
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಗಾಂಜಾ ದಂಧೆ ಎಗ್ಗಿಲ್ಲದೆ ಮುಂದುವರಿದಿದೆ. ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ವಾಹನ ತಪಾಸಣೆ ವೇಳೆ ಪೊಲೀಸರು ಕಾರಿನಿಂದ 21 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ನಾಯಂಡಳ್ಳಿಯಿಂದ ಅನುಮಾನಾಸ್ಪದವಾಗಿ ಬರುತ್ತಿದ್ದ ಕಾರನ್ನು ತಡೆದ ಪೊಲೀಸರು, ಪರಿಶೀಲನೆಗೆ ಮುಂದಾಗಿದ್ದಾರೆ. ಕಾರಿನಲ್ಲಿ ಡ್ರೈವರ್ ಸೇರಿ ಮೂವರು ಪ್ರಯಾಣಿಸುತ್ತಿದ್ದರು. ಪೊಲೀಸರು ವಾಹನ ನಿಲ್ಲಿಸುತ್ತಿದ್ದಂತೆ ಭಯಭೀತರಾದ ಇಬ್ಬರು ಪೆಡ್ಲರ್ ಗಳು ಕಾರಿನ ಚಾಲಕನನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಬಳಿಕ ಕಾರು ಚಾಲಕನನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಮಂಗಳವಾರ ಸಂಜೆ ಗಿರಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ವೀರಭದ್ರ ರಸ್ತೆಯ ಬಳಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬನಶಂಕರಿ ಸಂಚಾರ ಪೊಲೀಸರು ಟಿಂಟೆಡ್ ಗ್ಲಾಸ್ ಕಾರನ್ನು ಗಮನಿಸಿದ್ದಾರೆ. ಕಾರಿನ ಚಾಲಕ ಮೊಬೈಲ್ ಫೋನ್ನಲ್ಲಿ ಮಾತನಾಡುತ್ತಿರುವುದು ಕಂಡು ಬಂದಿದೆ. ಕೂಡಲೇ ವಾಹನವನ್ನು ನಿಲ್ಲಿಸಿದ್ದಾರೆ. ಈ ವೇಳೆ ಕಾರಿನಲ್ಲಿದ್ದ ಇಬ್ಬರು ಸ್ಥಳದಿಂದ ಓಡಿ ಹೋದರು. ಅನುಮಾನ ಹೆಚ್ಚಾದ ಬಳಿಕ ಕಾರನ್ನು ಪರಿಶೀಲನೆ ನಡೆಸಿದರೆ 21 ಕೆಜಿ ಗಾಂಜಾ ಹೊಂದಿದ್ದ 2 ಚೀಲಗಳು ಪತ್ತೆಯಾಯಿತು. ಇದರ ಮೌಲ್ಯ 80 ಲಕ್ಷ ರೂ. ಆಗಿದೆ. ಬಳಿಕ ಕಾರಿನ ಚಾಲಕನನ್ನು ವಶಕ್ಕೆ ಪಡೆಯಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ಚಾಲಕ ನಸೀಮ್ ಅಹ್ಮದ್ ಅವರನ್ನು 5,000 ರೂ.ಗೆ ಕೆಲಸಕ್ಕೆ ನೇಮಿಸಿಕೊಂಡಿದ್ದಾರೆ. ಗೋಣಿ ಚೀಲಗಳಲ್ಲಿ ಕಳ್ಳಸಾಗಣೆ ಮಾಡಲಾದ ವಸ್ತು ಬಗ್ಗೆ ಅವನಿಗೆ ತಿಳಿದಿದೆಯೇ ಎಂಬುದರ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ಜಪ್ತಿ ಮಾಡಿರುವ ಕಾರಿನ ಹಿಂಬದಿ ಗ್ಲಾಸ್ಗಳಿಗೆ ಟಿಂಟೆಡ್ ಹಾಕಲಾಗಿದೆ. ಕಾರಿನ ಮೇಲೆ ‘ಆರ್ಮಿ’ ಎಂದು ಬರೆಸಲಾಗಿದೆ. ಕಾರು ಬೇರೊಬ್ಬರ ಹೆಸರಿನಲ್ಲಿದೆ. ಮಂಗಳೂರಿನಲ್ಲಿ ನೋಂದಾಯಿಸಲಾದ ಕಾರನ್ನು 'ಆರ್ಮಿ' ಸ್ಟಿಕ್ಕರ್ನೊಂದಿಗೆ ಬಳಕೆ ಮಾಡಲಾಗಿದೆ. ಪರಾರಿಯಾದ ಆರೋಪಿಗಳಿಗಾಗಿ ಹುಡುಕಾಟ ಆರಂಭಿಸಲಾಗಿದ್ದು, ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
Advertisement