ರಾಜ್ಯದಲ್ಲಿ ಬಿಸಿಲ ಬೇಗೆಗೆ ಜನರು ತತ್ತರ; ಮಾರ್ಗಸೂಚಿ ಹೊರಡಿಸಿದ ರಾಜ್ಯ ಸರ್ಕಾರ

ರಾಜ್ಯದಲ್ಲಿ ಬಿಸಿಲ ಬೇಗೆಗೆ ಜನ ತತ್ತರಿಸಿ ಹೋಗುತ್ತಿದ್ದು, ದಿನೇ ದಿನೇ ಹೆಚ್ಚುತ್ತಿರುವ ತಾಪಮಾನದಿಂದಾಗಿ ಸಾಕಷ್ಟು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಅಪಾಯ ಇರೋದರಿಂದ ಆರೋಗ್ಯ ಇಲಾಖೆ ಮಾರ್ಗಸೂಚಿಯನ್ನು ಪ್ರಕಟಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ರಾಜ್ಯದಲ್ಲಿ ಬಿಸಿಲ ಬೇಗೆಗೆ ಜನ ತತ್ತರಿಸಿ ಹೋಗುತ್ತಿದ್ದು, ದಿನೇ ದಿನೇ ಹೆಚ್ಚುತ್ತಿರುವ ತಾಪಮಾನದಿಂದಾಗಿ ಸಾಕಷ್ಟು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಅಪಾಯ ಇರೋದರಿಂದ ಆರೋಗ್ಯ ಇಲಾಖೆ ಮಾರ್ಗಸೂಚಿಯನ್ನು ಪ್ರಕಟಿಸಿದೆ.

ಈ ಬಗ್ಗೆ ಸಾರ್ವಜನಿಕರಿಗೆ ಮಾತ್ರವಲ್ಲದೆ ಬಿಬಿಎಂಪಿ ಹಾಗೂ ಜಿಲ್ಲಾಡಳಿತಗಳಿಗೂ ಪ್ರತ್ಯೇಕ ಮಾರ್ಗಸೂಚಿ ನೀಡಿದ್ದು, ಆಯಾ ಜಿಲ್ಲೆ ಹಾಗೂ ಪಾಲಿಕೆಗಳ ವ್ಯಾಪ್ತಿಗಳ ಜನರಿಗೆ ಉಷ್ಣ ಮಾರುತಗಳಿಂದ ರಕ್ಷಣೆ ಪಡೆಯಲು ಅಗತ್ಯ ವ್ಯವಸ್ಥೆ ಮಾಡುವಂತೆ ಸೂಚಿಸಿದೆ.

ನವಜಾತ ಶಿಶುಗಳು, ಪುಟ್ಟಮಕ್ಕಳು, ಗರ್ಭಿಣಿಯರು, ಹೊರಾಂಗಣದಲ್ಲಿ ಕೆಲಸ ನಿರ್ವಹಿಸುವವರು, ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿರುವವರು, ಅನಾರೋಗ್ಯ ಸಮಸ್ಯೆಗಳಿರುವವರು, ವಿಶೇಷವಾಗಿ ಹೃದ್ರೋಗ ಹಾಗೂ ರಕ್ತದ ಒತ್ತಡದಿಂದ ಬಳಲುತ್ತಿರುವವರು ಮುನ್ನೆಚ್ಚರಿಕೆ ವಹಿಸಬೇಕು ಎಂದು ಹೇಳಿದೆ.

ಜೊತೆಗೆ ಕೆಲಸದ ಸ್ಥಳಗಳಲ್ಲಿ ಕಾರ್ಮಿಕರು ಹಾಗೂ ಮಾಲೀಕರಿಗೂ ಮಾರ್ಗಸೂಚಿ ನೀಡಿದ್ದು, ಬಿಸಿಲಿನಲ್ಲಿ ಕೆಲಸ ಮಾಡುವ ಕಾರ್ಮಿಕರ ಆರೋಗ್ಯ ಸಂರಕ್ಷಣೆಗಾಗಿ ಸೂಕ್ತ ಮಾರ್ಪಾಡುಗಳನ್ನು ಮಾಡಿಕೊಳ್ಳುವಂತೆ ಮಾಲೀಕರಿಗೆ ನಿರ್ದೇಶನ ನೀಡಲಾಗಿದೆ.

ಕಾರ್ಮಿಕರು ಪ್ರತಿ 20 ನಿಮಿಷಗಳಿಗೊಮ್ಮೆ ಒಂದು ಲೋಟ ನೀರು ಕುಡಿಯಬೇಕು. ಪ್ರತಿ 1 ಗಂಟೆಯ ಕೆಲಸಕ್ಕೆ 5 ನಿಮಿಷ ಬಿಡುವು ನೀಡಬೇಕು. ಕೆಲಸಗಾರರಿಗೆ ನೆರಳಿಗಾಗಿ ತಾತ್ಕಾಲಿಕ ಶೆಡ್‌ ವ್ಯವಸ್ಥೆ ಮಾಡಬೇಕು. ಗರ್ಭಿಣಿಯರು, ವೃದ್ಧರಿಗೆ ಕೆಲಸ ಮಾಡಲು ಆಗುತ್ತದೆಯೇ ಎಂಬುದನ್ನು ಮೊದಲೇ ಪರೀಕ್ಷಿಸಿಕೊಳ್ಳಬೇಕು ಎಂಬಿತ್ಯಾದಿ ನಿರ್ದೇಶನಗಳನ್ನು ನೀಡಲಾಗಿದೆ.

ಏನನ್ನು ಮಾಡಬೇಕು?

  • ಉಷ್ಣ ಮಾರುತದಿಂದ ರಕ್ಷಿಸಿಕೊಳ್ಳಲು ಹೆಚ್ಚು ನೀರು ಕುಡಿಯಬೇಕು.
  • ನಿಂಬೆ ಹಣ್ಣಿನ ಶರಬತ್ತು, ಮಜ್ಜಿಗೆ, ಲಸ್ಸಿ, ಹಣ್ಣಿನ ಜ್ಯೂಸ್‌ಗಳನ್ನು ಒಂದು ಚಿಟಿಕೆ ಉಪ್ಪಿನೊಂದಿಗೆ ಸೇವಿಸುವುದು ಉತ್ತಮ.
  • ನೀರಿನ ಅಂಶ ಹೆಚ್ಚಿರುವ ಕಲ್ಲಂಗಡಿ, ಕರಬೂಜ, ಕಿತ್ತಳೆ, ದ್ರಾಕ್ಷಿ, ಅನಾನಸ್‌, ಸೌತೆಕಾಯಿ, ಎಳೆನೀರು ಸೇವಿಸಬೇಕು.
  • ತಿಳಿಬಣ್ಣದ, ಮೈಗೆ ಅಂಟದ ಹತ್ತಿ ಬಟ್ಟೆಧರಿಸಬೇಕು. ನೆರಳಿಗೆ ಟೋಪಿ, ಛತ್ರಿಯಂತಹ ಆಯ್ಕೆಗಳನ್ನು ಇಟ್ಟುಕೊಳ್ಳಬೇಕು.
  • ಹಗಲಿನಲ್ಲಿ ಮನೆಯ ಕೆಳಗಿನ ಮಹಡಿಗಳಲ್ಲಿರುವುದು ಉತ್ತಮ.

ಏನನ್ನು ಮಾಡಬಾರದು?

  • ಮಧ್ಯಾಹ್ನ 12 ರಿಂದ 3 ಗಂಟೆವರೆಗೆ ಹೊರ ಹೋಗುವುದನ್ನು ತಪ್ಪಿಸಬೇಕು.
  • ಮಕ್ಕಳನ್ನು ನಿಲುಗಡೆ ಮಾಡಿರುವ ವಾಹನಗಳಲ್ಲಿ ಬಿಡಬಾರದು.
  • ಮಧ್ಯಾಹ್ನದ ವೇಳೆ ಅಡುಗೆ ಸಿದ್ಧಪಡಿಸುವುದನ್ನು ತಪ್ಪಿಸಬೇಕು.
  • ಮಧ್ಯಾಹ್ನ ಕಾಫಿ, ಟೀ, ಕಾರ್ಬೊನೇಟೆಡ್‌ ಪಾನೀಯ ಸೇವಿಸಬೇಡಿ.
  • ಚಪ್ಪಲಿ, ಛತ್ರಿಯಂತಹ ಸುರಕ್ಷತೆ ಇಲ್ಲದೆ ಬಿಸಿಲಿನಲ್ಲಿ ಓಡಾಡಬಾರದು.
  • ಮದ್ಯಪಾನ, ಕಾಫಿ ಮತ್ತು ಕಾರ್ಬೊನೇಟೆಡ್ ಪಾನೀಯಗಳು ಅಥವಾ ಹೆಚ್ಚು ಸಕ್ಕರೆ ಅಂಶವನ್ನು ಹೊಂದಿದ ಪಾನೀಯಗಳಿಂದ ದೂರವಿರಬೇಕು.ಇಂತಹ ಪಾನೀಯಗಳು ದೇಹವನ್ನು ರ್ನಿಜಲೀಕರಣಗೊಳಿಸುತ್ತವೆ ಅಥವಾ ಹೊಟ್ಟೆ ನೋವನ್ನು ಉಂಟುಮಾಡುತ್ತವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com