

ಬೆಂಗಳೂರು: 16 ವರ್ಷದ ಅಪ್ರಾಪ್ತ ಬಾಲಕಿಯ ಮದುವೆಯನ್ನು ಆಕೆಯ ಬಾಯ್ ಫ್ರೆಂಡ್ ನೀಡಿದ ಮಾಹಿತಿ ಆಧರಿಸಿ ಮಕ್ಕಳ ರಕ್ಷಣಾ ಇಲಾಖೆ ತಡೆದಿರುವ ಘಟನೆಯೊಂದು ನಗರದಲ್ಲಿ ನಡೆದಿದೆ.
ಚಂದ್ರಾಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯ ಪೂರ್ಣಿಮಾ ಮಹಲ್ನಲ್ಲಿ ಮೇ 11ರಂದು 33 ವರ್ಷದ ವ್ಯಕ್ತಿಯೊಂದಿಗೆ ಬಾಲಕಿಯ ವಿವಾಹ ನಿಗದಿಯಾಗಿತ್ತು.
ಬಾಲಕಿಯ ತಾಯಿ ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದು ಡಯಾಲಿಸಿಸ್ ಪಡೆಯುತ್ತಿರುವ ಹಿನ್ನೆಲೆ, ಕುಟುಂಬದವರು ಭಾವನಾತ್ಮಕ ಒತ್ತಡ ಹಾಕಿ ಮದುವೆಗೆ ಒಪ್ಪಿಸುವ ಪ್ರಯತ್ನ ಮಾಡಿದ್ದರು ಎನ್ನಲಾಗಿದೆ.
ಈ ವಿಚಾರವನ್ನು ಬಾಲಕಿ ತನ್ನ ಬಾಯ್ ಫ್ರೆಂಡ್ ಬಳಿ ಹೇಳಿಕೊಂಡಿದ್ದು, ಬಳಿಕ ಆತ ಕನ್ನಡಪರ ಸಂಘಟನೆಯೊಂದರ ಮೂಲಕ ಮಕ್ಕಳ ರಕ್ಷಣಾ ಇಲಾಖೆಗೆ ಮಾಹಿತಿ ರವಾನಿಸಿದ್ದಾನೆ.
ಮಾಹಿತಿ ತಿಳಿದ ತಕ್ಷಣ ಮೇ 7ರಂದು ಅಧಿಕಾರಿಗಳು ನಾಗರಭಾವಿಯಲ್ಲಿರುವ ಬಾಲಕಿಯ ಮನೆಗೆ ಭೇಟಿ ನೀಡಿ, ಬಾಲ್ಯವಿವಾಹ ನಿಷೇಧ ಕಾಯ್ದೆ ಹಾಗೂ ಅದರ ಕಾನೂನು ಪರಿಣಾಮಗಳ ಬಗ್ಗೆ ಕುಟುಂಬಕ್ಕೆ ಜಾಗೃತಿ ಮೂಡಿಸಿದ್ದಾರೆ.
ಮಕ್ಕಳ ಕಲ್ಯಾಣ ಇಲಾಖೆ ಮಧ್ಯಪ್ರವೇಶಿಸದಿದ್ದರೆ ಮದುವೆ ನಡೆಯುತ್ತಿತ್ತು ಎಂದು ಕೆಂಗೇರಿ ವಿಭಾಗದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಆಶಾ ಹೆಚ್.ಕೆ ಅವರು ತಿಳಿಸಿದ್ದಾರೆ.
ಬಾಲ್ಯವಿವಾಹದಿಂದ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಜೊತೆಗೆ ವಯಸ್ಸಿನ ಅಂತರದಿಂದ ದಾಂಪತ್ಯ ಜೀವನದಲ್ಲಿ ಮಾನಸಿಕ ಅಸಮಾಧಾನ ಉಂಟಾಗುವ ಸಾಧ್ಯತೆ ಇದೆ ಎಂಬುದನ್ನೂ ಕುಟುಂಬಕ್ಕೆ ವಿವರಿಸಿದ್ದೇವೆ ಎಂದು ಆಶಾ ಅವರು ಹೇಳಿದ್ದಾರೆ.
ಮದುವೆ ಮಂಟಪ ಬುಕ್ಕಿಂಗ್ ಸೇರಿದಂತೆ ಎಲ್ಲಾ ಸಿದ್ಧತೆಗಳು ಆಗಿದ್ದರಿಂದ ಬಾಲಕಿಯ ತಾಯಿ ಭಾವನಾತ್ಮಕವಾಗಿ ಕುಗ್ಗಿದರು. ಬಾಲಕಿಯನ್ನು ಕಸ್ಟಡಿಗೆ ತೆಗೆದುಕೊಳ್ಳುವ ಬಗ್ಗೆ ಅಧಿಕಾರಿಗಳು ತಿಳಿಸಿದಾಗ ಮಹಿಳೆ ಆತ್ಮಹತ್ಯೆ ಬೆದರಿಕೆ ಹಾಕಿದರು.
ನಂತರ ಬಾಲಕಿಯ ತಂದೆ ಲೋಕೇಶ್ ಆರ್ ಅವರಿಂದ, ಮದುವೆ ರದ್ದುಪಡಿಸಿ ಬಾಲಕಿ ಕಾನೂನುಬದ್ಧ ವಯಸ್ಸಿಗೆ ಬಂದ ನಂತರ ಮಾತ್ರ ವಿವಾಹ ಮಾಡುವುದಾಗಿ ಪತ್ರ ಬರೆಯಿಸಿಕೊಳ್ಳಲಾಯಿತು. ಕುಟುಂಬವು ಮುಂದಿನ ವಾರ ಮಕ್ಕಳ ಕಲ್ಯಾಣ ಸಮಿತಿ (CWC) ಮುಂದೆ ಹಾಜರಾಗಬೇಕಿದೆ ಎಂದು ತಿಳಿಸಿದ್ದಾರೆ.
ಬಾಲಕಿಯ ಸುರಕ್ಷತೆ ದೃಷ್ಟಿಯಿಂದ ಸ್ಥಳೀಯ ಪೊಲೀಸರು ಪ್ರತಿದಿನ ಮನೆಗೆ ಭೇಟಿ ನೀಡಲಿದ್ದಾರೆ ಎಂದು ಇಲಾಖೆ ತಿಳಿಸಿದೆ.
ಇದೇ ವೇಳೆ ಬಾಲ್ಯವಿವಾಹದ ಮಾಹಿತಿ ನೀಡಿದ ಕೆಲವು ಕಾರ್ಯಕರ್ತರಿಗೆ ಬೆದರಿಕೆ ಕರೆಗಳು ಬರುತ್ತಿರುವುದಾಗಿ ತಿಳಿದುಬಂದಿದ್ದು, ಈ ಕುರಿತು ಪೊಲೀಸ್ ದೂರು ನೀಡುವಂತೆ ಅಧಿಕಾರಿಗಳು ಸಲಹೆ ನೀಡಿದ್ದಾರೆ.
Advertisement