ಬೆಂಗಳೂರು: ಎರಡು ಬೈಕ್'ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಸರ್ಕಾರಿ ಕಾಲೇಜಿನ ಉಪನ್ಯಾಸಕ ಸೇರಿದಂತೆ ಇಬ್ಬರು ಮೃತಪಟ್ಟಿರುವ ದಾರುಣ ಘಟನೆ ಕೆಂಗೇರಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ರಾಮಸಂದ್ರದ ನಿವಾಸಿ ನರಸಪ್ಪ (51) ಮತ್ತು ಉಲ್ಲಾಳದ ನಿವಾಸಿ ರಕ್ಷಾ (21) ಮೃತರು. ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಮೃತ ರಕ್ಷಾಳ ಸ್ನೇಹಿತ ಚಂದನ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ತಮ್ಮ ಗೆಳೆಯನ ಜೊತೆ ಮಂಗಳವಾರ ರಾತ್ರಿ 11.30ರ ಸುಮಾರಿಗೆ ರಕ್ಷಾ ಮನೆಗೆ ಮರಳುತ್ತಿದ್ದರು. ಅದೇ ಹೊತ್ತಿನಲ್ಲಿ ನರಸಪ್ಪ ಅವರು ಕೂಡ ಮನೆಗೆ ಕಡೆಗೆ ಹೊರಟಿದ್ದರು. ಈ ವೇಳೆ ಉಲ್ಲಾಳದ ಮಾರುತಿ ನಗರ ಮುಖ್ಯರಸ್ತೆಯ ಕೆಎಲ್ಇ ಕಾಲೇಜು ಸಮೀಪ ನರಸಪ್ಪ ಅವರ ಬೈಕ್'ಗೆ ಚಂದನ್ ಅವರ ಪಲ್ಸರ್ ಬೈಕ್ ಡಿಕ್ಕಿ ಹೊಡೆದಿದೆ.
ಈ ಅವಘಡದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ರಕ್ಷಾ ಮತ್ತು ನರಸಪ್ಪ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ,
ಇದನ್ನೂ ಓದಿ: ಬಿಎಂಟಿಸಿ ಬಸ್ ಹರಿದು 4 ವರ್ಷದ ಬಾಲಕಿ ಸಾವು
ಕೆಂಗೇರಿಯ ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದ ನರಸಪ್ಪ ಅವರು, ರಾಮಸಂದ್ರದಲ್ಲಿ ನೆಲೆಸಿದ್ದರು. ಅದೇ ರೀತಿ ತಮ್ಮ ಮನೆ ಸಮೀಪ ಕಿಂಡರ್ ಗಾರ್ಡನ್ ನಲ್ಲಿ ರಕ್ಷಾ ಶಿಕ್ಷಕಿಯಾಗಿದ್ದರು. ಸ್ವಾತಂತ್ರ್ಯೋತ್ಸವದ ನಿಮಿತ್ತ ಶಾಲೆಗೆ ರಜೆಯಿದ್ದ ಹಿನ್ನೆಲೆಯಲ್ಲಿ ಗೆಳೆಯ ಹಾಗೂ ಖಾಸಗಿ ಕಾಲೇಜಿನನಲ್ಲಿ ಎಂಬಿಎ ವಿದ್ಯಾರ್ಥಿ ಚಂದನ್ ಜೊತೆ ರಕ್ಷಾ ಹೊರ ಹೋಗಿದ್ದಲು. ಅದೇ ರೀತಿ ಕೆಲಸ ನಿಮಿತ್ತ ಶ್ರೀನಗರ ವಿದ್ಯಾಪೀಠಕ್ಕೆ ಗೆಳೆಯರ ಭೇಟಿಗೆ ನರಸಪ್ಪ ಬಂದಿದ್ದರು.
ಅಂತೆಯೇ ರಾತ್ರಿ 11.30 ಗಂಟೆಗೆ ರಕ್ಷಾ ಹಾಗೂ ನರಸಪ್ಪ ಪ್ರತ್ಯೇಕವಾಗಿ ತಮ್ಮ ಮನೆಗಳಿಗೆ ಮರಳುತ್ತಿದ್ದರು, ಈ ವೇಳೆ ಮಾರ್ಗ ಮಧ್ಯೆ ಅತಿವೇಗವಾಗಿ ತನ್ನ ಬೈಕ್ ಓಡಿಸಿಕೊಂಡು ಬಂದ ಚಂದನ್, ನರಸಪ್ಪ ಅವರ ಬೈಕ್'ಗೆ ಡಿಕ್ಕಿ ಹೊಡೆದಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ನರಸಪ್ಪ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ರಕ್ಷಾ ಹಾಗೂ ಚಂದನ್ನು ಅವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆ ದಾಖಲಿಸಲಾಗಿದೆ. ಆದರೆ, ತೀವ್ರ ರಕ್ತಸ್ರಾವವಾಗಿದ್ದ ಹಿನ್ನೆಲೆಯಲ್ಲಿ ರಕ್ಷಾ ಕೊನೆಯುಸಿರೆಳೆದಿದ್ದಾಳೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಸಂಬಂಧ ಕೆಂಗೇರಿ ಸಂಚಾರ ಪೊಲೀಸರು ಚಂದನ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.
Advertisement