ಕರ್ನಾಟಕ ವಿಧಾನಸಭೆ ಚುನಾವಣೆ: ಬೆಂಗಳೂರು ನಗರದ 28 ವಿಧಾನಸಭಾ ಕ್ಷೇತ್ರಗಳ ಪೈಕಿ 19 ಕ್ಷೇತ್ರಗಳು ಸೂಕ್ಷ್ಮ!

ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ಬೆಂಗಳೂರು ನಗರದ 28 ಕ್ಷೇತ್ರಗಳ ಪೈಕಿ 19 ಕ್ಷೇತ್ರಗಳನ್ನು ಸೂಕ್ಷ್ಮ ಕ್ಷೇತ್ರಗಳೆಂದು ಗುರುತಿಸಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲೆಯ ಚುನಾವಣಾಧಿಕಾರಿಯೂ ಆಗಿರುವ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಬುಧವಾರ ಮಾಹಿತಿ ನೀಡಿದ್ದಾರೆ.
ತುಷಾರ್ ಗಿರಿನಾಥ್
ತುಷಾರ್ ಗಿರಿನಾಥ್

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ಬೆಂಗಳೂರು ನಗರದ 28 ಕ್ಷೇತ್ರಗಳ ಪೈಕಿ 19 ಕ್ಷೇತ್ರಗಳನ್ನು ಸೂಕ್ಷ್ಮ ಕ್ಷೇತ್ರಗಳೆಂದು ಗುರುತಿಸಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲೆಯ ಚುನಾವಣಾಧಿಕಾರಿಯೂ ಆಗಿರುವ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಬುಧವಾರ ಮಾಹಿತಿ ನೀಡಿದ್ದಾರೆ.

ಬುಧವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಟಿಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಖ್ಯ ಆಯುಕ್ತ ಹಾಗೂ ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ಮತ್ತು ವಿಶೇಷ ಆಯುಕ್ತ ಉಜ್ವಲ್ ಕುಮಾರ್ ಘೋಷ್ ಅವರು ಮಾತನಾಡಿದರು,

ಯಶವಂತಪುರ, ದಾಸರಹಳ್ಳಿ, ಮಹದೇವಪುರ, ಬೆಂಗಳೂರು ದಕ್ಷಿಣ, ಆನೇಕಲ್, ಕೆ.ಆರ್. ಪುರ, ಮಲ್ಲೇಶ್ವರ, ಹೆಬ್ಬಾಳ, ಸರ್ವಜ್ಞನಗರ, ಸಿ.ವಿ.ರಾಮನ್ ನಗರ, ರಾಜರಾಜೇಶ್ವರಿನಗರ, ಶಿವಾಜಿನಗರ, ಶಾಂತಿ ನಗರ, ಚಾಮರಾಜನಗರ, ಚಿಕ್ಕಪೇಟೆ, ಪದ್ಮನಾಭನಗರ, ಬಿಟಿಎಂ ಲೇಔಟ್, ಜಯನಗರ ಹಾಗೂ ಬೊಮ್ಮನಹಳ್ಳಿ ಕ್ಷೇತ್ರಗಳು ಸೇರಿ 19 ಕ್ಷೇಗಳು ಸೂಕ್ಷ್ಮ ವಿಧಾನಸಭಾ ಕ್ಷೇತ್ರಗಳಾಗಿವೆ ಎಂದು ಹೇಳಿದರು.

ಬಿಬಿಎಂಪಿ ವ್ಯಾಪ್ತಿಯನ್ನು ನಾಲ್ಕು ವಲಯಗಳಾಗಿ ವಿಂಗಡನೆ ಮಾಡಲಾಗಿದ್ದು, ಚುನಾವಣಾ ಮೇಲುಸ್ತುವಾರಿಗೆ ನಾಲ್ಕು ಅಪರ ಜಿಲ್ಲಾ ಚುನಾವಣಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಬಿಬಿಎಂಪಿ ಕೇಂದ್ರಕ್ಕೆ ಡಾ.ಹರೀಶ್ ಕುಮಾರ್, ಬಿಬಿಎಂಪಿ ಉತ್ತರಕ್ಕೆ ಲಿಂಗಮೂರ್ತಿ, ಬಿಬಿಎಂಪಿ ದಕ್ಷಿಣಕ್ಕೆ ಜಗದೀಶ್ ಕೆ.ನಾಯಕ್ ಮತ್ತು ಬೆಂಗಳೂರು ನಗರಕ್ಕೆ ಕೆ.ಎ.ದಯಾನಂದ್ ಅವರನ್ನು ಅಪರ ಜಿಲ್ಲಾ ಚುನಾವಣಾಧಿಕಾರಿಗಳನ್ನಾಗಿ ನೇಮಿಸಲಾಗಿದೆ ಎಂದು ಅವರು ತಿಳಿಸಿದರು.

ಬೆಂಗಳೂರಿನಲ್ಲಿ ಒಟ್ಟು 95,13,830 ಮತದಾರರಿದ್ದಾರೆ. ಪುರುಷ ಮತದಾರರ ಸಂಖ್ಯೆ 49,26,270, ಮಹಿಳಾ ಮತದಾರರು 45,85,824 ರಷ್ಟಿದ್ದಾರೆ. 18 ರಿಂದ 19ರ ವಯಸ್ಸಿನ 1,08,494 ಯುವ ಮತದಾರರಿದ್ದಾರೆ. 2,36,719 ಮತದಾರರಿಗೆ 80 ವರ್ಷ ವಯಸ್ಸಾಗಿದೆ. 28 ವಿಧಾನಸಭಾ ಕ್ಷೇತ್ರಗಳಿಗೂ ರಿರ್ಟನಿಂಗ್ ಆಫೀಸರ್ ಗಳ ನೇಮಕ ಮಾಡಲಾಗಿದೆ.

ನಗರದಲ್ಲಿ ಒಟ್ಟು 8,615 ಮತಗಟ್ಟೆಗಳಿದ್ದು, ಈ ಪೈಕಿ 8,615 ಪೈಕಿ 2,217 ಮತಗಟ್ಟೆಗಳನ್ನು ಸೂಕ್ಷ್ಮ ಮತಗಟ್ಟೆಗಳು ಎಂದು ಘೋಷಣೆ ಮಾಡಲಾಗಿದೆ. ಕಳೆದ ಚುನಾವಣೆಯಲ್ಲಿ ಕೆಲವು ಸಮಸ್ಯೆಗಳು ಆದ ಆಧಾರದ ಮೇರೆಗೆ ಸೂಕ್ಷ್ಮ ಮತಗಟ್ಟೆ ಎಂದು ಗುರುತು ಮಾಡಲಾಗಿದೆ. ಸೂಕ್ಷ್ಮ ಮತಗಟ್ಟೆಗಳಲ್ಲಿ ಕೇಂದ್ರ ಪ್ಯಾರಾ ಮಿಲಿಟರಿ ಫೋರ್ಸ್ ನಿಯೋಜನೆ ಮಾಡಲಾಗುತ್ತದೆ. ಬಿಎಂಪಿ ವ್ಯಾಪ್ತಿಯಲ್ಲಿ 68 ಸಾವಿರ ಚುನಾವಣಾ ಸಿಬ್ಬಂದಿಗಳ ಅಗತ್ಯವಿದೆ. ಆದರೆ ನಮ್ಮ ಬಳಿ 37 ಸಾವಿರ ಮ್ಯಾನ್ ಪವರ್ ಈಗಾಗಲೇ ಇದೆ. ಉಳಿದಂತೆ ಸುಮಾರು 40 ಸಾವಿರ ಸಿಬ್ಬಂದಿಗಳ ನಿಯೋಜನೆ ಆಗುತ್ತಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ನೌಕರರಿಂದ ಇಷ್ಟು ಸಿಬ್ಬಂದಿಗಳ ಪೂರೈಕೆ ಸಾಧ್ಯವಿಲ್ಲ ಎಂದು ಹೇಳಿದರು.

ಇದಕ್ಕಾಗಿ ರಾಜ್ಯ ಸರ್ಕಾರ ಹಾಗೂ ಕೆಂದ್ರ ಸರ್ಕಾರದ ನಿಗಮ, ಪ್ರಾಧಿಕಾರ, ಮಂಡಳಿ, ಇಲಾಖೆಗಳ ನೌಕರರನ್ನು ಬಳಕೆ ಮಾಡುತ್ತೇವೆ. ಈ ಬಾರಿ ಎಲ್ಲಾ ಮತಗಟ್ಟೆಗಳಲ್ಲಿ ಹೊಸ ಇವಿಎಂ ಬಳಕೆ ಮಾಡಲಾಗುತ್ತೆ. ಒಟ್ಟು ಇವಿಎಂಗಳಲ್ಲಿ ಶೇಕಡಾ 30 ರಷ್ಟು ಇವಿಎಂ ಬ್ಯಾಕ್ ಅಪ್​ಗೆ ಕಾಯ್ದಿರಿಸಲಾಗುತ್ತದೆ ಎಂದು ತಿಳಿಸಿದರು.

ಈ ಚುನಾವಣೆಯಲ್ಲಿ ಮತದಾನದ ಶೇಕಡಾವಾರು ಹೆಚ್ಚಳವನ್ನು ಖಚಿತಪಡಿಸಿಕೊಳ್ಳಲು, ನಿವಾಸಿ ಕ್ಷೇಮಾಭಿವೃದ್ಧಿ ಸಂಘಗಳೊಂದಿಗೆ ಸಭೆಗಳನ್ನು ನಡೆಸಲಾಗುತ್ತಿದೆ ಮತ್ತು ಮತದಾನಕ್ಕೆ ಸಂಬಂಧಿಸಿದಂತೆ ಜಾಗೃತಿ ವೇದಿಕೆಗಳನ್ನು ನಡೆಸಲು ಪ್ರೋತ್ಸಾಹಿಸಲಾಗುತ್ತದೆ ಎಂದರು.

ನಗರದಲ್ಲಿ ಮತದಾರರ ಒಲೈಕೆಗಾಗಿ ಪ್ರಯತ್ನಿಸುತ್ತಿದ್ದದನ್ನು ಗುರುತಿಸಿ ಹಲವು ಕಡೆಗಳಲ್ಲಿ ನಗದು, ಮಧ್ಯೆ ಸೇರಿ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗುತ್ತಿದೆ. ಇದುವರೆಗೂ ನಗರದ 99 ಕಡೆಗಳಲ್ಲಿ ಸುಮಾರು 2,76,67,291 ಕೋಟಿ ರೂ.ಮೌಲ್ಯದ ಸರಕು ಮತ್ತು ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com