ಬೆಂಗಳೂರು: ಪ್ರತಿ ಲಕ್ಷ ಜನಸಂಖ್ಯೆಗೆ ಕೇವಲ 191 ಪೊಲೀಸರನ್ನು ಬೆಂಗಳೂರು ಹೊಂದಿದ್ದು, ದೇಶದ ಇತರ ಪ್ರಮುಖ ನಗರಗಳಿಗಿಂತಲೂ ಕಡಿಮೆ ಪೊಲೀಸ್ ಸಿಬ್ಬಂದಿಗಳ ಹೊಂದಿದೆ ಎಂದು ಪೊಲೀಸ್ ಆಯುಕ್ತ ಬಿ ದಯಾನಂದ ಅವರು ಹೇಳಿದ್ದಾರೆ. ವಿಶ್ವಸಂಸ್ಥೆಯು ಪ್ರತಿ ಲಕ್ಷ ಜನಸಂಖ್ಯೆಗೆ 673 ಪೊಲೀಸರು ಇರಬೇಕೆಂದು ಶಿಫಾರಸು ಮಾಡುತ್ತದೆ.
ಶನಿವಾರ ಸಂಜೆ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸಾಮಾಜಿಕ ಜಾಲತಾಣಗಳ ಪ್ರಮುಖರೊಂದಿಗೆ ಪೊಲೀಸರು ಏರ್ಪಡಿಸಿದ್ದ ವಿಶೇಷ ಸಭೆಯಲ್ಲಿ ದಯಾನಂದ ಅವರು ಮಾತನಾಡಿದರು,
ಸದ್ಯ ಬೆಂಗಳೂರಿನಲ್ಲಿ ಶೇ.22-23ರಷ್ಟು ಸಿಬ್ಬಂದಿಗಳ ಕೊರತೆ ಇದೆ. 25,307 ಪೊಲೀಸ್ ಪಡೆಗಳಲ್ಲಿ 18,308 ಸಿವಿಲ್ ಪೊಲೀಸರು ಮತ್ತು 6,999 ಸಶಸ್ತ್ರ ಮೀಸಲು ಸಿಬ್ಬಂದಿಗಳು ಇದ್ದಾರೆ. ಪ್ರತಿ ಪೊಲೀಸ್ ಠಾಣೆಯಲ್ಲೂ (ಟ್ರಾಫಿಕ್ ಹೊರತುಪಡಿಸಿ) ಸಿಬ್ಬಂದಿಗಳ ಸಂಖ್ಯೆ ಕಷ್ಟವೇ ಇದೆ ಎಂದು ಹೇಳಿದರು.
“ಬೆಂಗಳೂರಿನ 113 ಪೊಲೀಸ್ ಠಾಣೆಗಳಲ್ಲಿ ಕೇವಲ 162 ಪೊಲೀಸರು ಇದ್ದಾರೆ, ಮುಂಬೈನ 93 ಪೊಲೀಸ್ ಠಾಣೆಗಳಲ್ಲಿ 499 ಪೊಲೀಸರನ್ನು ಹೊಂದಿದೆ. ದೆಹಲಿಯು 203 ಸ್ಟೇಷನ್ಗಳಲ್ಲಿ 416 ಪೊಲೀಸರನ್ನು ಹೊಂದಿದೆ. ಕೋಲ್ಕತ್ತಾ 80 ಸ್ಟೇಷನ್ಗಳಲ್ಲಿ ತಲಾ 310 ಪೊಲೀಸರನ್ನು ಹೊಂದಿದೆ. ಚೆನ್ನೈ 102 ಸ್ಟೇಷನ್ಗಳಲ್ಲಿ 190 ಪೊಲೀಸರನ್ನು ಹೊಂದಿದೆ ಎಂದು ಮಾಹಿತಿ ನೀಡಿದರು.
ಬಳಿಕ ಮಾತನಾಡಿದ ಸಂಚಾರ ವಿಭಾಗದ ಜಂಟಿ ಆಯುಕ್ತ ಎ.ಎನ್.ಅನುಚೇತ್ ಅವರು, ವೀಲಿಂಗ್ ಮತ್ತು ಬೈಕ್ ಸ್ಟಂಟ್ ಮಾಡುವವರ ವಿರುದ್ಧ ಇಲಾಖೆ ಕಠಿಣ ಕ್ರಮ ಕೈಗೊಳ್ಳುತ್ತಿದೆ ಎಂದು ಹೇಳಿದರು.
ಸವಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಲಾಗುತ್ತಿದೆ, ಚಾಲನಾ ಪರವಾನಗಿಯನ್ನು ರದ್ದುಪಡಿಸಲಾಗುತ್ತಿದೆ. ಮಾರ್ಪಡಿಸಿದ ವಾಹನಗಳಲ್ಲಿ ಆರ್ಸಿಯನ್ನು ಸಹ ಅಮಾನತುಗೊಳಿಸಲಾಗುತ್ತಿದೆ. ಅಪ್ರಾಪ್ತ ಮಕ್ಕಳು ವಾಹನಗಳನ್ನು ಚಾಲನೆ ಮಾಡಿದರೆ ಪೋಷಕರಿಗೆ ರೂ.20 ಸಾವಿರದಿಂದ 25 ಸಾವಿರದವರೆಗೆ ದಂಡ ಕಟ್ಟಿಸಿಕೊಳ್ಳಲಾಗುತ್ತಿದೆ. ಪುನರಾವರ್ತಿತ ಅಪರಾಧಗಳು ಕಂಡುಬಂದಲ್ಲಿ, ಅಂತಹ ಕೃತ್ಯಗಳಲ್ಲಿ ತೊಡಗುವುದನ್ನು ಕೊನೆಗೊಳಿಸಲು ವಿಭಿನ್ನ ತಂತ್ರವನ್ನು ಅಳವಡಿಸಿಕೊಳ್ಳಲಾಗುತ್ತಿದೆ. “ಅವರ ವಿರುದ್ಧ CrPC ಯ ಸೆಕ್ಷನ್ 107 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುತ್ತಿದೆ.. ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ಗಳಾಗಿರುವ ಕಾನೂನು ಮತ್ತು ಸುವ್ಯವಸ್ಥೆಯ ನ್ಯಾಯವ್ಯಾಪ್ತಿಯ ಉಪ ಪೊಲೀಸ್ ಆಯುಕ್ತರು ಕುಟುಂಬಗಳಿಂದ ರೂ 5 ಲಕ್ಷಕ್ಕೆ ಬಾಂಡ್ ಸಂಗ್ರಹಿಸುತ್ತಾರೆ. ಮುಂದೆ ಯಾವುದೇ ಅಪರಾಧ ನಡೆದರೆ, ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ದಕ್ಷಿಣ ಬೆಂಗಳೂರಿನಲ್ಲಿ ಒಬ್ಬ ಮತ್ತು ಪಶ್ಚಿಮ ಬೆಂಗಳೂರಿನಲ್ಲಿ ಇಬ್ಬರ ಪ್ರಕರಣದಲ್ಲಿ ಈಗಾಗಲೇ ಈ ಪ್ರಯೋಗವೂ ಆಗಿದೆ ಎಂದು ಮಾಹಿತಿ ನೀಡಿದರು.
Advertisement