

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ನೂತನವಾಗಿ ನಿರ್ಮಿಸಲಾದ ಧ್ಯಾನ ಮಂದಿರ'ವನ್ನು ಭಾನುವಾರ ಉದ್ಘಾಟಿಸಿದ್ದಾರೆ.
ಸಂಸ್ಥೆಯ 45ನೇ ವಾರ್ಷಿಕೋತ್ಸವ ಮತ್ತು ಸಂಸ್ಥಾಪಕರಾದ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ 70ನೇ ಜನ್ಮದಿನಾಚರಣೆಯ ಅಂಗವಾಗಿ ಈ ಕಾರ್ಯಕ್ರಮವನ್ನು ನಡೆಸಲಾಗಿದ್ದು, ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯವರು ಭಾಗಿಯಾಗಿದ್ದಾರೆ.
ಈ ಸಂದರ್ಭದಲ್ಲಿ ಮೋದಿಯವರು ಮಾನಸಿಕ ಆರೋಗ್ಯ, ಗ್ರಾಮೀಣಾಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ರಾಷ್ಟ್ರವ್ಯಾಪಿ ಸೇವಾ ಯೋಜನೆಗಳಿಗೂ ಚಾಲನೆ ನೀಡಿದ್ದಾರೆ.
ಬಳಿಕ ಮಾತನಾಡಿದ ಅವರು, ಬೆಂಗಳೂರು ಕೇವಲ ತಂತ್ರಜ್ಞಾನದ ನಗರವಲ್ಲ, ಇದು ಆಧ್ಯಾತ್ಮಿಕ ಚೇತನದ ಕೇಂದ್ರವೂ ಹೌದು ಎಂದು ಬಣ್ಣಿಸಿದರು.
‘ಬೆಂಗಳೂರು ನಗರವು ವಿಶ್ವಕ್ಕೆ ಸಾಫ್ಟ್ವೇರ್ ಅನ್ನು ನೀಡುತ್ತಿದೆ. ಅದೇ ರೀತಿ ಆರ್ಟ್ ಆಫ್ ಲಿವಿಂಗ್ ಮೂಲಕ ವಿಶ್ವಕ್ಕೆ ಮಾನಸಿಕ ಶಾಂತಿಯ ಸಾಫ್ಟ್ವೇರ್ ಅನ್ನೂ ನೀಡುತ್ತಿದೆ. ಯೋಗ, ಧ್ಯಾನ ಮತ್ತು ಪ್ರಾಣಾಯಾಮಗಳು ಭಾರತದ ಸಂಸ್ಕಾರದ ಅವಿಭಾಜ್ಯ ಅಂಗಗಳಾಗಿದ್ದು, ಇವುಗಳನ್ನು ಜಾಗತಿಕ ಮಟ್ಟದಲ್ಲಿ ಜನಪ್ರಿಯಗೊಳಿಸುವಲ್ಲಿ ಈ ಸಂಸ್ಥೆಯ ಪಾತ್ರ ಹಿರಿದು’ ಎಂದು ಮೆಚ್ಚುಗೆ ಸೂಚಿಸಿದರು.
ಮೋದಿಯವರು, ಆಧ್ಯಾತ್ಮಿಕತೆ ಎಂದರೆ ಕೇವಲ ಧ್ಯಾನವಲ್ಲ, ಅದು ಸಮಾಜ ಸೇವೆಯನ್ನೂ ಒಳಗೊಂಡಿರಬೇಕು ಎಂಬ ಗುರೂಜಿಯವರ ತತ್ವವನ್ನು ಪ್ರಧಾನಿ ಶ್ಲಾಘಿಸಿದರು.
ನಮ್ಮಲ್ಲಿ ಸೇವೆ ಎನ್ನುವುದು ಪರಮ ಧರ್ಮ. ಪರೋಪಕಾರವೇ ಪುಣ್ಯ, ಪರಪೀಡನೆಯೇ ಪಾಪ. ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಪ್ರತಿ ಕಾರ್ಯಕರ್ತನಲ್ಲೂ ಸೇವಾ ಭಾವನೆ ಎದ್ದು ಕಾಣುತ್ತಿದೆ. ಗುರೂಜಿ ಅವರು ಕಳೆದ 45 ವರ್ಷಗಳ ಹಿಂದೆ ಬಿತ್ತಿದ ಬೀಜ ಇಂದು ವಿಶಾಲವಾದ ಹೆಮ್ಮರವಾಗಿ ಬೆಳೆದು ನಿಂತಿದೆ. ಈ ವೃಕ್ಷದ ಸಾವಿರಾರು ಶಾಖೆಗಳು ಜಗತ್ತಿನಾದ್ಯಂತ ಲಕ್ಷಾಂತರ ಜನರ ಬದುಕನ್ನು ಸುಂದರಗೊಳಿಸುತ್ತಿವೆ.
ಭಾರತವು ಜಗತ್ತಿಗೆ ಶಾಂತಿ ಮತ್ತು ಮಾನಸಿಕ ನೆಮ್ಮದಿಯನ್ನು ನೀಡುವ ಸಾಮರ್ಥ್ಯ ಹೊಂದಿದೆ. ಯೋಗ ಮತ್ತು ಸುದರ್ಶನ ಕ್ರಿಯೆಯಂತಹ ಭಾರತೀಯ ಪ್ರಾಚೀನ ವಿದ್ಯೆಗಳನ್ನು 180ಕ್ಕೂ ಹೆಚ್ಚು ದೇಶಗಳಿಗೆ ತಲುಪಿಸುವ ಮೂಲಕ ಗುರೂಜಿಯವರು ಭಾರತವನ್ನು ಆಧ್ಯಾತ್ಮಿಕವಾಗಿ 'ವಿಶ್ವಗುರು' ಸ್ಥಾನದಲ್ಲಿ ನಿಲ್ಲಿಸಲು ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.
ಇದೇ ವೇಳೆ ಇಂದಿನ ಒತ್ತಡದ ಜಗತ್ತಿನಲ್ಲಿ ಆರ್ಟ್ ಆಫ್ ಲಿವಿಂಗ್ ನೀಡುತ್ತಿರುವ ಮಾನಸಿಕ ಆರೋಗ್ಯ ಸೇವೆಗಳನ್ನು ಪ್ರಧಾನಿ ಶ್ಲಾಘಿಸಿದರು.
ನೂತನವಾಗಿ ಉದ್ಘಾಟನೆಗೊಂಡ ಧ್ಯಾನ ಮಂದಿರವು ಲಕ್ಷಾಂತರ ಜನರಿಗೆ ಆಂತರಿಕ ಶಾಂತಿ ನೀಡುವ ಕೇಂದ್ರವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಭಾರತದ ವಸುಧೈವ ಕುಟುಂಬಕಂ (ಜಗತ್ತೇ ಒಂದು ಕುಟುಂಬ) ಎಂಬ ಸಂದೇಶವನ್ನು ಜಾಗತಿಕ ವೇದಿಕೆಯಲ್ಲಿ ಪ್ರಸಾರ ಮಾಡುತ್ತಿರುವ ಈ ಸಂಸ್ಥೆಯ ಕಾರ್ಯವನ್ನು ಮೋದಿ ಅವರು ರಾಷ್ಟ್ರೀಯ ಹೆಮ್ಮೆ ಎಂದು ಶ್ಲಾಘಿಸಿದರು.
Advertisement