ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು ಪೊಲೀಸ್ ಠಾಣೆ ಹೊರಗೆ ವಿಷ ಕುಡಿದ ಯುವತಿ; ಬಾಯ್ ಫ್ರೆಂಡ್ ಬಂಧನ

ಬೊಮ್ಮನಹಳ್ಳಿ ಪೊಲೀಸ್ ಠಾಣೆ ಹೊರಗೆ ಇಲಿ ಪಾಷಾಣ ಬೆರೆಸಿದ ಜ್ಯೂಸಿ ಸೇವಿಸಿ ಯುವತಿಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.

ಬೆಂಗಳೂರು: ಬೊಮ್ಮನಹಳ್ಳಿ ಪೊಲೀಸ್ ಠಾಣೆ ಹೊರಗೆ ಇಲಿ ಪಾಷಾಣ ಬೆರೆಸಿದ ಜ್ಯೂಸಿ ಸೇವಿಸಿ ಯುವತಿಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.

ಆತ್ಮಹತ್ಯೆಗೆ ಯತ್ನಿಸಿದ ಯುವತನಯನ್ನು ದಾವಣಗೆರೆ ಮೂಲಕ ಪ್ರಿಯಾ (ಹೆಸರು ಬದಲಿಸಲಾಗಿದೆ) ಎಂದು ಗುರ್ತಿಸಲಾಗಿದೆ. ಈ ಸಂಬಂಧ ಕ್ವಾಲಿಟಿ ಅನಾಲಿಸ್ಟ್ ಆಗಿರುವ ಯುವತಿಯ ಬಾಯ್ ಫ್ರೆಂಡ್ ಹರ್ಷವರ್ಧನ್ ಎಂಬಾತನನ್ನು ಪೊಲೀಸರು ಆಗಸ್ಟ್ 14 ರಂದು ಬಂಧನಕ್ಕೊಳಪಡಿಸಿದ್ದಾರೆ.

ಖಾಸಗಿ ಕಂಪನಿಯೊಂದಲ್ಲಿ ಗ್ರಾಹಕ ಸೇವಾ ಪ್ರತಿನಿಧಿಯಾಗಿ ಪ್ರಿಯಾ ಕಾರ್ಯನಿರ್ವಹಿಸುತ್ತಿದ್ದಳು. ಇದೇ ಕಂಪನಿಯಲ್ಲಿ ಹರ್ಷವರ್ಧನ್ ಕ್ವಾಲಿಟಿ ಅನಾಲಿಸ್ಟ್ ಆಗಿ ಕೆಲಸ ಮಾಡುತ್ತಿದ್ದ. 2022ರ ಅಕ್ಟೋಬರ್ ನಲ್ಲಿ ಇಬ್ಬರ ಪರಿಚಯವಾಗಿದೆ. ಆರಂಭದಲ್ಲಿ ಸ್ನೇಹಿತರಾಗಿದ್ದ ಇಬ್ಬರ ನಡುವೆ ಪ್ರೀತಿ ಶುರುವಾಗಿದೆ.

ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿದ್ದ ಹರ್ಷವರ್ಧನ್ ನಂತರ ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ನಂತರ ಯುವತಿ ಗರ್ಭಿಣಿಯಾಗುತ್ತಿದ್ದಂತೆಯೇ ಮದುವೆಯಾಗಲು ನಿರಾಕರಿಸಿದ್ದಾನೆ. ಅಲ್ಲದೆ, ಗರ್ಭಪಾತ ಮಾಡಿಸಿಕೊಳ್ಳುವಂತೆ ಒತ್ತಾಯಿಸಿದ್ದಾನೆ. ಈ ವೇಳೆ ಯುವತಿ, ಹರ್ಷವರ್ಧನ್ ಪೋಷಕರೊಂದಿಗೆ ಮಾತುಕತೆ ನಡೆಸಿದ್ದು, ಮದುವೆಗೆ ನಿರಾಕರಿಸಿದ್ದಾರೆ. ಇದರಿಂದ ಬೇಸತ್ತ ಪ್ರಿಯಾ ಜುಲೈ 19 ರಂದು ಹರ್ಷವರ್ಧನ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಳು. ಪೊಲೀಸರು ಹರ್ಷವರ್ಧನ್ ವಿರುದ್ದ ಭಾರತೀಯ ದಂಡ ಸಂಹಿತೆಯ ಇತರ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ದೂರು ಹಿನ್ನೆಲೆಯಲ್ಲಿ ಹರ್ಷವರ್ದನ್ ತಲೆಮರೆಸಿಕೊಂಡಿದ್ದ.

ಆಗಸ್ಟ್ 14 ರಂದು ಯುವಕನನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು. ಈಗಲಾದರೂ ಹರ್ಷವರ್ಧನ್ ತನ್ನನ್ನು ಮದುವೆಯಾಗಲು ಒಪ್ಪುತ್ತಾನೆ ಎಂದು ನಿರೀಕ್ಷಿಸಿದ್ದ ಪ್ರಿಯಾ ಪೊಲೀಸ್ ಠಾಣೆಗೆ ಧಾವಿಸಿದಳು. ಈ ವೇಳೆಯೂ ಯುವಕ ಮತ್ತೆ ಪೊಲೀಸರ ಮುಂದೆಯೇ ಆಕೆಯನ್ನು ಮದುವೆಯಾಗಲು ನಿರಾಕರಿಸಿದ್ದ. ಇದರಿಂತ ಬೇಸರಗೊಂಡ ಪ್ರಿಯಾ ಹತ್ತಿರದ ಜ್ಯೂಸ್ ಅಂಗಡಿಯಿಂದ ಜ್ಯೂಸ್ ಖರೀದಿಸಿ ವಿಷ ಬೆರೆಸಿ, ಕುಡಿದಿದ್ದಾಳೆ. ಈ ವೇಳೆ ಪ್ರಜ್ಞಾಹೀನಳಾಗಿ ಬಿದ್ದ ಯುವತಿಯನ್ನು ಆಟೋ ಚಾಲಕರು ಮತ್ತು ದಾರಿಹೋಕರು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಯುವತಿ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾದ ನಂತರ, ಪೊಲೀಸರು ವೈದ್ಯಕೀಯ-ಕಾನೂನು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದ ವೈದ್ಯರ ಮುಂದೆ ಆಕೆಯ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ.

ಇದೀಗ ಯುವಕನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಮಹಿಳೆಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದ್ದು, ಆಕೆಯ ವಿರುದ್ಧವೂ ಆತ್ಮಹತ್ಯೆಗೆ ಯತ್ನಿಸಿದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ ಬಳಿಕ ಯುವತಿ ದೂರು ಹಿಂಪಡೆಯುತ್ತೇನೆಂದು ಪೊಲೀಸರಿಗೆ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

Related Stories

No stories found.

Advertisement

X
Kannada Prabha
www.kannadaprabha.com