Infosys ಸಹ-ಸಂಸ್ಥಾಪಕ ಕ್ರಿಸ್ ಗೋಪಾಲಕೃಷ್ಣನ್ ವಿರುದ್ಧದ FIR ರದ್ದುಗೊಳಿಸಿದ Karnataka High Court
ಬೆಂಗಳೂರು: ಇನ್ಫೋಸಿಸ್ ಸಹ- ಸಂಸ್ಥಾಪಕ ಕ್ರಿಸ್ ಗೋಪಾಲಕೃಷ್ಣನ್ ಮತ್ತಿತರರ ವಿರುದ್ಧ ದಾಖಲಾಗಿದ್ದ ಅಟ್ರಾಸಿಟಿ ಕಾಯ್ದೆ ಕುರಿತ ಎಫ್ಐಆರ್ ಅನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ.
ಇನ್ಫೋಸಿಸ್ ಸಹ- ಸಂಸ್ಥಾಪಕ ಕ್ರಿಸ್ ಗೋಪಾಲಕೃಷ್ಣನ್ ಮತ್ತು ಇತರರ ವಿರುದ್ಧ 1989ರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಅಟ್ರಾಸಿಟಿ ತಡೆ) ಕಾಯ್ದೆಯಡಿ ದಾಖಲಾಗಿದ್ದ ಎಫ್ಐಆರ್ ಅನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ. ಕರ್ನಾಟಕ ಹೈಕೋರ್ಟ್ ಈ ದೂರನ್ನು “ಕಾನೂನಿನ ಪ್ರಕ್ರಿಯೆಯ ದುರ್ಬಳಕೆ” ಎಂದು ಕಿಡಿಕಾರಿದೆ. ಅಲ್ಲದೆ ದೂರುದಾರರ ವಿರುದ್ಧ ಕ್ರಿಮಿನಲ್ ಮಾನಹಾನಿ ಪ್ರಕರಣ ದಾಖಲಿಸಲು ಅವಕಾಶ ಒದಗಿಸಿದೆ.
ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರು ಏಪ್ರಿಲ್ 16 ರಂದು ಈ ಆದೇಶವನ್ನು ನೀಡಿದ್ದು, ಈ ದೂರು “ಅರ್ಜಿದಾರರಿಗೆ ಕಿರುಕುಳ ನೀಡುವ ದುರುದ್ದೇಶಪೂರಿತ ಪ್ರಯತ್ನ” ಎಂದು ತಿಳಿಸಿದ್ದಾರೆ.
ಭಾರತೀಯ ವಿಜ್ಞಾನ ಸಂಸ್ಥೆ (ಐ ಐ ಎಸ್ ಸಿ) ಯ ಮಾಜಿ ಸಿಬ್ಬಂದಿ ಡಿ. ಸಣ್ಣ ದುರ್ಗಪ್ಪ ಅವರು ಸಲ್ಲಿಸಿದ ಖಾಸಗಿ ದೂರಿನ ಆಧಾರದ ಮೇಲೆ ಈ ಎಫ್ಐಆರ್ ದಾಖಲಾಗಿತ್ತು. 2014ರಲ್ಲಿ ಲೈಂಗಿಕ ಕಿರುಕುಳ ಆರೋಪಗಳ ಕುರಿತಾದ ಆಂತರಿಕ ತನಿಖೆಯ ಬಳಿಕ ಸಣ್ಣ ದುರ್ಗಪ್ಪ ಅವರನ್ನು ಕೆಲಸದಿಂದ ತೆಗೆದುಹಾಕಲಾಗಿತ್ತು.
ಕೋರ್ಟ್ ಗಮನಿಸಿದಂತೆ, ಈ ಪ್ರಕರಣವು 2015ರಲ್ಲಿ ಹೈಕೋರ್ಟ್ ನಲ್ಲಿ ಮುಂದೆ ಬಂದ ಬಳಿಕ ಕೆಲಸದಿಂದ ತೆಗೆದುಹಾಕಿರುವುದನ್ನು ರಾಜೀನಾಮೆಯಾಗಿ ಪರಿವರ್ತಿಸಲಾಯಿತು. ಆಗಿನ ಒಪ್ಪಂದದ ಭಾಗವಾಗಿ ಸಣ್ಣ ದುರ್ಗಪ್ಪ ಅವರು ಸಂಸ್ಥೆ ಮತ್ತು ಅದರ ಪ್ರತಿನಿಧಿಗಳ ವಿರುದ್ಧದ ಎಲ್ಲಾ ದೂರುಗಳು ಮತ್ತು ಕಾನೂನು ಪ್ರಕರಣಗಳನ್ನು ವಾಪಸ್ ತೆಗೆದುಕೊಳ್ಳಲು ಒಪ್ಪಿಕೊಂಡಿದ್ದರು.
ಹಾಗಿದ್ದರೂ ಅವರು ಎರಡು ಹೆಚ್ಚುವರಿ ಎಫ್ಐಆರ್ ಗಳನ್ನು ದಾಖಲಿಸಿದ್ದರು. ಈ ಎರಡೂ ಎಫ್ಐಆರ್ ಗಳನ್ನು 2022 ಮತ್ತು 2023 ರಲ್ಲಿ ರದ್ದುಗೊಳಿಸಲಾಯಿತು. ಪ್ರಸ್ತುತ ಎಫ್ಐಆರ್ ನಲ್ಲಿ ಸಮಾನ ಆರೋಪಗಳಿದ್ದು, ಇದು ನ್ಯಾಯಾಲಯ ಪ್ರಕ್ರಿಯೆಯ ದುರ್ಬಳಕೆ ಎಂದು ಕೋರ್ಟ್ ತಿಳಿಸಿದೆ.
ಹೈಕೋರ್ಟ್ ಕ್ರಿಸ್ ಗೋಪಾಲಕೃಷ್ಣನ್ ಮತ್ತು ಇತರ ಅರ್ಜಿದಾರರಿಗೆ ದುರ್ಗಪ್ಪ ವಿರುದ್ಧ ಕ್ರಿಮಿನಲ್ ಮಾನಹಾನಿ ಪ್ರಕರಣವನ್ನು ದಾಖಲಿಸಲು ಅಡ್ವೊಕೇಟ್ ಜನರಲ್ ರಿಂದ ಅನುಮತಿ ಪಡೆಯಲು ಅವಕಾಶ ನೀಡಿದೆ.