ದೊಡ್ಡಬಳ್ಳಾಪುರ, ದೇವನಹಳ್ಳಿ, ನೆಲಮಂಗಲ ಸ್ಯಾಟಲೈಟ್ ಟೌನ್ ಆಗಿ ಅಭಿವೃದ್ದಿ: ಸಿಎಂ ಬೊಮ್ಮಾಯಿ ಘೋಷಣೆ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ, ದೇವನಹಳ್ಳಿ, ನೆಲಮಂಗಲವನ್ನು ಸ್ಯಾಟಲೈಟ್ ಟೌನ್ ಆಗಿ ಅಭಿವೃದ್ದಿಪಡಿಸಲಾಗುತ್ತದೆ ಎಂದು ಸಿಎಂ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.
ಸಿಎಂ ಬೊಮ್ಮಾಯಿ
ಸಿಎಂ ಬೊಮ್ಮಾಯಿ
Updated on

ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ, ದೇವನಹಳ್ಳಿ, ನೆಲಮಂಗಲವನ್ನು ಸ್ಯಾಟಲೈಟ್ ಟೌನ್ ಆಗಿ ಅಭಿವೃದ್ದಿಪಡಿಸಲಾಗುತ್ತದೆ ಎಂದು ಸಿಎಂ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶನಿವಾರ ದೊಡ್ಡಬಳ್ಳಾಪುರದಲ್ಲಿ ನಡೆದ ಜನಸ್ಪಂದನದಲ್ಲಿ ಮೂರು ಲಕ್ಷಕ್ಕೂ ಅಧಿಕ ಜನಸಮೂಹದ ಮುಂದೆ ತಮ್ಮ ಒಂದು ವರ್ಷದ ಆಡಳಿತ ಮತ್ತು ಮೂರು ವರ್ಷಗಳ ಬಿಜೆಪಿ ಸರ್ಕಾರದ ಪ್ರಗತಿ ವರದಿಯನ್ನು ಮಂಡಿಸಿದರು ಮತ್ತು ವಿಶೇಷವಾಗಿ ತಮ್ಮ ಸರ್ಕಾರದ ಯೋಜನೆಗಳನ್ನು ಪಟ್ಟಿ ಮಾಡಿದರು.

ಒಣಗಿದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು, ತುಮಕೂರು ಜಿಲ್ಲೆಗಳಿಗೆ ನೀರು ಹರಿಸಲು ಎತ್ತಿನಹೊಳೆ ಏತ ನೀರಾವರಿ ಯೋಜನೆಯನ್ನು ಶೀಘ್ರ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು. ದೇವನಹಳ್ಳಿ, ನೆಲಮಂಗಲ ಮತ್ತು ದೊಡ್ಡಬಳ್ಳಾಪುರವನ್ನು ಐಟಿ ರಾಜಧಾನಿ ಬೆಂಗಳೂರಿನ ಸ್ಯಾಟಲೈಟ್ ಟೌನ್‌ಗಳಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಅವರು ಘೋಷಿಸಿದರು.

ತಮ್ಮ ಸರ್ಕಾರವು 'ರೈತ ವಿದ್ಯಾನಿಧಿ,  ಸಂಧ್ಯಾ ಸುರಕ್ಷಾ ಸೇರಿದಂತೆ ಸಾಮಾಜಿಕ ಭದ್ರತಾ ಯೋಜನೆಗಳ ಅಡಿಯಲ್ಲಿ ವಿಧವೆಯರು ಮತ್ತು ಅಂಗವಿಕಲರಿಗೆ ಪಿಂಚಣಿಯನ್ನು ಹೆಚ್ಚಿಸಿದೆ. ಹೊಸ ಸ್ಕಾಲರ್‌ಶಿಪ್ ಯೋಜನೆಗಳು ನೇಕಾರರು ಮತ್ತು ಮೀನುಗಾರರ 20 ಲಕ್ಷಕ್ಕೂ ಹೆಚ್ಚು ಮಕ್ಕಳನ್ನು ಒಳಗೊಂಡಿದ್ದು, ಇದಕ್ಕಾಗಿ ಸರ್ಕಾರದ 1,042 ಕೋಟಿ ರೂ ಅನುದಾನ ಮೀಸಲಿರಿಸಲಾಗಿದೆ ಎಂದು ಹೇಳಿದರು.

ಅಂತೆಯೇ SC/ST ಮತ್ತು OBC ಸಮುದಾಯಗಳ ವಿದ್ಯಾರ್ಥಿಗಳಿಗೆ ಹೊಸ ಹಾಸ್ಟೆಲ್‌ಗಳು ಮತ್ತು SC/ST ಮತ್ತು BPL ಕುಟುಂಬಗಳಿಗೆ 75 ಯೂನಿಟ್‌ಗಳ ಉಚಿತ ವಿದ್ಯುತ್‌ನ ಕುರಿತು ಉಲ್ಲೇಖಿಸಿದ ಸಿಎಂ, "ಕಾಂಗ್ರೆಸ್ ಆಡಳಿತದ ರಾಜ್ಯಗಳು ಕೋವಿಡ್ ಸಾಂಕ್ರಾಮಿಕವನ್ನು ನಿರ್ವಹಿಸಲು ದಯನೀಯವಾಗಿ ವಿಫಲವಾಗಿವೆ, ಆದರೆ ಅಂದಿನ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಎಲ್ಲರಿಗೂ ಚಿಕಿತ್ಸೆ ನೀಡುವ ಮೂಲಕ ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ನಿಭಾಯಿಸಿದರು ಮತ್ತು ನಿರುದ್ಯೋಗ ಸಮಸ್ಯೆಗೂ ಸ್ಪಂದಿಸಿದರು. ‘ನವ ಕರ್ನಾಟಕ’ದಿಂದ ‘ನವ ಭಾರತ’ ನಿರ್ಮಿಸಲು ರಾಜ್ಯವು ಎಲ್ಲ ಕ್ಷೇತ್ರಗಳಲ್ಲಿ ಮುನ್ನಡೆಯಬೇಕು ಎಂದರು.

ಹೊಸ ಶಿಕ್ಷಣ ನೀತಿ, ಸೆಮಿಕಂಡಕ್ಟರ್ ನೀತಿ, ಕೈಗಾರಿಕಾ ನೀತಿ, ಆರ್ & ಡಿ ನೀತಿ ಮತ್ತು ಉದ್ಯೋಗ ನೀತಿಗಳನ್ನು ಜಾರಿಗೆ ತರಲು ತಮ್ಮ ಸರ್ಕಾರ ಮುಂದಾಗಿದೆ. “ಡಬಲ್ ಇಂಜಿನ್ ಸರ್ಕಾರ, ಪ್ರಧಾನಿ ಮೋದಿಯವರ ಆಶೀರ್ವಾದದೊಂದಿಗೆ, ಕೇಂದ್ರದ ನೀತಿಗಳನ್ನು ಫಲಾನುಭವಿಗಳಿಗೆ ಕೊಂಡೊಯ್ಯುತ್ತಿದೆ ಮತ್ತು ವರದಿಯನ್ನು ಪ್ರಧಾನಿಗೆ ಸಲ್ಲಿಸುತ್ತದೆ. ನಾವು ಆಡಳಿತಕ್ಕೆ ಅರ್ಹರು ಎಂಬುದನ್ನು ಸಾಬೀತುಪಡಿಸುತ್ತೇವೆ ಎಂದರು.

ಇದೇ ವೇಳೆ ರೈತರ ಅಭ್ಯುದಯಕ್ಕಾಗಿ ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟಿದ್ದೇನೆ ಎಂದು ಹೇಳಿದ ಯಡಿಯೂರಪ್ಪ, ಮೋದಿ ಸರ್ಕಾರ ಪ್ರತಿ ರೈತನಿಗೆ ವಾರ್ಷಿಕ 6 ಸಾವಿರ ರೂಪಾಯಿ ಧನಸಹಾಯ ಘೋಷಿಸಿದಾಗ ನನ್ನ ಸರ್ಕಾರದಿಂದ ಹೆಚ್ಚುವರಿಯಾಗಿ 4 ಸಾವಿರ ರೂ ಘೋಷಿಸಿದ್ದೆ. ರಾಜ್ಯದ ಎರಡು ಕಣ್ಣುಗಳಾದ ನೇಕಾರರು ಮತ್ತು ರೈತರ ಸಾಲ ಮನ್ನಾವನ್ನೂ ಜಾರಿಗೆ ತಂದಿದ್ದೇವೆ ಎಂದರು.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com