ಮರದ ಕೊಂಬೆ ಮುರಿದು ಬಿದ್ದು ಬೈಕ್ ಸವಾರನ ಬೆನ್ನು ಮೂಳೆ ಮುರಿತ; BBMP, ಖಾಸಗಿ ಶಾಲೆ ವಿರುದ್ಧ ಪ್ರಕರಣ ದಾಖಲು!
ಬೆಂಗಳೂರು: ಬೈಕ್ ನಲ್ಲಿ ಚಲಿಸುತ್ತಿದ್ದಾಗ ಮರದ ಕೊಂಬೆ ಸವಾರನ ಮೇಲೆ ಬಿದ್ದು, ಆತನ ಬೆನ್ನು ಮೂಳೆ ಮುರಿತವಾಗಿರುವ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ.
ಆಶೋಕನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಮರದ ಕೊಂಬೆ ಮುರಿದು ಬಿದ್ದು ಬೈಕ್ ಸವಾರನ ಬೆನ್ನು ಮೂಳೆ ಮುರಿದಿದೆ. ಮರದ ಕೊಂಬೆ ರಸ್ತೆಗೆ ಬೀಳುವಂತಿದ್ದರೂ ತೆರವು ಮಾಡದ ಆರೋಪ ಪ್ರಕರಣ ಸಂಬಂಧ ಖಾಸಗಿ ಶಾಲೆ ಮತ್ತು ಬಿಬಿಎಂಪಿ (BBMP) ವಿರುದ್ಧ ಆಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಗರಬಾವಿ ನಿವಾಸಿ ಚಂದನ್ ಬೆನ್ನು ಮೂಳೆ ಮುರಿತಕ್ಕೊಳಗಾದ ಬೈಕ್ ಸವಾರರಾಗಿದ್ದು, ರಿಚ್ಮಂಡ್ ರಸ್ತೆಯ ಫೈನಾನ್ಸ್ ಕಂಪನಿವೊಂದರಲ್ಲಿ ಕೆಲಸ ಮಾಡುತ್ತಿದ್ದ ಚಂದನ್ ಮಾರ್ಚ್ 7 ರಂದು ಬೆಳಗ್ಗೆ ಕಚೇರಿಗೆ ಹೋಗುತ್ತಿದ್ದರು. ಈ ವೇಳೆ ರಸ್ತೆಗೆ ಚಾಚಿಕೊಂಡಿದ್ದ ಮರದ ಕೊಂಬೆ ಚಂದನ್ ಮೇಲೆ ಮುರಿದು ಬಿದ್ದಿದೆ. ಕೊಂಬೆ ಮೈ ಮೇಲೆ ಬೀಳುತ್ತಿದ್ದಂತೆ ರಸ್ತೆ ಮೇಲೆ ಬಿದ್ದ ಚಂದನ್ನ ಕುತ್ತಿಗೆ ಗಾಯವಾಗಿದೆ.
ಅಲ್ಲದೆ, ಬೆನ್ನು ಮೂಳೆ ಮುರಿದಿದೆ. ಏಳೆಂಟು ನಿಮಿಷಗಳ ಕಾಲ ರಸ್ತೆಯಲ್ಲಿ ನರಳಾಡಿದ್ದ ಚಂದನ್ನನ್ನು ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ 14 ದಿನಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಚಂದನ್ಗೆ ಚಿಕಿತ್ಸೆ ನೀಡಲಾಗುತ್ತಿದೆ.
ಬಿಬಿಎಂಪಿ, ಶಾಲೆ ವಿರುದ್ಧ ಪೊಲೀಸ್ ದೂರು ದಾಖಲು
ಈ ನಡುವೆ ಪ್ರಕರಣ ಸಂಬಂಧ ಗಾಯಾಳು ಆಶೋಕನಗರ ಪೊಲೀಸರಿಗೆ ಚಂದನ್ ದೂರು ನೀಡಿದ್ದಾರೆ. ಮರದ ಕೊಂಬೆ ರಸ್ತೆಗೆ ಬೀಳುವಂತಿದ್ದರೂ ಅದನ್ನು ತೆರವು ಮಾಡದೆ ನಿರ್ಲಕ್ಷ್ಯ ಮಾಡಿದ್ದಾರೆ. ಹೀಗಾಗಿ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ. ಖಾಸಗಿ ಶಾಲೆ ಹಾಗೂ ಬಿಬಿಎಂಪಿ ವಿರುದ್ಧ ಪ್ರಕರಣ ದಾಖಲುಸಿಕೊಂಡ ಪೊಲೀಸರು, ತನಿಖೆ ಕೈಗೊಂಡಿದ್ದಾರೆ.
ಶಾಲೆ ವಿರುದ್ಧ ಆಕ್ರೋಶ
ಖಾಸಗಿ ಶಾಲೆಯ ಆವರಣದಲ್ಲಿದ್ದ ಈ ಮರದ ಕೊಂಬೆಯನ್ನು ತೆಗೆಯುವಂತೆ ಹಲವರು ಬಿಬಿಎಂಪಿಗೆ ದೂರು ನೀಡಿದ್ದರು. ಆದರೂ ಸಹ ಎಚ್ಚೆತ್ತುಕ್ಕೊಳ್ಳದ ಅಧಿಕಾರಗಳ ನಿರ್ಲಕ್ಷ್ಯದಿಂದಾಗಿ ಈ ಅವಘಡ ಸಂಭವಿಸಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ