ವಿದ್ಯುತ್‌ ತಂತಿ ತುಳಿದು ತಾಯಿ-ಮಗು ಸಾವು ಪ್ರಕರಣ; ಪೊಲೀಸರ ವಿರುದ್ಧ ಕುಟುಂಬಸ್ಥರ ಅಸಮಾಧಾನ

ವೈಟ್ ಫೀಲ್ಡ್ ಬಳಿ ವಿದ್ಯುತ್ ತಂತಿ ತುಳಿದು ತಾಯಿ ಮತ್ತು ಮಗು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಮಹಿಳೆಯ ಕುಟುಂಬಸ್ಥರು ಪೊಲೀಸರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೃತ ತಾಯಿ ಸೌಂದರ್ಯ ಮತ್ತು ಮಗು
ಮೃತ ತಾಯಿ ಸೌಂದರ್ಯ ಮತ್ತು ಮಗು

ಬೆಂಗಳೂರು: ವೈಟ್ ಫೀಲ್ಡ್ ಬಳಿ ವಿದ್ಯುತ್ ತಂತಿ ತುಳಿದು ತಾಯಿ ಮತ್ತು ಮಗು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಮಹಿಳೆಯ ಕುಟುಂಬಸ್ಥರು ಪೊಲೀಸರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಿರುವ ಕುಟುಂಬಸ್ಥರು, ಪ್ರತೀ ಅಧಿಕಾರಿಯೂ ರೂ.10 ಲಕ್ಷ ಪರಿಹಾರ ನೀಡಬೇಕು ಹಾಗೂ ಸರ್ಕಾರಿ ಉದ್ಯೋಗ ಕೊಡಬೇಕೆಂದು ಆಗ್ರಹಿಸುತ್ತಿದ್ದಾರೆ.

ಪೊಲೀಸರ ತನಿಖೆಯಲ್ಲಿ ಪಾರದರ್ಶಕತೆಯಿಲ್ಲ. ತನಿಖೆಯ ಬಗ್ಗೆ ಯಾವುದೇ ಮಾಹಿತಿಗಳನ್ನೂ ನೀಡುತ್ತಿಲ್ಲ. ನಮಗೆ ಮಾಹಿತಿ ನೀಡದೆಯೇ ತಪ್ಪಿತಸ್ಥ ಅಧಿಕಾರಿಗಳನ್ನು ಬಂಧನವಾದ ಕೆಲವೇ ಗಂಟೆಗಳಲ್ಲಿ ಠಾಣೆಯ ಜಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ. ಬೆಸ್ಕಾಂ ಅಧಿಕಾರಿಗಳ ವಿರುದ್ಧ ನಡೆಸಲಾಗುತ್ತಿರುವ ತನಿಖೆ ಬಗ್ಗೆ ನಮಗೆ ಮಾಹಿತಿ ನೀಡಬೇಕೆಂದು ಹೇಳಿದ್ದಾರೆ.

ಘಟನೆ ಬಳಿಕ ಸ್ಥಳೀಯ ಶಾಸಕರು ಸ್ಥಳಕ್ಕೆ ಬರುವುದಾಗಲೀ ನಮಗೆ ಸಾಂತ್ವನ ಹೇಳುವ ಕೆಲಸವಾಗಲೀ ಮಾಡಲಿಲ್ಲ. ಯಾವೊಬ್ಬ ಅಧಿಕಾರಿ ಕೂಡ ನಮ್ಮನ್ನ ಭೇಟಿ ಮಾಡಲು ಬರಲಿಲ್ಲ ಎಂದು ಕಿಡಿಕಾರಿದ್ದಾರೆ.

ಅಲ್ಲದೆ, ಪತಿಯ ಇಚ್ಛೆಗೆ ವಿರುದ್ಧವಾಗಿ ತಮಿಳುನಾಡಿನ ಕಡಲೂರಿನಲ್ಲಿ ಅಂತ್ಯಕ್ರಿಯೆ ನಡೆಸಬೇಕೆಂದು ಪೊಲೀಸರು ಸೌಂದರ್ಯ ಅವರ ತಾಯಿ ಮೇಲೆ ಒತ್ತಡ ಹೇರಿದ್ದರು ಎಂದು ಆರೋಪಿಸಿದ್ದಾರೆ.

ಈ ನಡುವೆ ಮೃತ ಮಹಿಳೆ ಸೌಂದರ್ಯ ಅವರ ಮರಣೋತ್ತರ ಪರೀಕ್ಷೆ ಭಾನುವಾರ ಪೂರ್ಣಗೊಂಡಿತ್ತು. ಆದರೆ, ಮೃತದೇಹ ಸ್ವೀಕರಿಸಲು ಕುಟುಂಬಸ್ಥರು ವಿಳಂಬ ಮಾಡಿದ್ದು, ಹಲವಾರು ಷರತ್ತುಗಳನ್ನು ಹಾಕಿದ್ದರು ಎಂದು ತಿಳಿದುಬಂದಿದೆ.

ಬಳಿಕ ಅಧಿಕಾರಿಗಳು ಮೃತದೇಹವನ್ನು ಎಕೆಜಿ ಕಾಲೋನಿಯಲ್ಲಿರುವ ಸೌಂದರ್ಯ ಅವರ ನಿವಾಸಕ್ಕೆ ಸ್ಥಳಾಂತರಿಸಿದಾಗ ಕೆಂಡಾಮಂಡಲಗೊಂಡ ಕುಟುಂಬ ಸದಸ್ಯರು ಘೋಷಣೆಗಳನ್ನು ಕೂಗಿ, ಪ್ರತಿಭಟಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com