

ಬೆಂಗಳೂರು: ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಅವರು ಮೇ 30ರೊಳಗೆ ಬಾಕಿ ಇರುವ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು, ಇಲ್ಲವಾದರೆ ಅಮಾನತು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಯಲಹಂಕದ ಕೇಂದ್ರಿಯ ವಿಹಾರ, ಟಾಟಾ ನಗರ, ಹೆಬ್ಬಾಳ, ಮನ್ಯತಾ ಟೆಕ್ ಪಾರ್ಕ್, ಎಚ್ಬಿಆರ್ ಲೇಔಟ್, ಗೆದ್ದಲಹಳ್ಳಿ, ನಾಗವಾರ, ಸಾಯಿ ಲೇಔಟ್ ಮತ್ತು ಸಿಲ್ಕ್ ಬೋರ್ಡ್ ಸೇರಿದಂತೆ ಪ್ರವಾಹ ಸಮಸ್ಯೆ ಇರುವ ಪ್ರದೇಶಗಳನ್ನು ಪರಿಶೀಲಿಸಿದ ನಂತರ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.
ನಿನ್ನೆ ಬೆಳಗ್ಗೆ ಗ್ರೇಟರ್ ಬೆಂಗಳೂರು ಅಥಾರಿಟಿ (GBA) ಮುಖ್ಯ ಆಯುಕ್ತ ಎಂ ಮಹೇಶ್ವರ ರಾವ್ ಅವರೊಂದಿಗೆ ಪರಿಶೀಲನೆ ನಡೆಸಿದ ಗಿರಿನಾಥ್, ಪ್ರವಾಹ ತಡೆಗೆ ಕೈಗೊಳ್ಳಲಾಗುತ್ತಿರುವ ವಿವಿಧ ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಿದರು.
ಕಳೆದ ನಾಲ್ಕು ವರ್ಷಗಳಲ್ಲಿ ಸಾಕಷ್ಟು ಕೆಲಸ ನಡೆದಿದೆ ಮತ್ತು ಬಹುತೇಕ ಪ್ರವಾಹವನ್ನು ತಡೆಯುವ ನಿರೀಕ್ಷೆಯಿದೆ ಎಂದು ಹೇಳಿದರು.
ಎಚ್ಬಿಆರ್ ಲೇಔಟ್ ಪರಿಶೀಲನೆ ವೇಳೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಇಂಟೇಕ್ ವೆಲ್ ಕಾಮಗಾರಿಯ ವಿಳಂಬದ ಬಗ್ಗೆ ತುಷಾರ್ ಗಿರಿನಾಥ್ ಅಸಮಾಧಾನ ವ್ಯಕ್ತಪಡಿಸಿದರು. ಈ ಕೆಲಸವು ಅವರು ಹಿಂದಿನ ಬಿಬಿಎಂಪಿ ಆಯುಕ್ತರಾಗಿದ್ದ ಸಮಯದಿಂದಲೇ ಬಾಕಿ ಉಳಿದಿದೆ ಎಂದು ತಿಳಿದುಬಂದಿದೆ.
ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಕಲ್ಲುಗಳ ಇರುವಿಕೆಯಿಂದ ಕಾಮಗಾರಿ ವಿಳಂಬವಾಗಿದೆ ಎಂದು ಎಂಜಿನಿಯರ್ ತಿಳಿಸಿದ್ದಾರೆ. ಅವರು ಅಕ್ಟೋಬರ್ ತನಕ ಸಮಯ ಕೇಳಿದ್ದಾರೆ. ಅಷ್ಟೊರೊಳಗೆ ಪೂರ್ಣಗೊಳಿಸದಿದ್ದರೆ ಅಮಾನತಿಗೆ ಶಿಫಾರಸು ಮಾಡಲಾಗುವುದು ಎಂದರು.
ಕೇಂದ್ರಿಯ ವಿಹಾರ ಅಪಾರ್ಟ್ಮೆಂಟ್ ಪ್ರದೇಶ ಮತ್ತು ಕೊಗಿಲು ಜಂಕ್ಷನ್ನಲ್ಲಿ ಪ್ರವಾಹ ತಡೆಯಲು ವೆಂಕಟಾಳ ಕೆರೆಯಿಂದ ಜಕ್ಕೂರು ಕೆರೆಗೆ 2.7 ಕಿಮೀ ಉದ್ದದ, 35 ಮೀಟರ್ ಅಗಲದ ಸ್ಟಾರ್ಮ್ ವಾಟರ್ ಡ್ರೇನ್ (SWD) ನಿರ್ಮಾಣ ಮಾಡಲಾಗುತ್ತದೆ. ಎರಡೂ ಬದಿಗಳಲ್ಲಿ 30 ಅಡಿ ಅಗಲದ ರಸ್ತೆ ನಿರ್ಮಾಣವಾಗಲಿದೆ. ಮೊದಲ ಹಂತದಲ್ಲಿ 1.5 ಕಿಮೀ ಉದ್ದದ RCC ಗೋಡೆ ಹಾಗೂ ಡ್ರೇನ್ ನಿರ್ಮಿಸಲಾಗಿದೆ.
ಟಾಟಾ ನಗರದಲ್ಲಿ ಪ್ರವಾಹ ತಡೆ ಕ್ರಮಗಳ ಬಗ್ಗೆ ಮಾಹಿತಿ ಪಡೆದ ಅವರು, ದೊಡ್ಡಬೊಮ್ಮಸಂದ್ರ ಕೆರೆಯಿಂದ 900 ಮೀಟರ್ ಉದ್ದದ, 20 ಅಡಿ ಅಗಲದ ಸ್ಟಾರ್ಮ್ ವಾಟರ್ ಡ್ರೇನ್ ನಿರ್ಮಾಣ ನಡೆಯುತ್ತಿದೆ ಎಂದು ಹೇಳಿದರು.
ಹೆಬ್ಬಾಳದಲ್ಲಿ 15.90 ಕೋಟಿ ರೂಪಾಯಿ ವೆಚ್ಚದ ಕೆರೆ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದ ಅವರು, 16 ಏಕರೆ ಅಕ್ರಮ ಆಕ್ರಮಣ ತೆರವು ಮಾಡಿದ ನಂತರ ವೆಟ್ಲ್ಯಾಂಡ್ ಮತ್ತು ಇನ್ಲೆಟ್ ಕಾಮಗಾರಿಗಳು ಆರಂಭವಾಗಲಿವೆ ಎಂದು ಹೇಳಿದರು. ಹೆಬ್ಬಾಳ ಜಂಕ್ಷನ್ ಕೆಳಭಾಗದಿಂದ ಮಳೆನೀರನ್ನು ಕೆರೆಗೆ ಹರಿಸುವ ವ್ಯವಸ್ಥೆ ರೂಪಿಸಲಾಗುತ್ತಿದೆ ಎಂದರು.
ವಿಮಾನ ನಿಲ್ದಾಣ ದಿಕ್ಕಿನ ಮುಖ್ಯ ರಸ್ತೆಯ ಡೌನ್ ರ್ಯಾಂಪ್, ಸರ್ವಿಸ್ ರಸ್ತೆ ಮತ್ತು ಬಸ್ ನಿಲ್ದಾಣ ಸೇರಿದಂತೆ ನಾಲ್ಕು ನೀರು ನಿಲ್ಲುವ ಸ್ಥಳಗಳಿಗೆ ಶಾಶ್ವತ ಪರಿಹಾರಗಳನ್ನು ಜಾರಿಗೆ ತರಲಾಗಿದೆ ಎಂದು ಹೇಳಿದರು. ತುಮಕೂರು ರಸ್ತೆ ಲೂಪ್ ಡೌನ್ ರ್ಯಾಂಪ್ ಕಾಮಗಾರಿಯನ್ನು 15 ದಿನಗಳಲ್ಲಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಮಾನ್ಯತಾ ಟೆಕ್ ಪಾರ್ಕ್ ಮತ್ತು ವೀರನಪಾಳ್ಯ ಔಟರ್ ರಿಂಗ್ ರಸ್ತೆಯಲ್ಲಿ ನೀರು ನಿಲ್ಲುವ ಸಮಸ್ಯೆಗೆ ಪರಿಹಾರವಾಗಿ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದ್ದು, ಖಾಸಗಿ ವೆಚ್ಚದಲ್ಲಿ ಸ್ಟಾರ್ಮ್ ವಾಟರ್ ಡ್ರೇನ್ ನಿರ್ಮಾಣ ಮಾಡಲಾಗುತ್ತಿದೆ. ಸಿಲ್ಕ್ ಬೋರ್ಡ್ ಜಂಕ್ಷನ್ನಲ್ಲಿ ನೀರು ನಿಲ್ಲುವ ಸಮಸ್ಯೆ ನಿವಾರಣೆಗೆ ಕಲ್ವರ್ಟ್ ಕಾಮಗಾರಿ ನಡೆಯುತ್ತಿದ್ದು, ಎತ್ತರವನ್ನು 1.5 ಮೀಟರ್ನಿಂದ 3.5 ಮೀಟರ್ಗೆ ಹೆಚ್ಚಿಸಲಾಗುತ್ತಿದೆ ಹಾಗೂ ಗ್ರೇಟಿಂಗ್ ಅಳವಡಿಸಲಾಗುತ್ತಿದೆ ಎಂದರು.
ಸಿಲ್ಕ್ ಬೋರ್ಡ್ನಿಂದ ರಗ್ಗಿಗುಡ್ಡದವರೆಗೆ ನಿರ್ಮಿಸಿರುವ ಡಬಲ್ ಡೆಕ್ಕರ್ ಫ್ಲೈಓವರ್ನಲ್ಲಿ ಸಂಚಾರ ಸುಗಮವಾಗಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಜೊತೆಗೆ, ಪಿಲ್ಲರ್ ಕಾಮಗಾರಿ ಪೂರ್ಣಗೊಂಡ ಪ್ರದೇಶಗಳಲ್ಲಿ ಬ್ಯಾರಿಕೇಡ್ಗಳನ್ನು ತೆರವುಗೊಳಿಸಿ ರಸ್ತೆ ಅಭಿವೃದ್ಧಿಪಡಿಸಲು ಸೂಚಿಸಿದರು.
Advertisement