ಮಾನವ-ಪ್ರಾಣಿ ಸಂಘರ್ಷಕ್ಕೆ ಕಡಿವಾಣ ಹಾಕಲು ಕರ್ನಾಟಕ, ತಮಿಳುನಾಡು, ಕೇರಳ ಒಗ್ಗೂಡಿ ಶ್ರಮಿಸಲಿವೆ: ಸಚಿವ ಈಶ್ವರ ಖಂಡ್ರೆ

ಮಾನವ-ಪ್ರಾಣಿ ಸಂಘರ್ಷವನ್ನು ತಪ್ಪಿಸಲು, ಬೇಟೆ ತಡೆಗಟ್ಟಲು ಮತ್ತು ಸಸ್ಯ-ಪ್ರಾಣಿ ಸಂಕುಲ ರಕ್ಷಿಸಲು ಕರ್ನಾಟಕ, ಕೇರಳ ಮತ್ತು ತಮಿಳುನಾಡು ಸರ್ಕಾರಗಳು ಒಗ್ಗೂಡಿ ಶ್ರಮಿಸಲಿವೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಭಾನುವಾರ ಹೇಳಿದರು.
ಅರಣ್ಯ ಸಚಿವ ಈಶ್ವರ್ ಖಂಡ್ರೆ
ಅರಣ್ಯ ಸಚಿವ ಈಶ್ವರ್ ಖಂಡ್ರೆ

ಮೈಸೂರು: ಮಾನವ-ಪ್ರಾಣಿ ಸಂಘರ್ಷವನ್ನು ತಪ್ಪಿಸಲು, ಬೇಟೆ ತಡೆಗಟ್ಟಲು ಮತ್ತು ಸಸ್ಯ-ಪ್ರಾಣಿ ಸಂಕುಲ ರಕ್ಷಿಸಲು ಕರ್ನಾಟಕ, ಕೇರಳ ಮತ್ತು ತಮಿಳುನಾಡು ಸರ್ಕಾರಗಳು ಒಗ್ಗೂಡಿ ಶ್ರಮಿಸಲಿವೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಭಾನುವಾರ ಹೇಳಿದರು.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಸಫಾರಿ ಕೇಂದ್ರದಲ್ಲಿ ಕೇರಳ ಅರಣ್ಯ ಸಚಿವ ಎ.ಕೆ.ಶಸೀಂದ್ರನ್ ಹಾಗೂ ಮೂರು ರಾಜ್ಯಗಳ ಹಿರಿಯ ಅರಣ್ಯಾಧಿಕಾರಿಗಳು ಭಾಗವಹಿಸಿದ್ದ ಅಂತರರಾಜ್ಯ ಸಮನ್ವಯ ಸಮಿತಿ ಸಭೆಯಲ್ಲಿ ಸಚಿವರು ಮಾತಾಡಿದರು.

ಇದು ಕೇಂದ್ರ ಸರ್ಕಾರದ ಆದೇಶದ ಮೇಲೆ ನಡೆಯುತ್ತಿರುವ ಸಭೆಯಲ್ಲ. ದಕ್ಷಿಣದ ಮೂರು ರಾಜ್ಯಗಳ ಕಳಕಳಿ ಮತ್ತು ಸ್ವಯಂ ಪ್ರಯತ್ನದ ಫಲವಾದ ಸಭೆ. ವನ್ಯಜೀವಿಗಳು ಸ್ವಚ್ಛಂದವಾಗಿ ಒಂದು ಕಾಡಿನಿಂದ ಮತ್ತೊಂದಕ್ಕೆ ಸಂಚರಿಸುತ್ತವೆ. ಹಲವಾರು ಶತಮಾನಗಳಿಂದ ತಮಿಳುನಾಡು, ಕೇರಳ ಮತ್ತು ಕರ್ನಾಟಕದ ನಡುವೆ ಆನೆಗಳು ಮುಕ್ತವಾಗಿ ಓಡಾಡುತ್ತಿದ್ದು, ಯಾವುದೇ ವನ್ಯ ಜೀವಿಗೆ ರಾಜ್ಯದ ಗಡಿಯ ಮಿತಿ ಇರುವುದಿಲ್ಲ. ಆನೆ ಕಾರಿಡಾರ್ ಇದೆ. ಹುಲಿಗಳು ಕೂಡ ಒಂದು ಕಾಡಿನಿಂದ ಮತ್ತೊಂದಕ್ಕೆ ಹೋಗುತ್ತವೆ. ಈ ವನ್ಯಜೀವಿಗಳಿಂದ ಯಾವುದೇ ರಾಜ್ಯದಲ್ಲಿ ಜೀವ ಅಥವಾ ಬೆಳೆ ಹಾನಿ ತಗ್ಗಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಚರ್ಚಿಸಲಾಗಿದ್ದು ಶೀಘ್ರದಲ್ಲೇ ಇದಕ್ಕೆ ಒಂದು ಮೂರ್ತ ರೂಪ ನೀಡಲಾಗುವುದು ಎಂದು ಹೇಳಿದರು.

ವನ್ಯಜೀವಿ ಸಂರಕ್ಷಣಾ ಕಾಯ್ದೆ ಜಾರಿಯಾದ ನಂತರ ವನ್ಯಜೀವಿಗಳ ಸಂಖ್ಯೆ ಹೆಚ್ಚಿದೆ. ಆದರೆ, ವನ್ಯಜೀವಿಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಮಾನವ-ಪ್ರಾಣಿ ಸಂಘರ್ಷಕ್ಕೆ ಕಾರಣವಾಗಿದೆ. ಕಾಡು ಪ್ರಾಣಿಗಳು ಅರಣ್ಯದ ಅಂಚಿನ ಗ್ರಾಮಗಳಿಗೆ ನುಗ್ಗುತ್ತಿವೆ. ಹಾಗಾಗಿ, ವನ್ಯಜೀವಿಗಳೊಂದಿಗೆ ಸಹಬಾಳ್ವೆ ಅತ್ಯಗತ್ಯ ಎಂದು ತಿಳಿಸಿದರು.

ಅರಣ್ಯ ಸಚಿವ ಈಶ್ವರ್ ಖಂಡ್ರೆ
7,500 ಎಕರೆ ಅರಣ್ಯ ಭೂಮಿ ಮರುವಶಕ್ಕೆ ಸಿದ್ಧತೆ: ಸಚಿವ ಈಶ್ವರ್ ಖಂಡ್ರೆ

ಇದೇ ವೇಳೆ ಮಾನವ-ಪ್ರಾಣಿ ಸಂಘರ್ಷ ತಪ್ಪಿಸಲು ಕರ್ನಾಟಕ ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳ ಕುರಿತು ಸಚಿವರು ವಿವರಿಸಿದರು.

ಪ್ರತಿಯೊಂದು ಜೀವವೂ ಅಮೂಲ್ಯವಾಗಿದ್ದು, ಈ ನಿಟ್ಟಿನಲ್ಲಿ ಸಂಘಟಿತ ಪ್ರಯತ್ನಗಳನ್ನು ಮಾಡಬೇಕಾಗಿದೆ. ಕರ್ನಾಟಕದಲ್ಲಿ ಆನೆಗಳು ನಾಡಿಗೆ ಬಾರದಂತೆ ತಡೆಯಲು ಆನೆ ಕಂದಕ ನಿರ್ಮಿಸಲಾಗುತ್ತಿದೆ, ಸೌರ ಬೇಲಿ ಅಳವಡಿಸಲಾಗುತ್ತಿದೆ. ಜೊತೆಗೆ ರೈಲ್ವೆ ಬ್ಯಾರಿಕೇಡ್ ಮಾಡಲಾಗುತ್ತಿದೆ ಎಂದರು.

ಬಳಿಕ ಮಾನವ-ಪ್ರಾಣಿ ಸಂಘರ್ಷವನ್ನು ನಿರ್ವಹಿಸಲು ಜಂಟಿ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನವನ್ನು (ಎಸ್ಒಪಿ) ಅಳವಡಿಸಿಕೊಳ್ಳಲು ಪ್ರಸ್ತಾಪಿಸಿದ ಸಚಿವ ಈಶ್ವರ ಖಂಡ್ರೆ, ವಿವಿಧ ಇಲಾಖೆಗಳ ನಡುವೆ ಸಹಯೋಗ ಈ ನಿಟ್ಟಿನಲ್ಲಿ ಅತ್ಯಗತ್ಯವಾಗಿದೆ ಎಂದರು.

ವನ್ಯಜೀವಿ -ಮಾನವ ಸಂಘರ್ಷ ಮತ್ತು ಕಳ್ಳಬೇಟೆ ತಡೆ, ಕಾಡ್ಗಿಚ್ಚು ನಿಯಂತ್ರಣಕ್ಕೆ ಅತ್ಯಾಧುನಿಕ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಳ್ಳುವ ಅಗತ್ಯವಿದೆ. ಈ ಬಗ್ಗೆಯೂ ಸಭೆಯಲ್ಲಿ ಸಂಕ್ಷಿಪ್ತವಾಗಿ ಚರ್ಚಿಸಲಾಗಿದ್ದು, ಮುಂದಿನ ದಿನಗಳಲ್ಲಿ 3 ರಾಜ್ಯಗಳ ನಡುವೆ ನಡೆಯುವ ಸಭೆಗಳಲ್ಲಿ ತಂತ್ರಜ್ಞಾನ ಬಳಕೆಗೆ ಒತ್ತು ನೀಡಲಾಗುವುದು. ಜೊತೆಗೆ ಸನ್ನಾ ಮತ್ತು ಲಾಂಟನಾ ಕಳೆಯ ಸಮಸ್ಯೆಯ ನಿವಾರಣೆಗೂ ಸಹಯೋಗ ಅಗತ್ಯವಾಗಿದ್ದು, ತಂತ್ರಜ್ಞಾನ ಅಳವಡಿಕೆ ಮತ್ತು ಕಳೆ ನಾಶಕ್ಕೆ ಒಂದು ಸಲಹಾ ಸಮಿತಿ ರಚಿಸಲು ಪ್ರಸ್ತಾಪಿಸಲಾಗಿದೆ ಎಂದರು.

ಅರಣ್ಯ ಸಚಿವ ಈಶ್ವರ್ ಖಂಡ್ರೆ
ಬಿಳಿಗಿರಿ ರಂಗನಾಥಸ್ವಾಮಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಾಳ್ಗಿಚ್ಚು: ವರದಿ ಕೇಳಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ

ಸಭೆಯ ಪ್ರಮುಖ ಅಂಶಗಳು...

ಹಂಚಿಕೆಯ ಹೊಣೆಗಾರಿಕೆ ಸಮ್ಮತಿ: ವನ್ಯಜೀವಿಗಳ ಆವಾಸಸ್ಥಾನಗಳನ್ನು ಗುರುತಿಸುವುದು ಮತ್ತು ವಿಸ್ತರಿಸುತ್ತಿರುವುದು. ವಿಸ್ತರಣೆಯಾಗುತ್ತಿರುವ ವಸತಿ ಪ್ರದೇಶಗಳ ನಡುವೆಯೂ ಅರಣ್ಯ ಸಂರಕ್ಷಿಸುವ ಬದ್ಧತೆ.

ಸಹಯೋಗದ ಚಾರ್ಟರ್: ಗಡಿಗಳನ್ನು ಮೀರಿ, ಮಾನವ-ಪ್ರಾಣಿ ಸಂಘರ್ಷಗಳನ್ನು ತಗ್ಗಿಸುವ ನಿಟ್ಟಿನಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡುವ ಹೃತ್ಪೂರ್ವಕ ಪ್ರತಿಜ್ಞೆ.

ಕಾರ್ಯತಂತ್ರದ ಸಮನ್ವಯ: ತಡೆರಹಿತ ಸಹಯೋಗ, ರಚನಾತ್ಮಕ ಮಾಹಿತಿಯ ಹಂಚಿಕೆ ಮತ್ತು ಮಾನವ-ವನ್ಯಜೀವಿ ಸಂಘರ್ಷ ಸವಾಲುಗಳ ವಿರುದ್ಧ ಜಂಟಿ ಪ್ರಯತ್ನ.

ಸಂಪನ್ಮೂಲ ವಿನಿಮಯ ಕಾರ್ಯಕ್ರಮ: ಸಮನ್ವಯತೆಯನ್ನು ಸಂಕೇತಿಸುವ ಈ ಕಾರ್ಯಕ್ರಮವು ನಿರ್ಣಾಯಕ ಸಂಪನ್ಮೂಲಗಳು, ಪರಿಣತಿ ಮತ್ತು ಜ್ಞಾನದ ವಿನಿಮಯವನ್ನು ಸುಗಮಗೊಳಿಸುತ್ತದೆ.

ವನ್ಯಜೀವಿ ಸಂಖ್ಯೆಯ ಅಂದಾಜು ಮತ್ತು ಜಂಟಿ ಕಾರ್ಯಾಚರಣೆಗಳು: ವನ್ಯಜೀವಿಗಳ ಸಂಖ್ಯೆಯ ಆಧಾರದ ಮೇಲೆ ಮತ್ತು ಸಂಘಟಿತ ಕಾರ್ಯಾಚರಣೆಗಳ ಮೂಲಕ ಮಾಹಿತಿ ಆಧಾರಿತವಾಗಿ ನಿರ್ಧಾರ ತೆಗೆದುಕೊಳ್ಳುವುದು.

ಸಲಹಾ ಮಂಡಳಿ: ವನ್ಯಜೀವಿ ಸಂರಕ್ಷಣಾ ತಜ್ಞರನ್ನು ಒಳಗೊಂಡು, ಸಂಘರ್ಷ ನಿರ್ವಹಣಾ ತಂತ್ರಗಳನ್ನು ಹೆಚ್ಚಿಸಲು ಅಮೂಲ್ಯವಾದ ಒಳನೋಟಗಳನ್ನು ಒದಗಿಸುವ ನಿಟ್ಟಿನಲ್ಲಿ ಒಂದು ಸಲಹಾ ಮಂಡಳಿ ರಚಿಸುವ ಪ್ರಸ್ತಾಪ.

ವಿಮರ್ಶೆ ಮತ್ತು ಹೊಂದಾಣಿಕೆ: ಸುಸ್ಥಿರ ಉತ್ಕೃಷ್ಟತೆ ಮತ್ತು ವಿಕಸನಗೊಳ್ಳುತ್ತಿರುವ ಜವಾಬ್ದಾರಿಗಳಿಗೆ ಹೊಂದಿಕೊಳ್ಳುವಿಕೆಗಾಗಿ ಆಡಳಿತದಲ್ಲಿ ನಿಯಮಿತ ಪರಾಮರ್ಶೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com