
ಬೆಂಗಳೂರು: ವಿಧಾನಸೌಧದಿಂದ ಸ್ವಲ್ಪ ದೂರದಲ್ಲಿರುವ ಪೊಲೀಸ್ ತಿಮ್ಮಯ್ಯ ಜಂಕ್ಷನ್ನಿಂದ ಬಾಳೇಕುಂದ್ರಿ ಜಂಕ್ಷನ್ವರೆಗಿನ ರಸ್ತೆಯಲ್ಲಿ ತುಕ್ಕು ಹಿಡಿದ ಮತ್ತು ಬಳಕೆಯಾಗದ ಬೀದಿ ದೀಪದ ಕಂಬಗಳು ಪಾದಚಾರಿ ಮತ್ತು ಪ್ರಯಾಣಿಕರಿಗೆ ಗಂಭೀರ ಅಪಾಯವನ್ನುಂಟು ಮಾಡುತ್ತಿವೆ.
500 ಮೀಟರ್ ಉದ್ದದ ರಸ್ತೆ ವಿಭಜಕದ ಮಧ್ಯದಲ್ಲಿ ಒಂಬತ್ತು ಬೀದಿ ದೀಪದ ಕಂಬಗಳನ್ನು ಅಳವಡಿಸಲಾಗಿದ್ದು, ಈ ಬೀದಿ ದೀಪಗಳ ಬಳಕೆ ಇನ್ನೂ ಆರಂಭವಾಗಿಲ್ಲ. ಹೊಸದಾಗಿ ಬೀದಿ ದೀಪದ ಕಂಬಗಳನ್ನು ಅಳವಡಿಸಿದ್ದರೂ ಹಳೇ ಬೀದಿ ದೀಪಗಳನ್ನು ತೆಗೆದಿಲ್ಲ.
ಬಾಳೇಕುಂದ್ರಿ ವೃತ್ತದ ಬಳಿ ಹಳೆಯ ಬೀದಿ ದೀಪದ ಕಂಬವೊಂದು ವಾಲಿದ್ದು, ಯಾವಾಗ ಬೇಕಾದರೂ ಬೀಳುವ ಅಪಾಯವಿದೆ. ಇದರ ಜೊತೆಗೆ ಕೆಲವೇ ಮೀಟರ್ಗಳಷ್ಟು ದೂರದಲ್ಲಿರುವ ಮತ್ತೊಂದು ತುಕ್ಕು ಹಿಡಿದ ಟ್ರಾಫಿಕ್ ಕಂಬವು ಪ್ರಯಾಣಿಕರಿಗೆ ಮತ್ತು ಪಾದಚಾರಿಗಳಿಗೆ ಮತ್ತಷ್ಟು ಅಪಾಯಗಳನ್ನು ಎದುರು ಮಾಡುತ್ತಿದೆ.
ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣ ತಲುಪಲು ಪ್ರತಿದಿನ ಈ ರಸ್ತೆಯಲ್ಲಿ ನಡೆದು ಹೋಗುವ ನೌಕರ ನಂದನ್ ಎಂಬುವವರು ಮಾತನಾಡಿ, ಕಳೆದ ಆರು ತಿಂಗಳಿಂದ ವಾಲಿರುವ ಕಂಬವನ್ನು ನೋಡುತ್ತಲೇ ಇದ್ದೇನೆ, ಆದರೆ, ಅಧಿಕಾರಿಗಳ ಗಮನಕ್ಕೆ ಮಾತ್ರ ಇದು ಬಂದಿಲ್ಲ. ಮಳೆಯಿಂದ ಕಂಬ ಯಾವಾಗ ಬೇಕಾದರೂ ಬೀಳಬಹುದು. ಕಂಬದ ಸುತ್ತಲೂ ಸಿಕ್ಕಿಕೊಂಡಿರುವ ತಂತಿಗಳು ಪಾದಚಾರಿಗಳಿಗೆ ಮತ್ತಷ್ಟು ಅಪಾಯವನ್ನುಂಟು ಮಾಡುತ್ತವೆ ಎಂದು ಹೇಳಿದ್ದಾರೆ.
ಮತ್ತೋರ್ವ ಪ್ರಯಾಣಿಕ ಕಿಶೋರ್ ಎಂಬುವವರು ಮಾತನಾಡಿ, ಅಧಿಕಾರಿಗಳ ನಿರ್ಲಕ್ಷ್ಯದಿಂದ ನಗರದಲ್ಲಿ ಅನೇಕ ಜೀವಗಳು ಅಪಾಯದಲ್ಲಿವೆ. ಮರಗಳು ಮತ್ತು ಕೊಂಬೆಗಳು ಪ್ರಯಾಣಿಕರ ಮೇಲೆ ಬಿದ್ದು ಪಾದಚಾರಿಗಳು ಗಾಯಗೊಂಡ ಘಟನೆಗಳನ್ನು ಈಗಾಗಲೇ ನೋಡಿದ್ದೇವೆ. ಇದೀಗ ತುಕ್ಕು ಹಿಡಿದ ಹಾಗೂ ವಾಲಿರುವ ಕಂಬಗಳು ಅಪಾಯವನ್ನು ಕೈಬೀಸಿ ಕರೆಯುತ್ತಿವೆ. ಈ ಕಂಬಗಳು ನೆಲಕ್ಕುರುಳಿದರೆ ಹೆಚ್ಚು ಅಪಾಯಕಾರಿ ಎಂದು ಹೇಳಿದರು.
ಬಾಳೇಕುಂದ್ರಿ ಜಂಕ್ಷನ್ ಅಷ್ಟೇ ಅಲ್ಲ, ನಗರದಲ್ಲಿ ಇದೇ ರೀತಿಯ ಹಲವು ಕಂಬಗಳಿವೆ. ಆದರೆ, ರಾಜಕೀಯ ಶಕ್ತಿ ಕೇಂದ್ರವಾದ ವಿಧಾನಸೌಧದ ಬಳಿಯೇ ಅಪಾಯಕಾರಿ ಕಂಬಗಳಿದ್ದರೂ, ಅಧಿಕಾರಿಗಳು ನಿರ್ಲಕ್ಷ್ಯ ತೋರಿಸುವುದು ಆಘಾತ ತಂದಿದೆ ಎಂದು ತಿಳಿಸಿದ್ದಾರೆ.
ಈ ನಡುವೆ ಬಿಬಿಎಂಪಿ ಪೂರ್ವ ವಿಭಾಗದ ಎಲೆಕ್ಟ್ರಿಕಲ್ ಇಂಜಿನಿಯರ್ ಪ್ರತಿಕ್ರಿಯಿಸಿ, ಸಮಸ್ಯೆಯನ್ನು ಕೂಡಲೇ ಪರಿಶೀಲಿಸುವುದಾಗಿ ಹಾಗೂ ಪರಿಹರಿಸುವುದಾಗಿ ತಿಳಿಸಿದ್ದಾರೆ
Advertisement