ಬೆಂಗಳೂರು: 2023-24ನೇ ಶೈಕ್ಷಣಿಕ ವರ್ಷದಲ್ಲಿ ವೇತನ ಮತ್ತು ವೇತನೇತರ ವೆಚ್ಚದಡಿ ಬಿಡುಗಡೆಯಾದ ಅನುದಾನವನ್ನು ಬಳಸಿಕೊಳ್ಳದ ರಾಜ್ಯದ ಕನಿಷ್ಠ 400 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು ಶೋಕಾಸ್ ನೋಟಿಸ್ ಪಡೆದಿವೆ.
ಈ ಕಾಲೇಜುಗಳು ಅನುದಾನ ಬಳಕೆ ಮಾಡಲು ವಿಫಲವಾದ ಕಾರಣ 18.46 ಕೋಟಿ ರೂ.ಗಳನ್ನು ಹಣಕಾಸು ಇಲಾಖೆಗೆ ಹಿಂತಿರುಗಿಸಲಾಗಿದೆ. ಇದನ್ನು ಪ್ರಶ್ನಿಸಿ ಕಾಲೇಜು ಶಿಕ್ಷಣ ಇಲಾಖೆ ಆಯಾ ಕಾಲೇಜುಗಳ ಪ್ರಾಂಶುಪಾಲರಿಂದ ವಿವರಣೆ ಕೇಳಿದೆ.
'ಇಲಾಖೆಯಲ್ಲಿ ಹಣದ ಕೊರತೆ ಇದ್ದರೂ, ಕಾಲೇಜುಗಳಿಗೆ ಅನುದಾನ ಬಿಡುಗಡೆ ಮಾಡಿದ್ದೇವೆ. ಆದರೆ ನಿಗದಿತ ಸಮಯದಲ್ಲಿ ಆ ಹಣವನ್ನು ಬಳಸಿಕೊಳ್ಳುವಲ್ಲಿ ಪ್ರಾಂಶುಪಾಲರ ನಿರ್ಲಕ್ಷ್ಯದಿಂದಾಗಿ ಒಟ್ಟು 18.46 ಕೋಟಿ ರೂ. ಲ್ಯಾಪ್ಸ್ ಆಗಿದ್ದು, ಮತ್ತೆ ಹಣಕಾಸು ಇಲಾಖೆಗೆ ಹಿಂದಿರುಗಿಸಲಾಗಿದೆ’ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಹಣವನ್ನು ಏಕೆ ಬಳಸಿಲ್ಲ ಎಂಬುದನ್ನು ವಿವರಿಸಲು ವಿಫಲವಾದರೆ ಸಂಬಂಧಪಟ್ಟ ಕಾಲೇಜುಗಳ ಪ್ರಾಂಶುಪಾಲರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ನೋಟಿಸ್ನಲ್ಲಿ ಶಿಕ್ಷಣ ಇಲಾಖೆ ಎಚ್ಚರಿಸಿದೆ.
ಕೆಲವರು ಹಣದ ಒಂದು ಭಾಗವನ್ನು ಮಾತ್ರ ಖರ್ಚು ಮಾಡಿದ್ದಾರೆ ಮತ್ತು ಕೆಲವರು ಒಂದು ಪೈಸೆಯನ್ನೂ ಖರ್ಚು ಮಾಡಿಲ್ಲ. ಒಂದು ನಿರ್ದಿಷ್ಟ ಕಾಲೇಜಿಗೆ 7.5 ಲಕ್ಷ ರೂ. ಬಿಡುಗಡೆಯಾಗಿದೆ. ಆದರೆ, ಬಳಸಿದ್ದು ಕೇವಲ 45 ಸಾವಿರ ರೂ.. ಮೂಲಸೌಕರ್ಯ ಅಭಿವೃದ್ಧಿಗೆ ಹಣದ ಅಗತ್ಯವಿದ್ದರೂ, ಕಾಲೇಜು ಅಧಿಕಾರಿಗಳ ಪ್ರತಿಕ್ರಿಯೆಯಿಂದ ನಮಗೆ ಆಶ್ಚರ್ಯವಾಯಿತು ಎಂದು ಅಧಿಕಾರಿ ಹೇಳಿದರು.
ವೇತನೇತರ ವೆಚ್ಚದಡಿ ಬಿಡುಗಡೆಯಾದ ಮೊತ್ತವನ್ನು ಶೌಚಾಲಯ ನಿರ್ಮಾಣ, ಸುರಕ್ಷಿತ ಕುಡಿಯುವ ನೀರು, ಡೆಸ್ಕ್, ತರಗತಿಗಳ ನವೀಕರಣ ಇತ್ಯಾದಿಗಳಿಗೆ ಬಳಸಬಹುದಿತ್ತು. ಇಲಾಖೆಯಿಂದ ಲಭ್ಯವಿರುವ ಅಂಕಿಅಂಶಗಳು ಕೆಲವು ಕಾಲೇಜುಗಳು ಹಣವನ್ನು ಉತ್ತಮವಾಗಿ ಬಳಸಿಕೊಂಡಿವೆ ಎಂದು ತೋರಿಸುತ್ತದೆ. 2.42 ಲಕ್ಷ ಪಡೆದ ಕಾಲೇಜು ಹೆಚ್ಚಿನ ಮೊತ್ತವನ್ನು ಖರ್ಚು ಮಾಡಿದ್ದು, ಖಾತೆಯಲ್ಲಿ 5 ಸಾವಿರ ರೂ. ಮಾತ್ರ ಉಳಿದಿದೆ.
ಅಧಿಕಾರಿಗಳ ಪ್ರಕಾರ, ಇದರಿಂದಾಗಿ 2024-25 ಶೈಕ್ಷಣಿಕ ವರ್ಷದಲ್ಲಿ ಕಾಲೇಜುಗಳಿಗೆ ಬಿಡುಗಡೆ ಮಾಡುವ ಅನುದಾನ ಕಡಿತಕ್ಕೆ ಕಾರಣವಾಗಬಹುದು.
Advertisement