ಬೆಂಗಳೂರು: ಹುಟ್ಟುಹಬ್ಬದ ದಿನವೇ ಬೈಕ್ ಅಪಘಾತದಲ್ಲಿ ಯುವಕನಿಗೆ ಗಂಭೀರ ಗಾಯ, ಹಿಂಬದಿ ಸವಾರ ಸಾವು
ಬೆಂಗಳೂರು: ಜನ್ಮದಿನದ ಸಂಭ್ರಮಾಚರಣೆಯಲ್ಲಿದ್ದ ಯುವಕ ಬೈಕ್ ನಲ್ಲಿ ಹೋಗುತ್ತಿದ್ದಾಗ ಜಕ್ಕೂರು ಮೇಲ್ಸೇತುವೆಯಲ್ಲಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಹಿಂಬದಿ ಕುಳಿತಿದ್ದ 20 ವರ್ಷದ ಸನಾ ಸಾಹಿಬಾ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಯುವಕನ ಬಲಗೈ ತುಂಡಾಗಿದ್ದು ಪರಿಸ್ಥಿತಿ ಗಂಭೀರವಾಗಿದೆ.
ಯಲಹಂಕ ಸಂಚಾರ ಪೊಲೀಸ್ ವ್ಯಾಪ್ತಿಯ ಕೆಐಎ ರಸ್ತೆಯಲ್ಲಿ ಈ ದುರ್ಘಟನೆ ನಡೆದಿದೆ. ನಿನ್ನೆ ಝೀೂಶಾನ್ ನ ಹುಟ್ಟುಹಬ್ಬವಾಗಿತ್ತು. ಇಬ್ಬರೂ ವಿಮಾನ ನಿಲ್ದಾಣದ ಕಡೆಗೆ ಸವಾರಿ ಮಾಡುತ್ತಿದ್ದರು, ಈ ವೇಳೆ ಬೈಕ್ ನಿಯಂತ್ರಣ ಕಳೆದುಕೊಂಡು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದ್ದಾರೆ. ಸಾಹಿಬಾ ತಲೆಗೆ ಮಾರಣಾಂತಿಕ ಗಾಯಗಳಾಗಿದ್ದು, ಝೀಶಾನ್ ಅವರ ಬಲಗೈ ಭುಜದ ಮೇಲೆ ಗಂಭೀರ ಗಾಯಗಳಾಗಿದೆ.
ಸನಾ ಸಾಹಿಬಾ ಬೆನ್ಸನ್ ಟೌನ್ ಸಮೀಪದ ಚಿನ್ನಪ್ಪ ಗಾರ್ಡನ್ ನಿವಾಸಿಯಾಗಿದ್ದು, ಫ್ರೇಜರ್ ಟೌನ್ ನ ಖಾಸಗಿ ಕಾಲೇಜಿನ ಪಿಯು ವಿದ್ಯಾರ್ಥಿನಿಯಾಗಿದ್ದರು. ಅಪಘಾತವಾದ ತಕ್ಷಣ ಇಬ್ಬರನ್ನೂ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಲ್ಲಿ ಸಾಹಿಬಾ ಮೃತಪಟ್ಟರು. ಝೀಶನ್ ಚಿಕಿತ್ಸೆ ಪಡೆಯುತ್ತಿದ್ದು, ಸ್ಥಿತಿ ಚಿಂತಾಜನಕವಾಗಿದೆ. ಅತಿವೇಗವೇ ಅಪಘಾತಕ್ಕೆ ಕಾರಣ ಎಂದು ಯಲಹಂಕ ಸಂಚಾರ ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ