ್ತೇಜಿಸುವ ಗುರಿಯನ್ನು ನಾವು ಹೊಂದಿದ್ದೇವೆ ಎಂದರು.

ನೀರಿನ ಚರಂಡಿಯ ಒಳಭಾಗದಲ್ಲಿ 900 ವ್ಯಾಸದ ಪೈಪ್ ಡಕ್ಟ್‌ಗಳನ್ನು ಹಾಕುವುದು, ಮೇಲ್ಮೈಯನ್ನು ಕಾಂಕ್ರೀಟ್ ಮಾಡುವುದು, ಫುಟ್‌ಪಾತ್‌ಗಳನ್ನು ಸರಿಪಡಿಸುವುದು, ಪ್ರತಿ ಸ್ಟಾಲ್‌ನಲ್ಲಿ ತೈಲ ಮತ್ತು ಗ್ರೀಸ್ ಟ್ರ್ಯಾಪ್ ಅನ್ನು ಸ್ಥಾಪಿಸುವುದು, ಹಸಿರು ತ್ಯಾಜ್ಯಕ್ಕಾಗಿ ಬಣ್ಣದ ಕೋಡ್ ಬಿನ್‌ಗಳನ್ನು ಒದಗಿಸುವುದು ಮತ್ತು ಉತ್ತಮ ಫಲಕಗಳನ್ನು ಹಾಕುವಂತೆ ಮಾಡುವುದು. ರಸ್ತೆಗಳಿಗೆ ಡೇಟಾ ಕೇಬಲ್‌ಗಳು ಮತ್ತು ಪ್ರತಿ ಅಂಗಡಿಗೆ ವಿದ್ಯುತ್ ಕೇಬಲ್ ಸಂಪರ್ಕಗಳನ್ನೂ ಕೂಡ ಯೋಜನೆಯಲ್ಲಿ ಒದಗಿಸಲಾಗುತ್ತಿದೆ. ಇದರಲ್ಲಿ ಅಲಂಕಾರಿಕ ದೀಪಗಳೂ ಕೂಡ ಇರಲಿದೆ.  ಪಾದಚಾರಿ ಮಾರ್ಗವನ್ನು ಸ್ವಲ್ಪಮಟ್ಟಿಗೆ ವಿಸ್ತರಿಸಲಾಗುವುದು ಎಂದು ತಿಳಿಸಿದರು.

"ಪುನರಾಭಿವೃದ್ಧಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಅಗತ್ಯವಿದ್ದರೆ ಇತರ ಪ್ರದೇಶಗಳಲ್ಲಿ ಮಾದರಿಯನ್ನು ಪುನರಾವರ್ತಿಸಲಾಗುವುದು. ಕಾಮಗಾರಿ ಕೆಲಸಗಳು ಡಿಸೆಂಬರ್ ಅಂತ್ಯದಲ್ಲಿ ಆರಂಭವಾಗಿ ಸಂಕ್ರಾಂತಿ ವೇಳೆಗೆ ಮುಕ್ತಾಯವಾಗಲಿದೆ. ‘ಅವರೆಕಾಯಿ ಮೇಳ’ಕ್ಕೆ ತೊಂದರೆಯಾಗದಂತೆ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com