ಅಪಘಾತದಲ್ಲಿ ಬಾಲಕ ಸಾವು: ಉದ್ರಿಕ್ತರಿಂದ ಹಲ್ಲೆಗೊಳಗಾಗಿದ್ದ BBMP ಕಸದ ಲಾರಿ ಚಾಲಕ ಸಾವು

ಅಬ್ದುಲ್ ಖಾದರ್ ಎಂಬವರು ಮಗ ಐಮಾನ್‌ನೊಂದಿಗೆ ಸ್ಕೂಟರ್​ನಲ್ಲಿ ತೆರಳುತ್ತಿದ್ದ ವೇಳೆ ಕಸದ ಲಾರಿ ಡಿಕ್ಕಿ ಹೊಡೆದಿತ್ತು. ಪರಿಣಾಮ ರಸ್ತೆಯ ಮೇಲೆ ಬಿದ್ದ ಐಮಾನ್‌ನ ತಲೆ ಮೇಲೆ ಲಾರಿ ಹರಿದಿದ್ದರಿಂದ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ರಸ್ತೆ ಅಪಘಾತದಲ್ಲಿ ಬಾಲಕನ ಸಾವಿಗೀಡಾದ ಕಾರಣಕ್ಕೆ ಉದ್ರಿಕ್ತ ಗುಂಪಿನಿಂದ ಹಲ್ಲೆಗೊಳಗಾಗಿದ್ದ ಬಿಬಿಎಂಪಿ ಘನ ತ್ಯಾಜ್ಯ ಸಾಗಿಸುವ ಕಾಂಪ್ಯಾಕ್ಟರ್‌ ಚಾಲಕ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮೃತಪಟ್ಟಿದ್ದಾರೆ.

ಕೊಂಡಯ್ಯ (59) ಎಂಬವರೇ ಕೊನೆಯುಸಿರೆಳೆದ ಲಾರಿ ಚಾಲಕ. ಮಾರ್ಚ್ 29ರಂದು ಥಣಿಸಂದ್ರದ ರೈಲ್ವೇ ಟ್ರ್ಯಾಕ್ ಬಳಿ ಕಸದ ಲಾರಿ ಹಾಗೂ ಸ್ಕೂಟರ್ ನಡುವೆ ಸಂಭವಿಸಿ, ಬಾಲಕ ಐಮಾನ್ (10) ಮೃತಪಟ್ಟಿದ್ದ.

ಅಬ್ದುಲ್ ಖಾದರ್ ಎಂಬವರು ಮಗ ಐಮಾನ್‌ನೊಂದಿಗೆ ಸ್ಕೂಟರ್​ನಲ್ಲಿ ತೆರಳುತ್ತಿದ್ದ ವೇಳೆ ಕಸದ ಲಾರಿ ಡಿಕ್ಕಿ ಹೊಡೆದಿತ್ತು. ಪರಿಣಾಮ ರಸ್ತೆಯ ಮೇಲೆ ಬಿದ್ದ ಐಮಾನ್‌ನ ತಲೆ ಮೇಲೆ ಲಾರಿ ಹರಿದಿದ್ದರಿಂದ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದ. ಹೆಣ್ಣೂರು ಸಂಚಾರ ಪೊಲೀಸ್ ವ್ಯಾಪ್ತಿಯಲ್ಲಿರುವ ರೈಲ್ವೆ ಸೇತುವೆಯ ಬಳಿಯ ಥಣಿಸಂದ್ರ ಮುಖ್ಯ ರಸ್ತೆಯಲ್ಲಿ ಈ ಘಟನೆ ಸಂಭವಿಸಿತ್ತು.

ಅಪಘಾತವನ್ನು ಕಂಡು ರೊಚ್ಚಿಗೆದ್ದ ಸ್ಥಳೀಯರು, ಲಾರಿಗೆ ಬೆಂಕಿ ಹಚ್ಚಿ, ಚಾಲಕನ ಮೇಲೆ ಮನಬಂದಂತೆ ಹಲ್ಲೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದ್ದರು.

ಸಂಗ್ರಹ ಚಿತ್ರ
BBMP ಕಸದ ಲಾರಿ ಡಿಕ್ಕಿಯಾಗಿ ಬಾಲಕ ಸಾವು, ಚಾಲಕನ ಬಂಧನ

ಮಾರಣಾಂತಿಕ ಹಲ್ಲೆಗೀಡಾದ ಕೊಂಡಯ್ಯ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.

ಮೃತ ಕೊಂಡಯ್ಯ ಆಂಧ್ರ ಪ್ರದೇಶದ ಮೂಲದವರಾಗಿದ್ದು, ವೈಟ್‌ಫೀಲ್ಡ್ ಬಳಿ ವಾಸಿಸುತ್ತಿದ್ದರು ಎನ್ನಲಾಗಿದೆ. ಘಟನೆ ವೇಳೆ ಕೊಂಡಯ್ಯ ಮದ್ಯದ ಅಮಲಿನಲ್ಲಿದ್ದ ಎಂದು ಸ್ಥಳೀಯರು ಆರೋಪಿಸಿದ್ದು, ಚಾಲಕ ಕುಡಿದಿರಲಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಘಟನೆ ಸಂಬಂಧ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ಬಾಲಾಪರಾಧಿ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ಸರೈಪಾಳ್ಯ ಮತ್ತು ಹೆಗ್ಡೆನಗರ ನಿವಾಸಿಗಳಾದ ಅಫ್ರೋಜ್, ಅಕ್ರಮ್ ಖಾನ್ ಮತ್ತು ತಬಾರಕ್ ಎಂದು ಗುರ್ತಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com