ಬೆಂಗಳೂರು: ಕುಡಿದ ಮತ್ತಿನಲ್ಲಿ ಆಟೋ ಚಾಲನನ್ನು ಹತ್ಯೆಗೈದಿದ್ದ ಆರೋಪಿಯನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ರಘುವನಹಳ್ಳಿ ನಿವಾಸಿ ಮುನಿಕೃಷ್ಣ (55) ಬಂಧಿತ ಆರೋಪಿ. ಹತ್ಯೆಯಾದ ಆಟೋ ಚಾಲಕನನ್ನು ಗೋಪಿ ಎಂದು ಗುರ್ತಿಸಲಾಗಿದೆ.
ಮಾಲೂರಿನ ಗೋಪಿ ಹಾಗೂ ಆತನ ಸ್ನೇಹಿತ ಉಮಾಪತಿ ವಾಜರಹಳ್ಳಿ 100 ಅಡಿ ರಸ್ತೆಯಲ್ಲಿರುವ ಬಾರ್ ಗೆ ಹೋಗಿದ್ದರು. ಈ ವೇಳೆ ಕುಡಿಯಲು ಬಾರ್'ಗೆ ಬಂದಿದ್ದ ಮುನಿಕೃಷ್ಣ ಎಂಬ ವ್ಯಕ್ತಿಯನ್ನು ಭೇಟಿ ಮಾಡಿದ್ದಾರೆ. ಬಾರ್ ಬಾಗಿಲು ಹಾಕಿದ ಇಬ್ಬರು ಮುನಿಕೃಷ್ಣ ಅವರ ಕಾರಿನೊಳಗೆ ಹೋಗಿದ್ದು, ಮೂವರೂ ಕುಡಿಯಲು ಆರಂಭಿಸಿದ್ದಾರೆ. ಕುಡಿಯುವ ವೇಳೆ ಗೋಪಿ ಹಾಗೂ ಉಮಾಪತಿ ನಡುವೆ ಜಗಳವಾಗಿದೆ. ಈ ವೇಳೆ ಮುನಿಕೃಷ್ಣ ಜಗಳ ಮಾಡದಂತೆ ತಿಳಿಸಿದ್ದಾನೆ. ಆದರೂ ಕೇಳದ ಹಿನ್ನೆಲೆಯಲ್ಲಿ ಇಬ್ಬರೂ ಕಾರಿನಿಂದ ಕೆಳಗೆ ಇಳಿಯುವಂತೆ ತಿಳಿಸಿದ್ದಾನೆ.
ಈ ವೇಳೆ ಕೋಪಗೊಂಡಿರುವ ಗೋಪಿ ಚಪ್ಪಲಿ ತೆಗೆದುಕೊಂಡು ಮುನಿಕೃಷ್ಣಗೆ ಹೊಡೆಯಲು ಹೋಗಿದ್ದಾನೆ. ಇದರಿಂತ ಕೆಂಡಾಮಂಡಲಗೊಂಡಿರುವ ಮುನಿಕೃಷ್ಣ, ಗೋಪಿಗೆ ಕಾರು ಗುದ್ದಿಸಿ ಹತ್ಯೆ ಮಾಡಿ, ಪರಾರಿಯಾಗಿದ್ದಾನೆ. ಬಳಿಕ ಸ್ಥಳದಲ್ಲಿದ್ದ ಉಮಾಪತಿ ಭಯಭೀತಗೊಂಡಿದ್ದು, ಹತ್ಯೆ ಪ್ರಕರಣದಲ್ಲಿ ತನ್ನ ಹೆಸರು ಕೇಳಿಬರಬಹುದೆಂದು ತಿಳಿದು ಮನೆಗೆ ತೆರಳಿ ವಿಷ ಸೇವಿಸಿ, ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕೂಡಲೇ ಆತನ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ನಡುವೆ ಹತ್ಯೆಯಾದ ವ್ಯಕ್ತಿಯ ಗುರುತು ಸಿಗದ ಹಿನ್ನೆಲೆಯಲ್ಲಿ ಪೊಲೀಸರು ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಿದ್ದಾರೆ. ಆರಂಭದಲ್ಲಿ ಅಪಘಾತದ ಪ್ರಕರಣವೆಂದೇ ತಿಳಿದಿದ್ದ ಪೊಲೀಸರಿಗೆ, ಇದೊಂದು ಹತ್ಯೆ ಎಂಬುದು ಸಿಸಿಟಿವಿ ದೃಶ್ಯಾವಳಿಗಳಿಂದ ತಿಳಿದುಬಂದಿದೆ. ಬಳಿಕ ಕಾರಿನ ನೋಂದಣಿ ಸಂಖ್ಯೆ ಆಧರಿಸಿ, ಆರೋಪಿಯನ್ನು ಬಂಧನಕ್ಕೊಳಪಡಿಸಿದ್ದಾರೆ.
Advertisement