ಬೆಂಗಳೂರು: 9 ಕೋಟಿ ರೂ. ನಗದು ಸಾಗಿಸುತ್ತಿದ್ದ ಕಾರು ವಶ; ಆದಾಯ ತೆರಿಗೆ ಇಲಾಖೆ ತನಿಖೆ-Video

ಈ ಕಾರು ಬೆಂಗಳೂರಿನಿಂದ ತಮಿಳುನಾಡಿನ ಹೊಸೂರಿನತ್ತ ತೆರಳುತ್ತಿತ್ತು. ರಾತ್ರಿ ಸುಮಾರು 10.30ರ ವೇಳೆಗೆ ಹೊಸೂರು ರಸ್ತೆಯ ಎಲೆಕ್ಟ್ರಾನಿಕ್ ಸಿಟಿ ಎಕ್ಸ್‌ಪ್ರೆಸ್‌ವೇ ಟೋಲ್ ಪ್ಲಾಜಾ ದಾಟಿದ ಬಳಿಕ ಸಿಗ್ನಲ್ ಬಳಿ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯ ಬೀಟ್ ಪೊಲೀಸರು ಕಾರನ್ನು ತಡೆದರು.
Cash in car
ಕಾರಿನಲ್ಲಿ ಪತ್ತೆಯಾದ ನಗದು
Updated on

ಬೆಂಗಳೂರು: ನಗರದ ಹೊರವಲಯದಲ್ಲಿ 9 ಕೋಟಿ ರೂಪಾಯಿ ನಗದು ಹಣವನ್ನು ಸಾಗಿಸುತ್ತಿದ್ದ ಕಾರನ್ನು ಬೆಂಗಳೂರು ಪೊಲೀಸರು ತಡೆದು ಪರಿಶೀಲಿಸಿದ್ದಾರೆ.

ಮೊನ್ನೆ ಆಗಸ್ಟ್ 18ರಂದು ಬೆಂಗಳೂರಿನ ಆದಾಯ ತೆರಿಗೆ ಇಲಾಖೆಯ ಯೂನಿಟ್-22ರ ಉಪನಿರ್ದೇಶಕ ಜಗದೀಶ್ ಅವರಿಂದ ಮಾಹಿತಿ ಬಂದಿತ್ತು. KL 20 T 8629 ನೋಂದಣಿ ಸಂಖ್ಯೆಯ ಹ್ಯುಂಡೈ ಕ್ರೆಟಾ ಕಾರಿನಲ್ಲಿ ಭಾರಿ ಪ್ರಮಾಣದ ನಗದು ಹಣವನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿತ್ತು, ಅದರ ಆಧಾರ ಮೇಲೆ ದಾಳಿ ಮಾಡಲಾಗಿದೆ.

ಈ ಕಾರು ಬೆಂಗಳೂರಿನಿಂದ ತಮಿಳುನಾಡಿನ ಹೊಸೂರಿನತ್ತ ತೆರಳುತ್ತಿತ್ತು. ರಾತ್ರಿ ಸುಮಾರು 10.30ರ ವೇಳೆಗೆ ಹೊಸೂರು ರಸ್ತೆಯ ಎಲೆಕ್ಟ್ರಾನಿಕ್ ಸಿಟಿ ಎಕ್ಸ್‌ಪ್ರೆಸ್‌ವೇ ಟೋಲ್ ಪ್ಲಾಜಾ ದಾಟಿದ ಬಳಿಕ ಸಿಗ್ನಲ್ ಬಳಿ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯ ಬೀಟ್ ಪೊಲೀಸರು ಕಾರನ್ನು ತಡೆದರು. ಬಳಿಕ ಕಾರು ಹಾಗೂ ಅದರಲ್ಲಿದ್ದ ಇಬ್ಬರನ್ನು ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು.

ಇವರಲ್ಲಿ ಒಬ್ಬನನ್ನು ತಮಿಳುನಾಡಿನ ತೂತ್ತುಕುಡಿಯ ಸಿಂಧು ಜ್ಯುವೆಲ್ಲರ್ಸ್‌ಗೆ ಸಂಬಂಧಿಸಿದ 42 ವರ್ಷದ ಸಚಿನ್ ಎಂದು ಗುರುತಿಸಲಾಗಿದೆ. ಎರಡನೇ ಶಂಕಿತನ ಗುರುತು ತಕ್ಷಣಕ್ಕೆ ತಿಳಿದುಬಂದಿಲ್ಲ. ಇಬ್ಬರನ್ನೂ ಆದಾಯ ತೆರಿಗೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಆದಾಯ ತೆರಿಗೆ ಅಧಿಕಾರಿಗಳು ಕಾರನ್ನು ಪರಿಶೀಲಿಸಿದಾಗ, ಸೂಟ್‌ಕೇಸ್‌ನಲ್ಲಿ 500 ರೂ ಮುಖಬೆಲೆಯ ನೋಟುಗಳ ರೂಪದಲ್ಲಿ 9 ಕೋಟಿ ನಗದು ಪತ್ತೆಯಾಗಿದೆ. ಬಳಿಕ ತಮಿಳುನಾಡಿನಲ್ಲಿ ಶಂಕಿತರೊಂದಿಗೆ ಸಂಪರ್ಕ ಹೊಂದಿರುವ ಸ್ಥಳಗಳಲ್ಲಿ ನಡೆಸಿದ ಮತ್ತಷ್ಟು ಶೋಧದಲ್ಲಿ 1.3 ಕೋಟಿ ರೂ ಹೆಚ್ಚುವರಿ ನಗದು ಪತ್ತೆಯಾಗಿದೆ.

ಹಣದ ಮೂಲವನ್ನು ಪತ್ತೆಹಚ್ಚಲು ಆದಾಯ ತೆರಿಗೆ ಇಲಾಖೆ ತನಿಖೆ ಆರಂಭಿಸಿದೆ. ತನಿಖೆ ಮುಂದುವರಿದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com