ಬೆಂಗಳೂರು: ಮತ್ತೆ ಮಳೆ ಮುನ್ಸೂಚನೆ, ನಿವಾಸಿಗಳಿಗೆ ಆತಂಕ; ಟೆಕ್, ಇ-ಕಾಮರ್ಸ್ ಕಂಪನಿಗಳ ಮೇಲೆ ಹೆಚ್ಚಿನ ಪರಿಣಾಮ

ಗುರುವಾರ ಮುಂಜಾನೆ ಕಂಡುಬಂದ ಮೋಡ ಕವಿದ ವಾತಾವರಣದ ಮುನ್ಸೂಚನೆಯು ಸ್ವಲ್ಪಮಟ್ಟಿಗೆ ಮಳೆಯಾಗುವ ಮುನ್ಸೂಚನೆ ನೀಡಿದ್ದರಿಂದ ಮಳೆಯಿಂದ ಜರ್ಜರಿತವಾಗಿರುವ ಬೆಂಗಳೂರಿನ ನಾಗರಿಕರಲ್ಲಿ ಮತ್ತೆ ಆತಂಕ ಉಂಟುಮಾಡಿದೆ.
ಅಗ್ನಿಶಾಮಕ ಸಿಬ್ಬಂದಿ ಬುಧವಾರ ಬೆಂಗಳೂರಿನ ವಿಲ್ಲಾದಿಂದ ಡೇನಿಯಲ್ ಮತ್ತು ಪ್ರೇಮಿಕಾ ಅವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದರು.
ಅಗ್ನಿಶಾಮಕ ಸಿಬ್ಬಂದಿ ಬುಧವಾರ ಬೆಂಗಳೂರಿನ ವಿಲ್ಲಾದಿಂದ ಡೇನಿಯಲ್ ಮತ್ತು ಪ್ರೇಮಿಕಾ ಅವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದರು.

ಬೆಂಗಳೂರು: ಗುರುವಾರ ಮುಂಜಾನೆ ಕಂಡುಬಂದ ಮೋಡ ಕವಿದ ವಾತಾವರಣದ ಮುನ್ಸೂಚನೆಯು ಸ್ವಲ್ಪಮಟ್ಟಿಗೆ ಮಳೆಯಾಗುವ ಮುನ್ಸೂಚನೆ ನೀಡಿದ್ದರಿಂದ ಮಳೆಯಿಂದ ಜರ್ಜರಿತವಾಗಿರುವ ಬೆಂಗಳೂರಿನ ನಾಗರಿಕರಲ್ಲಿ ಮತ್ತೆ ಆತಂಕ ಉಂಟುಮಾಡಿದೆ. ಹಿಂದಿನ ದಿನ ಮಳೆ ಕೊಂಚ ಬಿಡುವು ಕೊಟ್ಟಿದ್ದರಿಂದ ಜಲಾವೃತ ಪ್ರದೇಶಗಳಲ್ಲಿ ನೀರಿನ ಮಟ್ಟ ನಿಧಾನವಾಗಿ ಕಡಿಮೆಯಾಗಿದೆ.

ಜಲಾವೃತಗೊಂಡ ಪ್ರದೇಶಗಳು ಮತ್ತು ಅಪಾರ್ಟ್‌ಮೆಂಟ್‌ಗಳ ನಿವಾಸಿಗಳು ಮನೆಯಲ್ಲಿನ ನೀರನ್ನು ಹೊರಹಾಕಲು ಮತ್ತು ಬೇಸ್‌ಮೆಂಟ್‌ಗಳಲ್ಲಿ ತುಂಬಿದ್ದ ಕೊಳಚೆಯನ್ನು ತೆಗೆಯಲು ಪ್ರಯತ್ನಿಸುತ್ತಿದ್ದಾರೆ.

ಮಳೆಯಿಂದಾಗಿರುವ ಹಾನಿಯನ್ನು ಸರಿಪಡಿಸಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದು, ಕೆಲವು ಹೆಚ್ಚು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಿಲ್ಲದೆ ಮತ್ತು ಕುಡಿಯುವ ನೀರಿನ ಲಭ್ಯತೆಯಿಲ್ಲದೆ ಕತ್ತಲೆಯಲ್ಲಿಯೇ ಉಳಿಯುವಂತಾಗಿದೆ.

ರಸ್ತೆಗಳ ಮೇಲೆ ನೀರು ನಿಂತಿದ್ದ ನಗರದ ಬಹುತೇಕ ಭಾಗಗಳಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ದಾರಿ ಮಾಡಿಕೊಟ್ಟಿದ್ದು, ಹೊರ ವರ್ತುಲ ರಸ್ತೆ ಮತ್ತು ಮಾರತ್ತಹಳ್ಳಿ ಮತ್ತು ಸಮೀಪದ ಪ್ರದೇಶಗಳಲ್ಲಿ ಇನ್ನೂ ಕೆಲವು ರಸ್ತೆಗಳಲ್ಲಿ ನೀರು ನಿಂತಿರುವುದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಅಲ್ಲದೆ, ತೀವ್ರ ಮಳೆಯಿಂದಾಗಿ ರಸ್ತೆಗಳಲ್ಲಿ ಉಂಟಾಗಿದ್ದ ಗುಂಡಿಗಳು ನಗರದ ವಾಹನ ಸವಾರರನ್ನು ಅದರಲ್ಲೂ ದ್ವಿಚಕ್ರ ವಾಹನ ಸವಾರರನ್ನು ಕಾಡುತ್ತಲೇ ಇವೆ.

ಸಂಬಂಧಿಕರು ಅಥವಾ ಸ್ನೇಹಿತರ ಸ್ಥಳಗಳು ಅಥವಾ ಹೋಟೆಲ್‌ಗಳಂತಹ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಂಡಿದ್ದ ಪ್ರವಾಹ ಪೀಡಿತ ಪ್ರದೇಶಗಳು ಮತ್ತು ಅಪಾರ್ಟ್‌ಮೆಂಟ್‌ಗಳ ಕೆಲವು ನಿವಾಸಿಗಳು, ಮನೆಯಲ್ಲಿನ ಅವಾಂತರವನ್ನು ನೋಡಲು ಮತ್ತು ಶುಚಿಗೊಳಿಸಲು ಮತ್ತೆ ತಮ್ಮ ತಮ್ಮ ಮನೆಗಳಿಗೆ ಮರಳುತ್ತಿದ್ದಾರೆ.

ಪರಿಸ್ಥಿತಿ ಸ್ವಲ್ಪಮಟ್ಟಿಗೆ ಸುಧಾರಿಸಿದ್ದರಿಂದ, ನಾನು ನನ್ನ ಮನೆಯನ್ನು ಪರೀಕ್ಷಿಸಲು ಮತ್ತು ಸ್ವಚ್ಛಗೊಳಿಸಲು ಬಂದಿದ್ದೇನೆ. ಆದರೆ, ನೀರನ್ನು ತೆಗೆಯಲು ಪಂಪ್‌ಗಳ ಕೊರತೆಯಿದೆ. ಏಕೆಂದರೆ ಅವುಗಳಿಗೆ ಈಗ ಉತ್ತಮ ಬೇಡಿಕೆಯಿದೆ. ಇದರೊಂದಿಗೆ ಸ್ವಚ್ಛಗೊಳಿಸಲು ಕಾರ್ಮಿಕರ ಕೊರತೆಯು ಇದೆ. ಈಗ ಅವರನ್ನು ಹುಡುಕಬೇಕು. ವಿದ್ಯುತ್ ಕಡಿತವೂ ಆಗಿದೆ. ಮತ್ತೆ ಹೆಚ್ಚಿನ ಮಳೆ ಬರುವುದಿಲ್ಲ ಎಂದು ಭಾವಿಸುತ್ತೇವೆ' ಎಂದು ಯೆಮಲೂರು ಬಳಿಯ ನಿವಾಸಿಯೊಬ್ಬರು ಹೇಳುತ್ತಾರೆ. ಆದರೂ, ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣ ಮತ್ತು ಅಲ್ಲಲ್ಲಿ ತುಂತುರು ಮಳೆಯಾಗಿದೆ.

ಪ್ರವಾಹದ ನೀರಿನಲ್ಲಿ ಬೇಸ್‌ಮೆಂಟ್‌ನಲ್ಲಿ ಮುಳುಗಿರುವ ಅಪಾರ್ಟ್‌ಮೆಂಟ್‌ಗಳ ಜನರೇಟರ್‌ಗಳು ಮತ್ತು ಪವರ್ ಬ್ಯಾಕ್‌ಅಪ್ ಉಪಕರಣಗಳು ಬಹುತೇಕ ಹಾನಿಗೊಳಗಾಗಿವೆ.

ಅಲ್ಲದೆ, ಅಧಿಕಾರಿಗಳ ಪ್ರಕಾರ ಬೇಸ್‌ಮೆಂಟ್‌ನಲ್ಲಿ ಇನ್ನೂ ನೀರು ತುಂಬಿರುವ ಅಪಾರ್ಟ್‌ಮೆಂಟ್‌ಗಳಿಗೆ ಈಗಲೇ ವಿದ್ಯುತ್ ಪೂರೈಕೆಯನ್ನು ಮರುಸ್ಥಾಪಿಸುವುದು ಸುರಕ್ಷಿತವಲ್ಲ ಎನ್ನುತ್ತಾರೆ.

ಪ್ರವಾಹದ ಕಾರಣದಿಂದಾಗಿ ಭಾಗಶಃ ಅಥವಾ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿರುವ ಕಾರುಗಳು ಮತ್ತು ಬೈಕ್‌ಗಳಂತಹ ತಮ್ಮ ವಾಹನಗಳನ್ನು ಪಡೆಯಲು ಮಾಲೀಕರು ಪ್ರಯತ್ನಿಸುತ್ತಿರುವುದು ಈ ಪ್ರದೇಶಗಳ ಭಾಗಗಳಲ್ಲಿ ಕಂಡುಬರುತ್ತಿರುವ ಸಾಮಾನ್ಯ ದೃಶ್ಯವಾಗಿದೆ.

ಈ ಮಧ್ಯೆ ಗುರುವಾರ ಬೆಳಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಮುಂದಿನ 48 ಗಂಟೆಗಳ ಕಾಲ ನಗರದಲ್ಲಿ ಸಾಧಾರಣ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.

ನಗರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಇತ್ತೀಚೆಗೆ ಉಂಟಾಗಿರುವ ಪ್ರವಾಹದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಐಟಿ ಕಂಪನಿಗಳು ಬುಧವಾರ ಕರ್ನಾಟಕ ಐಟಿ/ಬಿಟಿ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ್ ಅವರ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದು, ಮಳೆ ಸಂಬಂಧಿತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತೆ ಒತ್ತಾಯಿಸಿದ್ದಾರೆ.

ಇ-ಕಾಮರ್ಸ್ ಕಂಪನಿಗಳು, ವಿಶೇಷವಾಗಿ ಅವರ ಡೆಲಿವರಿ ಬಾಯ್‌ಗಳು, ನಗರದಲ್ಲಿ ಎರಡು ದಿನಗಳ ಕಾಲ ಸುರಿದ ಭಾರಿ ಮಳೆಯಿಂದಾಗಿ ಬೆಂಗಳೂರಿನ ಕೆಲವು ಭಾಗಗಳು ಪ್ರವಾಹಕ್ಕೆ ಒಳಗಾದಾಗ ಗ್ರಾಹಕರಿಗೆ ಉತ್ಪನ್ನಗಳನ್ನು ಪೂರೈಸಲು ತೊಂದರೆಯನ್ನು ಅನುಭವಿಸಿದರು.

ಜಲಾವೃತಗೊಂಡಿರುವ ಸರ್ಜಾಪುರ, ಬೆಳ್ಳಂದೂರು, ವರ್ತೂರು, ವೈಟ್‌ಫೀಲ್ಡ್ ಮತ್ತು ಹೊರ ವರ್ತುಲ ರಸ್ತೆಯ ಕೆಲವು ಭಾಗಗಳಲ್ಲಿ ಸಂಚಾರ ದುಸ್ತರವಾಗಿದೆ. ಪ್ರವಾಹ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಈ ಇ-ಕಾಮರ್ಸ್ ಕಂಪನಿಗಳು ತಮ್ಮ ಸೇವೆಗಳನ್ನು ಸ್ವಲ್ಪ ಸಮಯದವರೆಗೆ ಸ್ಥಗಿತಗೊಳಿಸಿವೆ.

ಪ್ರಮುಖ ಇ-ಕಾಮರ್ಸ್ ಕಂಪನಿಯ ಕಾರ್ಯನಿರ್ವಾಹಕರು ಸುದ್ದಿಸಂಸ್ಥೆ ಪಿಟಿಐ ಜೊತೆ ಮಾತನಾಡಿ, ಪ್ರವಾಹದ ಮಧ್ಯೆ ನಮ್ಮ ಡೆಲಿವರಿ ಬಾಯ್‌ಗಳು ಅಲ್ಲಿಗೆ ತಲುಪಲು ಸಾಧ್ಯವಾಗದ ಕಾರಣ ಅಂತಹ ಕೆಲವು ಸ್ಥಳಗಳಲ್ಲಿ ಸೇವೆಗಳನ್ನು ಸ್ಥಗಿತಗೊಳಿಸಬೇಕಾಯಿತು. ಪರಿಸ್ಥಿತಿ ಸುಧಾರಿಸುವವರೆಗೂ ಕಾಯುತ್ತಿದ್ದೇವೆ. ಕೆಲವು ಸ್ಥಳಗಳಲ್ಲಿ ಈಗ ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿವೆ' ಎಂದಿದ್ದಾರೆ.

ನಗರದಲ್ಲಿ ಕಳೆದ ಎರಡು ದಿನಗಳಿಂದ ಧಾರಾಕಾರ ಮಳೆಯಾಗಿದ್ದು, ಹಲವು ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿದೆ. ಮಳೆ ಸಂಬಂಧ ಮಹಿಳೆಯೊಬ್ಬರು ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದಾರೆ.

ಈಮಧ್ಯೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮಳೆನೀರು ಸರಾಗವಾಗಿ ಹರಿಯಲು ಅಡ್ಡಿಪಡಿಸುವ ಕೆರೆಗಳು ಮತ್ತು ಮಳೆನೀರು ಚರಂಡಿಗಳ ಅತಿಕ್ರಮಣವನ್ನು ನೆಲಸಮಗೊಳಿಸುವ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com