ಬೆಂಗಳೂರು: ನಗರದಲ್ಲಿ ತಲೆದೋರಿರುವ ನೀರಿನ ಸಮಸ್ಯೆಯನ್ನು ಬಿಬಿಎಂಪಿ ಮತ್ತು ಬಿಡಬ್ಲ್ಯುಎಸ್ಎಸ್ಬಿ ಪರಿಹರಿಸುತ್ತವೆ ಎಂದು ಹೇಳಿದ ಕೆಲವೇ ದಿನಗಳಲ್ಲಿ ಸರ್ಕಾರವು 131 ಕೋಟಿ ರೂ.ಗಳನ್ನು ಈಗಿರುವ ಬೋರ್ವೆಲ್ಗಳನ್ನು ಸರಿಪಡಿಸಲು, ಹೊಸದನ್ನು ಕೊರೆಸಲು ಮತ್ತು ಟ್ಯಾಂಕರ್ಗಳಿಗಾಗಿ ಮಂಜೂರು ಮಾಡಿದ್ದು, ನಾಗರಿಕ ಸಂಸ್ಥೆಗಳ ಭರವಸೆಗಳು ಕೇವಲ ಮೀಡಿಯಾ ಸ್ಟಂಟ್ ಆಗಿದೆ ಎಂದು ಮಹದೇವಪುರ ವಲಯದ ನಿವಾಸಿಗಳು ದೂರಿದ್ದಾರೆ.
ರಾಮಮೂರ್ತಿನಗರ ನಿವಾಸಿ ಕ್ಷೇಮಾಭಿವೃದ್ಧಿ ಸಂಘದ ಸದಸ್ಯ ಕೊಚ್ಚು ಶಂಕರ್ ಮಾತನಾಡಿ, ಪರಿಸ್ಥಿತಿ ನಿಭಾಯಿಸುವ ಕುರಿತು ಅಧಿಕಾರಿಗಳು ಮಾಧ್ಯಮಗಳಲ್ಲಿ ಹೇಳಿಕೆ ನೀಡಿ ಸುಮಾರು 10 ದಿನಗಳು ಕಳೆದಿದ್ದು, ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ. ಹತ್ತಾರು ಬೋರ್ವೆಲ್ಗಳನ್ನು ಕೊರೆಸಿದ್ದರೂ ಸರ್ಕಾರದ ಆದೇಶ ಬಾರದಿರುವುದರಿಂದ ಇನ್ನೂ ಮೋಟಾರು ಮತ್ತು ಪೈಪ್ ಅಳವಡಿಸಿಲ್ಲ. ವರ್ಕ್ ಆರ್ಡರ್ ಇಲ್ಲದೆ ಜಿಎಸ್ಟಿ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ ಎಂದು ಗುತ್ತಿಗೆದಾರರು ಹೇಳುತ್ತಾರೆ. ಇದರಿಂದ ಜನರು ಖಾಸಗಿ ಟ್ಯಾಂಕರ್ಗಳನ್ನೇ ಅವಲಂಬಿಸಬೇಕಾಗಿದೆ ಎನ್ನುತ್ತಾರೆ.
'ನಾವು ಈಗ ಸರ್ಕಾರದ ಆದೇಶವಿಲ್ಲದೆ ಕೆಲಸವನ್ನು ನಿರ್ವಹಿಸಿದರೆ ನಾವು ಬಿಲ್ ನೀಡಲು ಮತ್ತು ಜಿಎಸ್ಟಿ ರಿಟರ್ನ್ ಪ್ರಯೋಜನಗಳನ್ನು ಪಡೆಯಲು ಸಾಧ್ಯವಿಲ್ಲ. ಇನ್ನೆರಡು ದಿನದಲ್ಲಿ ಆದೇಶ ಹೊರಬೀಳಲಿದ್ದು, ಆನಂತರವೇ ಕಾಮಗಾರಿ ಆರಂಭಿಸಲಾಗುವುದು’ ಎಂದು ಗುತ್ತಿಗೆದಾರರೊಬ್ಬರು ತಿಳಿಸಿದರು.
ಟ್ಯಾಂಕರ್ ಮಾಲೀಕರೊಬ್ಬರು ಮಾತನಾಡಿ, ನಾವು ಪ್ರತಿ ಮನೆಯ ಸಂಪ್ಗಳನ್ನು ತುಂಬಲು ಸಾಧ್ಯವಿಲ್ಲ ಮತ್ತು ಆಯಾ ಬೀದಿಗಳಿಗೆ ಟ್ಯಾಂಕರ್ಗಳನ್ನು ಮಾತ್ರ ಕಳುಹಿಸಲಾಗುತ್ತದೆ. ನಿವಾಸಿಗಳು ಬಿಂದಿಗೆಗಳ ಮೂಲಕ ಅಲ್ಲಿಂದ ನೀರನ್ನು ತುಂಬಿಸಿಕೊಳ್ಳಬೇಕು ಎಂದು ಹೇಳಿದರು.
'ಇದು ಗೊಂದಲವನ್ನು ಹೆಚ್ಚಿಸುತ್ತದೆ. ಅಧಿಕಾರಿಗಳು ಸಮನ್ವಯಕ್ಕಾಗಿ ನೋಡಲ್ ಅಧಿಕಾರಿಯನ್ನೂ ನೇಮಿಸಿದ್ದಾರೆ. ಆದರೆ, ಹೊರಮಾವು ಪ್ರದೇಶದಲ್ಲಿ 12 ಗ್ರಾಮಗಳಿವೆ. ಅಧಿಕಾರಿಗಳು ಹೇಗೆ ಸರಾಗವಾಗಿ ನೀರು ಪೂರೈಕೆ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ' ಎಂದು ಶಂಕರ್ ಹೇಳಿದರು.
Advertisement