ಬೆಂಗಳೂರು: ಕಾರ್ಮಿಕರ ಮೇಲೆ ಹಲ್ಲೆ ನಡೆಸಿ, ಸುಲಿಗೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ರೌಡಿ ಶೀಟರ್ ಸೇರಿ 6 ಮಂದಿಯನ್ನು ಬೈಯಪ್ಪನಹಳ್ಳಿ ಪೊಲೀಸರು ಸೋಮವಾರ ಬಂಧನಕ್ಕೊಳಪಡಿಸಿದ್ದಾರೆ.
ಫೆಬ್ರವರಿ 24 ರ ರಾತ್ರಿ ಕತ್ತಲಿಪಾಳ್ಯ ರಸ್ತೆಯಲ್ಲಿ ಕೆಲವು ಕಾರ್ಮಿಕರು ಬಿಡಬ್ಲ್ಯುಎಸ್ಎಸ್ಬಿ ಕಾಮಗಾರಿ ನಡೆಸುತ್ತಿದ್ದಾಗ ಏಳು ಮಂದಿಯಿದ್ದ ತಂಡವೊಂದು ದಾಳಿ ನಡೆಸಿ, ಕಾರ್ಮಿಕರ ಬಳಿಯಿದ್ದ 49,000 ರೂಪಾಯಿ ನಗದು, ಎರಡು ಡೀಸೆಲ್ ಕ್ಯಾನ್ ಮತ್ತು ಪೆಟ್ರೋಲ್ ಕ್ಯಾನ್ ಅನ್ನು ದೋಚಿ ಪರಾರಿಯಾಗಿದ್ದರು.
ಕಾರ್ಮಿಕರು ನೀಡಿದ ದೂರಿನ ಆಧಾರದ ಮೇಲೆ ಇದೀಗ ರೌಡಿ ಶೀಟರ್ ಸೇರಿ ಆರು ಮಂದಿಯನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. ಪ್ರಕರಣ ಸಂಬಂಧ ಮತ್ತೋರ್ವ ಆರೋಪಿ ತಲೆಮರೆಸಿಕೊಂಡಿದ್ದು, ಆತನಿಗಾಗಿ ಪೊಲೀಸರು ಹುಡುಕಾಟ ಮುಂದುವರೆಸಿದ್ದಾರೆ.
ಬಂಧಿತರನ್ನು ರೌಡಿ ಶೀಟರ್ ರಾಜು ಎ ಅಲಿಯಾಸ್ ರಾಜದೊರೈ (30), ಈತನ ಸಹಚರರಾದ ಕೆ. ಅರುಣ್ಕುಮಾರ್, ಎ. ದಿನೇಶ್, ಯಾಸೀನ್, ಜೆ. ಜೋಸೆಫ್, ಕೆ. ಕಾರ್ತಿಕ್ ಎಂದು ಗುರ್ತಿಸಲಾಗಿದೆ.
ಆರೋಪಿಗಳು ಈ ಹಿಂದೆ 17 ಪ್ರಕರಣಗಳಲ್ಲಿ ಭಾಗಿಯಾಗಿದ್ದರು. 2021ರಲ್ಲಿ ಗೂಂಡಾ ಕಾಯ್ದೆಯಡಿಯಲ್ಲಿ ಒಂದು ವರ್ಷ ಬಂಧನಕ್ಕೊಳಗಾಗಿದ್ದರು. ಬಿಡುಗಡೆಯಾದ ಬಳಿಕವು ಅಪರಾಧಗಳನ್ನು ಮುಂದುವರೆಸಿದ್ದರು. ಆರೋಪಿಗಳಿಂದ ಪೊಲೀಸರು ರೂ.40,000 ನಗದು, ಮೂರು ಮೊಬೈಲ್ ಫೋನ್ ಗಳು, ಮೂರು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
Advertisement