ಮದುವೆಗೆ ಸಿದ್ಧತೆ....! ಹುತಾತ್ಮ ಯೋಧನ ಕುಟುಂಬಸ್ಥರ ಕನಸು ಈಗ ನುಚ್ಚು ನೂರು!
ಬೆಳಗಾವಿ: ಪಂಜಾಬ್ನ ಬಟಿಂಡಾ ಸೇನಾ ನೆಲೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಯೋಧರಷ್ಟೇ ಅಸುನೀಗಿಲ್ಲ, ಅವರ ಕುಟುಂಬ ಸದಸ್ಯರ ಕನಸುಗಳೂ ಕೂಡ ನುಚ್ಚು ನೂರಾಗಿದೆ.
ಕೆಲ ದಿನಗಳ ಹಿಂದಷ್ಟೇ ಪಂಜಾಬ್ನ ಬಟಿಂಡಾ ಸೇನಾ ನೆಲೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ನಾಲ್ವರು ಹುತಾತ್ಮರಾಗಿದ್ದರು. ನಾಲ್ವರ ಪೈಕಿ ಇಬ್ಬರು ಕರ್ನಾಟಕದ ಯೋಧರಾಗಿದ್ದಾರೆ.
ಇಬ್ಬರು ಯೋಧರ ಪೈಕಿ ಬೆಳಗಾವಿ ಸಮೀಪದ ಬೇನಾಡಿ ಗ್ರಾಮದ ಇಪ್ಪತ್ತೈದು ವರ್ಷದ ಯೋಧ ಸಾಗರ್ ಅಪ್ಪಾಸಾಹೇಬ ಬನ್ನೆ ವಿವಾಹಕ್ಕೆ ಕುಟುಂಬಸ್ಥರು ಸಿದ್ಧತೆ ನಡೆಸುತ್ತಿದ್ದರೆಂದು ತಿಳಿದುಬಂದಿದೆ.
ಸಾಗರ್ ರಜೆಗಾಗಿ ಅರ್ಜಿ ಸಲ್ಲಿಸಿದ್ದರು. ಏಪ್ರಿಲ್ 18 ರಂದು ಗ್ರಾಮಕ್ಕೆ ಬರಬೇಕಿತ್ತು. ಅಷ್ಟರಲ್ಲಾಗಲೇ ದುರ್ಘಟನೆ ಸಂಭವಿಸಿದೆ.
ಕುಟುಂಬಸ್ಥರು ಸಾಗರ್ ಅವರ ವಿವಾಹಕ್ಕೆ ಸಿದ್ಧತೆಗಳನ್ನು ನಡೆಸುತ್ತಿದ್ದರು. ವಧುವಿಗಾಗಿ ಹುಡುಕಾಟ ನಡೆಸಿದ್ದರು. ಈ ನಡುವೆ ಸಾಗರ್ ಅವರು ಗ್ರಾಮಕ್ಕೆ ಬರುವ ಸಲುವಾಗಿ ಲಗೇಜ್ ಪ್ಯಾಕ್ ಮಾಡುತ್ತಿದ್ದ ಸಂದರ್ಭದಲ್ಲಿಯೇ ಗುಂಡಿನ ದಾಳಿಯಲ್ಲಿ ಹುತಾತ್ಮರಾಗಿದ್ದಾರೆ.
ಸಾಗರ್ ಅವರ ತಂದೆ ಕುರಿಗಾಹಿಯಾಗಿದ್ದು, ಇದರಿಂದ ಬರುವ ಆದಾಯವನ್ನು ಅಲವಂಬಿಸಿ ಕುಟುಂಬ ಜೀವನ ನಡಸುತ್ತಿತ್ತು. ಈ ನಡುವೆ ಸಾಗರ್ ಅವರ ಸಾವಿನ ಸುದ್ದಿ ಕೇಳಿ ಕುಟುಂಬದಲ್ಲಿ ಇದೀಗ ಕತ್ತಲು ಕವಿದಂತಾಗಿದೆ. ಸಾಗರ್ ಅವರು ತಂದೆ-ತಾಯಿ, ಸಹೋದರ ಹಾಗೂ ಸಹೋದರಿಯನ್ನು ಅಗಲಿದ್ದಾರೆ.
ಬೆನ್ನಾಡಿಯಲ್ಲಿ ಶಿಕ್ಷಣ ಪಡೆದಿದ್ದ ಸಾಗರ್ ಅವರು, ನಿಪ್ಪಾಣಿಯ ವಿಎಸ್ ಎಂ ಕಾಲೇಜಿನಲ್ಲಿ ಪದವಿ ಪಡೆದು ಭಾರತೀಯ ಸೇನೆಗೆ ಸೇರ್ಪಡೆಗೊಂಡಿದ್ದರು. 2018ರಲ್ಲಿ ರಾಯಚೂರಿನಲ್ಲಿ ನಡೆದ ನೇಮಕಾತಿಯಲ್ಲಿ ಆಯ್ಕೆಯಾಗಿದ್ದರು.
ನಾಸಿಕ್ನಲ್ಲಿ ತರಬೇತಿ ಪೂರ್ಣಗೊಂಡ ಬಳಿಕ ಸಾಗರ್ ಅವರನ್ನು ಭಟಿಂಡಾದಲ್ಲಿ ಸೇವೆಗೆ ನಿಯೋಜಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ಸಾಗರ್ ಅವರ ಪಾರ್ಥಿವ ಶರೀರವು ಗುರುವಾರ ತಡರಾತ್ರಿ ಅಥವಾ ಶುಕ್ರವಾರ ಗ್ರಾಮಕ್ಕೆ ತಲುಪುವ ನಿರೀಕ್ಷೆಯಿದ್ದು, ಅಂತಿಮ ವಿಧಿವಿಧಾನಗಳ ಮೊದಲು ಮೆರವಣಿಗೆಯಲ್ಲಿ ಕೊಂಡೊಯ್ಯಲು ಸಿದ್ಧತೆಗಳ ನಡೆಸಲಾಗುತ್ತಿದೆ.
ಈ ನಡುವೆ ಸಾಗರ್ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಗುರುವಾರ ಗ್ರಾಮದ ಎಲ್ಲಾ ವ್ಯಾಪಾರಿಗಳು ತಮ್ಮ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿದ್ದು ಕಂಡು ಬಂದಿತ್ತು.
ದಾಳಿಯಲ್ಲಿ ಹುತಾತ್ಮರಾಗಿರುವ ಮತ್ತೋರ್ವ ಯೋಧನನ್ನು ಬಾದಾಮಿಯ ಹನಮಕೇರಿ ಗ್ರಾಮದ ಸಂತೋಷ ಮಲ್ಲಪ್ಪ ನಾಗರಾಳ್ (24) ಎಂದು ಗುರ್ತಿಸಲಾಗಿದೆ.
ಸಂತೋಷ್ ಮಲ್ಲಪ್ಪ ಅವರು, 2019 ರಲ್ಲಿ ಗದಗದಲ್ಲಿ ನಡೆದ ನೇಮಕಾತಿಯಲ್ಲಿ ಆಯ್ಕೆಯಾಗಿದ್ದರು. ಸಂತೋಷ್ ಅವರು ತಮ್ಮ ತಾಯಿ ಮತ್ತು ಇಬ್ಬರು ಸಹೋದರರನ್ನು ಅಗಲಿದ್ದಾರೆ.