ಬೆಂಗಳೂರು: ಚಿನ್ನಾಭರಣ ಖರೀದಿ ಮಾಡಿ, ನಂತರ ಹಣ ಪಾವತಿಸಿರುವುದಾಗಿ ಅಂಗಡಿ ಮಾಲೀಕನಿಗೆ ನಕಲಿ ಪೇಮೆಂಟ್ ಆ್ಯಪ್ ಸಂದೇಶ ತೋರಿಸಿ ವಂಚಿಸಿ ಪರಾರಿಯಾಗಿದ್ದ ಚಾಲಾಕಿ ಮಹಿಳೆ ಹಾಗೂ ಆತನ ಪ್ರಿಯಕರನನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಬಂಧಿತರನ್ನು ನಂದನ್ (40) ಹಾಗೂ ಕಲ್ಪಿತಾ (35) ಎಂದು ಗುರ್ತಿಸಲಾಗಿದೆ. ಆರೋಪಿಗಳಿಂದ 2.29 ಲಕ್ಷ ರೂ. ಮೌಲ್ಯದ 36 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಆರೋಪಿಗಳು 4 ರಂದು ಮಾಗಡಿ ಮುಖ್ಯರಸ್ತೆಯ ಪರಮೇಶ್ವರ ಬ್ಯಾಂಕರ್ಸ್ ಆ್ಯಂಡ್ ಜ್ಯೂವೆಲ್ಲರಿ ಅಂಗಡಿಗೆ ಬಂದು ಚಿನ್ನಾಭರಣ ಖರೀದಿಸಿ, ಹಣ ಪಾವತಿಸಿರುವುದಾಗಿ ನಕಲಿ ಪೇಮೆಂಟ್ ಆ್ಯಪ್ ಸಂದೇಶ ತೋರಿಸಿ ಪರಾರಿಯಾಗಿದ್ದರು.
ಈ ಸಂಬಂಧ ಅಂಗಡಿ ಮಾಲೀಕ ಗೇವರ್ ಚಂದ್ ನೀಡಿದ ದೂರಿನ ಮೇರೆಗೆ ಪೊಲೀಸರು ಕಾರ್ಯಾಚರಣೆಗಿಳಿದಿದ್ದರು. ಇದರಂತೆ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಿದ್ದು, ಆರೋಪಿಗಳು ಅಂಗಡಿಗೆ ಬಂದಿದ್ದ ಕಾರಿನ ಸಂಖ್ಯೆಯನ್ನು ಪತ್ತೆ ಮಾಡಿ, ವಿಳಾಸವನ್ನು ಟ್ರ್ಯಾಕ್ ಮಾಡಿದ್ದಾರೆ. ಇದರಂತೆ ಕಲ್ಪಿತಾಳನ್ನು ಆಕೆಯ ಮನೆಯಿಂದಲೇ ಬಂಧನಕ್ಕೊಳಪಡಿಸಿದ್ದರೆ, ನಂದನ್ ನನ್ನು ದೇವಹಳ್ಳಿಯಲ್ಲಿ ಬಂಧಿಸಿದ್ದಾರೆ.
ಆರೋಪಿಗಳಿಬ್ಬರೂ ಸಾಮಾಜಿಕ ಜಾಲತಾಣದಲ್ಲಿ ಪರಸ್ಪರ ಪರಿಚಿತರಾಗಿದ್ದು, ಪರಿಚಯ ಪ್ರೇಮಕ್ಕೆ ತಿರುಗಿತ್ತು. ಕೆಲ ತಿಂಗಳಿಂದ ಒಂದೇ ಮನೆಯಲ್ಲಿ ಸಹಜೀವ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.
Advertisement