ಆನ್‌ಲೈನ್ ಗೇಮಿಂಗ್‌ ವ್ಯಸನಕ್ಕೆ ಸುಂದರ ಕುಟುಂಬ ಬಲಿ: ಬುದ್ಧಿವಾದ ಹೇಳಿದ ತಂದೆ-ಅಕ್ಕನ ಇರಿದು ಕೊಂದ ಯುವಕ, ತಾಯಿ ಸ್ಥಿತಿ ಗಂಭೀರ

ಶನಿವಾರ ರಾತ್ರಿ 10:30ರ ಸುಮಾರಿಗೆ ಊಟ ಮುಗಿದ ಬಳಿಕ ಪೋಷಕರು ಈ ಹಣದ ನಷ್ಟ ಹಾಗೂ ಬೆಟ್ಟಿಂಗ್ ಚಟದ ಕುರಿತು ಮನ್‌ದೀಪ್‌ನನ್ನು ತರಾಟೆಗೆ ತೆಗೆದುಕೊಂಡು ಬುದ್ಧಿವಾದ ಹೇಳಿದ್ದಾರೆ. ಇದರಿಂದ ತೀವ್ರ ಆಕ್ರೋಶಗೊಂಡ ಆತ, ಅಡುಗೆ ಮನೆಯಲ್ಲಿದ್ದ ಚಾಕು ತಂದು ಕುಟುಂಬಸ್ಥರ ಮೇಲೆ ದಾಳಿ ನಡೆಸಿದ್ದಾನೆ.
file photo
ಸಂಗ್ರಹ ಚಿತ್ರ
Updated on

ಕೊಪ್ಪಳ: ಆನ್‌ಲೈನ್ ಗೇಮಿಂಗ್ ಮತ್ತು ಬೆಟ್ಟಿಂಗ್ ಚಟಕ್ಕೆ ಬಿದ್ದ 18 ವರ್ಷದ ಕಾಲೇಜು ವಿದ್ಯಾರ್ಥಿಯೊಬ್ಬ, ಬುದ್ಧಿವಾದ ಹೇಳಿದ ಹೆತ್ತ ತಂದೆ ಮತ್ತು ಅಕ್ಕನನ್ನು ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಗಂಗಾವತಿ ತಾಲೂಕಿನ ಹೊಸ ಅಯೋಧ್ಯೆ ಗ್ರಾಮದಲ್ಲಿ ನಡೆದಿದೆ.

ದಾಳಿಯಲ್ಲಿ ತಾಯಿ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಕೃತ್ಯದ ಬಳಿಕ ಆರೋಪಿ ಯುವಕ ತಾನೂ ಸಹ ಕುತ್ತಿಗೆ ಸೀಳಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಆರೋಪಿಯನ್ನು ಸಾಯಿ ವೆಂಕಟ್ ಮನ್‌ದೀಪ್ (18) ಎಂದು ಗುರುತಿಸಲಾಗಿದೆ. ಈತ ಕಳೆದ ಒಂದು ವರ್ಷದಿಂದ ಮೊಬೈಲ್‌ನಲ್ಲಿ ಆನ್‌ಲೈನ್ ಬೆಟ್ಟಿಂಗ್ ಆಡುತ್ತಾ ಸುಮಾರು 15 ಲಕ್ಷ ರೂಪಾಯಿಗೂ ಅಧಿಕ ಹಣವನ್ನು ಕಳೆದುಕೊಂಡಿದ್ದ ಎನ್ನಲಾಗಿದೆ.

ಶನಿವಾರ ರಾತ್ರಿ 10:30ರ ಸುಮಾರಿಗೆ ಊಟ ಮುಗಿದ ಬಳಿಕ ಪೋಷಕರು ಈ ಹಣದ ನಷ್ಟ ಹಾಗೂ ಬೆಟ್ಟಿಂಗ್ ಚಟದ ಕುರಿತು ಮನ್‌ದೀಪ್‌ನನ್ನು ತರಾಟೆಗೆ ತೆಗೆದುಕೊಂಡು ಬುದ್ಧಿವಾದ ಹೇಳಿದ್ದಾರೆ. ಇದರಿಂದ ತೀವ್ರ ಆಕ್ರೋಶಗೊಂಡ ಆತ, ಅಡುಗೆ ಮನೆಯಲ್ಲಿದ್ದ ಚಾಕು ತಂದು ಕುಟುಂಬಸ್ಥರ ಮೇಲೆ ದಾಳಿ ನಡೆಸಿದ್ದಾನೆ.

ಚೂರಿ ಇರಿತಕ್ಕೊಳಗಾದ ಯುವಕನ ಸಹೋದರಿ ಪ್ರಗತಿ (19) ತಲೆ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ತಂದೆ ವೆಂಕಟ ನಾಯ್ಡು (45) ಹಾಗೂ ತಾಯಿ ಸೌಜನ್ಯ (38) ಅವರಿಗೆ ಗಂಭೀರ ಗಾಯಗೊಂಡಿದ್ದಾರೆ. ಬಳಿಕ ನೆರೆಹೊರೆಯವರು ತಕ್ಷಣ ಮೂವರನ್ನು ಬಳ್ಳಾರಿಯ ವಿಮ್ಸ್ (VIMS) ಆಸ್ಪತ್ರೆಗೆ ದಾಖಲಿಸಿದರಾದರೂ, ಚಿಕಿತ್ಸೆ ಫಲಕಾರಿಯಾಗದೆ ತಂದೆ ವೆಂಕಟ ನಾಯ್ಡು ಭಾನುವಾರ ಮೃತಪಟ್ಟಿದ್ದಾರೆ. ತಾಯಿ ಸೌಜನ್ಯ ಅವರ ಸ್ಥಿತಿ ಇನ್ನು ಗಂಭೀರವಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿದಿದೆ.

file photo
ಬೆಂಗಳೂರು: ಪ್ರಿಯಕರನೊಂದಿಗೆ ಸೇರಿ ಗಂಡನ ಕೊಲೆಗೈದ ಪತ್ನಿ; ಇಬ್ಬರ ಬಂಧನ

ಇನ್ನು ಘಟನೆ ನಡೆಯುವಾಗ ಪಕ್ಕದ ಕೋಣೆಯಲ್ಲಿದ್ದ ಮನ್‌ದೀಪ್‌ನ ತಾತ-ಅಜ್ಜಿಗೆ ಕಿರುಚಾಟ ಕೇಳಿಸಿದ್ದು, ಓಡಿ ಬಂದು ನೋಡಿದಾಗ ಬೆಡ್‌ರೂಮ್ ಬಾಗಿಲು ಒಳಗಿನಿಂದ ಲಾಕ್ ಆಗಿರುವುದು ಕಂಡು ಬಂದಿದೆ. ತಕ್ಷಣ ನೆರೆಹೊರೆಯವರನ್ನು ಕರೆದು ಬಾಗಿಲು ಒಡೆದಾಗ ಇಡೀ ಕೋಣೆಯಲ್ಲಿ ರಕ್ತದ ಕೋಡಿ ಹರಿದಿದ್ದು, ನಾಲ್ವರೂ ಬಿದ್ದಿರುವುದು ಕಂಡುಬಂದಿದೆ.

ಕುಟುಂಬಸ್ಥರನ್ನು ಇರಿದ ನಂತರ ಆರೋಪಿ ಮನ್‌ದೀಪ್ ತನ್ನ ಕುತ್ತಿಗೆಯನ್ನು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಸದ್ಯ ಆತ ಪೊಲೀಸರ ಕಾವಲಿನಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಘಟನಾ ಸ್ಥಳಕ್ಕೆ ಗಂಗಾವತಿ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ಮನ್‌ದೀಪ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 103 (ಕೊಲೆ) ಮತ್ತು 109 (ಕೊಲೆ ಯತ್ನ) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಆತನ ಬ್ಯಾಂಕ್ ಖಾತೆ ಹಾಗೂ ಆನ್‌ಲೈನ್ ವಹಿವಾಟುಗಳ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

“ನನ್ನ ಮೊಮ್ಮಗನಿಗೆ ಆನ್‌ಲೈನ್ ಬೆಟ್ಟಿಂಗ್ ಚಟವಿತ್ತು. ದಿನವಿಡೀ ಇದೇ ವಿಚಾರವಾಗಿ ಮನೆಯಲ್ಲಿ ಜಗಳವಾಗಿತ್ತು. ರಾತ್ರಿ ವೇಳೆ ಆತ ಹಲ್ಲೆ ನಡೆಸಿದ. ಪ್ರಗತಿ ಸ್ಥಳದಲ್ಲೇ ಸಾವನ್ನಪ್ಪಿದಳು. ನನ್ನ ಮಗ ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟ. ನಾನು ಹೇಗೋ ತಪ್ಪಿಸಿಕೊಂಡು ನೆರೆಹೊರೆಯವರಿಗೆ ವಿಷಯ ತಿಳಿಸಿದೆ ಎಂದು ತಾತಾ ರಾವ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com