ಬೆಂಗಳೂರು: ಬೆಂಗಳೂರಿನ ಮಹದೇವಪುರ ಪ್ರದೇಶದಲ್ಲಿ ಭಾನುವಾರ ಗೃಹರಕ್ಷಕ ದಳದ 32 ವರ್ಷದ ಮಹಿಳೆಯನ್ನು ಆಕೆಯ ಪತಿಯೇ ಕೊಂದಿರುವ ಆಘಾತಕಾರಿ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತೆಯನ್ನು ಮಂಜುಳಾ ಎಂದು ಗುರುತಿಸಲಾಗಿದ್ದು, ಮಹದೇವಪುರ ಪೊಲೀಸ್ ಠಾಣೆಯಲ್ಲಿ ಗೃಹರಕ್ಷಕ ದಳದ ಸಿಬ್ಬಂದಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಮಂಜುಳಾ ಮತ್ತು ಪ್ರದೀಪ್ ಮದುವೆಯಾಗಿ 15 ವರ್ಷಗಳಾಗಿವೆ ಮತ್ತು ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.
ಪ್ರದೀಪ್ ಆನ್ಲೈನ್ ಬೆಟ್ಟಿಂಗ್ಗೆ ವ್ಯಸನಿಯಾಗಿದ್ದು, ಇದು ಆಗಾಗ್ಗೆ ಕೌಟುಂಬಿಕ ಕಲಹಗಳಿಗೆ ಕಾರಣವಾಗುತ್ತಿತ್ತು ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ.
ಮಂಜುಳಾ ಬಗ್ಗೆ ಆಗಾಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದ ಆತ, ಮಕ್ಕಳ ತಂದೆ ಯಾರೆಂದು ಪ್ರಶ್ನಿಸುತ್ತಿದ್ದ. ಈ ಕಿರುಕುಳವನ್ನು ಸಹಿಸಲಾಗದೆ, ಮಂಜುಳಾ ಕಳೆದ ಒಂದೂವರೆ ತಿಂಗಳಿನಿಂದ ಮಕ್ಕಳೊಂದಿಗೆ ತನ್ನ ತಾಯಿ ಮನೆಯಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ.
ಪೊಲೀಸರ ಪ್ರಕಾರ, ಪ್ರದೀಪ್ ಭಾನುವಾರ ತನ್ನ ಜಾಕೆಟ್ ಒಳಗೆ ಚಾಕು ಇಟ್ಟುಕೊಂಡು ಅತ್ತೆ ಮನೆಗೆ ಬಂದಿದ್ದಾನೆ. ತನ್ನನ್ನು ಕ್ಷಮಿಸಿ ಮನೆಗೆ ಹಿಂತಿರುಗುವಂತೆ ಬೇಡಿಕೊಂಡಿದ್ದಾನೆ. ಆಕೆಯ ಕಾಲಿಗೆ ಬಿದ್ದು ಕ್ಷಮೆಯಾಚಿಸಿದ ಆತ, ಇದ್ದಕ್ಕಿದ್ದಂತೆ ಆಕೆಯ ತಾಯಿ ಮತ್ತು ಇಬ್ಬರು ಮಕ್ಕಳ ಮುಂದೆ 20ಕ್ಕೂ ಹೆಚ್ಚು ಬಾರಿ ಮಂಜುಳಾಗೆ ಇರಿದಿದ್ದಾನೆ.
ಕೊಲೆಗೂ ಮುನ್ನ ಪ್ರದೀಪ್ ವಿಡಿಯೋ ಸಂದೇಶವೊಂದನ್ನು ರೆಕಾರ್ಡ್ ಮಾಡಿದ್ದು, ಅದರಲ್ಲಿ ತನ್ನ ಬೆಟ್ಟಿಂಗ್ ಚಟವು ತನ್ನ ಕುಟುಂಬವನ್ನು ಹಾಳು ಮಾಡಿದೆ. ನನ್ನ ಹೆಂಡತಿ ಇಲ್ಲದೆ ನಾನು ಇರಲು ಸಾಧ್ಯವಿಲ್ಲ. ನಾನು ಅವಳ ತಂದೆ ಮತ್ತು ಸೋದರ ಮಾವನೊಂದಿಗೆ ಮಾತನಾಡಿದ್ದೇನೆ. ಅವಳು ಸಂಜೆ ಕೆಲಸ ಮುಗಿಸಿ ಹಿಂತಿರುಗುತ್ತಾಳೆ. ನಾನು ಮತ್ತೊಮ್ಮೆ ಅವಳನ್ನು ನನ್ನ ಬಳಿಗೆ ಹಿಂತಿರುಗುವಂತೆ ಕೇಳುತ್ತೇನೆ. ಅವಳು ಮತ್ತೆ ಬರುವುದಿಲ್ಲ ಎಂದು ಹೇಳಿದರೆ, ನಾನು ಅವಳನ್ನು ಅಲ್ಲಿಯೇ ಕೊಲ್ಲುತ್ತೇನೆ' ಎಂದು ಅವನು ವಿಡಿಯೋದಲ್ಲಿ ಹೇಳಿದ್ದಾನೆ.
ದಾಳಿಯ ನಂತರ, ಪ್ರದೀಪ್ ಅದೇ ಚಾಕುವಿನಿಂದ ತನ್ನ ಕೈಯನ್ನು ಕತ್ತರಿಸಿಕೊಂಡು ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸದ್ಯ ಪೊಲೀಸರು ಆತನನ್ನು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಆರಂಭಿಸಿದ್ದಾರೆ.
Advertisement