ಬೆಂಗಳೂರು: ನಗರದಲ್ಲಿ ಭಾನುವಾರದಿಂದ ಸಂಭವಿಸಿದ ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ 6 ವರ್ಷದ ಬಾಲಕ ಸೇರಿ ಮೂವರು ಮೃತಪಟ್ಟಿದ್ದಾರೆ.
ಸಿಟಿ ಮಾರ್ಕೆಟ್ ಟ್ರಾಫಿಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಊರ್ವಶಿ ಥಿಯೇಟರ್ ಬಳಿ ಲಾರಿ ಹರಿದು ಹಶ್ವಂತ್ (6) ಎಂಬ ಬಾಲಕ ಮೃತಪಟ್ಟಿದ್ದಾನೆ. ಸೋಮವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಘಟನೆ ನಡೆದಿದೆ.
ನಿಂತಿದ್ದ ಲಾರಿಯ ಹಿಂಬದಿಯ ಟೈರ್ ಪಕ್ಕದಲ್ಲಿ ಬಾಲಕ ಕುಳಿತಿದ್ದ. ಇದನ್ನು ಗಮನಿಸದ ಚಾಲಕ ಲಾರಿ ಸ್ಟಾರ್ಟ್ ಮಾಡಿ ರಿವರ್ಸ್ ತೆಗೆದುಕೊಂಡಿದ್ದಾನೆ. ಈ ವೇಳೆ ಲಾರಿಯ ಹಿಂಬದಿಯ ಚಕ್ರ ಬಾಲಕನ ತಲೆಯ ಮೇಲೆ ಹರಿದು, ಸ್ಥಳದಲ್ಲಿಯೇ ಮಗು ಕೊನೆಯುಸಿರೆಳೆದಿದೆ. ಘಟನೆ ನಡೆದ ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಲಾರಿ ಚಾಲಕ ಹರಿಯಾಣ ಮೂಲಕ ರಜಾಕ್ (40) ಎಂಬಾತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಮತ್ತೊಂದು ಘಟನೆಯಲ್ಲಿ, ರಾಜಸ್ಥಾನ ಮೂಲದ 19 ವರ್ಷದ ಬಿಬಿಎಂ ದ್ವಿತೀಯ ವರ್ಷದ ವಿದ್ಯಾರ್ಥಿ ಮೃತಪಟ್ಟಿದ್ದಾನೆ. ದ್ವಿಚಕ್ರ ವಾಹನದ ನಿಯಂತ್ರಣ ತಪ್ಪಿ ಬಿದ್ದು ಯುವಕ ಮೃತಪಟ್ಟಿದ್ದಾನೆ.
ಜಯನಗರ 7ನೇ ಬ್ಲಾಕ್ನಲ್ಲಿರುವ ಮಹಾವೀರ್ ಮಾರ್ಕೆಟ್ ಕಾಂಪ್ಲೆಕ್ಸ್ನಲ್ಲಿ ಸೋಮವಾರ ಬೆಳಗ್ಗೆ 5 ಗಂಟೆಗೆ ಘಟನೆ ನಡೆದಿದೆ.
ಮೃತ ಯುವಕನನ್ನು ಎನ್.ಅರ್ಜುನ್ ಎಂದು ಗುರ್ತಿಸಲಾಗಿದೆ. ಈತ ಬಿಎಂಟಿ ಲೇಔಟ್ನ ಅರಕೆರೆ ನಿವಾಸಿಯಾಗಿದ್ದು, ರೈಲ್ವೆ ನಿಲ್ದಾಣದಲ್ಲಿ ರೈಲು ಟಿಕೆಟ್ ಕಾಯ್ದಿರಿಸಿದ ಬಳಿಕ ಮನೆಗೆ ಮರಳುತ್ತಿದ್ದರು. ಅತಿಯಾದ ವೇಗದಿಂದಾಗಿ ವಾಹನದ ಮೇಲಿನ ನಿಯಂತ್ರಣ ತಪ್ಪಿ ಬಿದ್ದು ಮೃತಪಟ್ಟಿದ್ದಾರೆ. ಈ ಸಂಬಂಧ ಬನಶಂಕರಿ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಭಾನುವಾರ ರಾತ್ರಿ 8.45ಕ್ಕೆ ಸಂಭವಿಸಿದ ಮತ್ತೊಂದು ಅಪಘಾತದಲ್ಲಿ ನೆಲಮಂಗಲದ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ಹಾಸನ ಮೂಲದ ಯೋಗೇಶ್ ಎಂಬ 21 ವರ್ಷದ ಯುವಕ ಮೃತಪಟ್ಟಿದ್ದಾನೆ.
ದ್ವಿಚಕ್ರ ವಾಹನಕ್ಕೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ತುಮಕೂರು ರಸ್ತೆಯ ಜಾಲಹಳ್ಳಿ ಕ್ರಾಸ್ ಬಳಿ ಘಚನೆ ನಡೆದಿದೆ. ಪೀಣ್ಯ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಬಸ್ ಚಾಲಕನಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.
Advertisement