

ಬೆಂಗಳೂರು: ಯಾವುದೇ ಕಾರಣಕ್ಕೂ ತಾವು ರಾಷ್ಟ್ರ ರಾಜಕಾರಣಕ್ಕೆ ಹೋಗಲ್ಲ. ರಾಜ್ಯಸಭೆಗೆ ಹೋಗುವ ಆಫರ್ ಬಂದಿತ್ತು, ವಿನಮ್ರವಾಗಿ ನಿರಾಕರಿಸಿದ್ದು, ರಾಜ್ಯದಲ್ಲೇ ಸಕ್ರಿಯನಾಗಿರುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ ಬಳಿಕ ಗೃಹಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿದ್ದರಾಮಯ್ಯ ಅವರು, 'ರಾಜ್ಯಸಭೆಗೆ ಹೋಗುವ ಆಫರ್ ಬಂದಿತ್ತು, ವಿನಮ್ರವಾಗಿ ನಿರಾಕರಿಸಿದ್ದೇನೆ, ರಾಷ್ಟ್ರ ರಾಜಕಾರಣದಲ್ಲಿ ಆಸಕ್ತಿ, ರಾಜ್ಯ ರಾಜಕಾರಣದಲ್ಲಿ ಇರುತ್ತೇನೆ ಜನ ಆಯ್ಕೆ ಮಾಡಿರುವುದು ಐದು ವರ್ಷಕ್ಕೆ ಅಲ್ಲಿವರೆಗೆ ಕರ್ನಾಟಕದ ಜನರ ಪರವಾಗಿ ನನ್ನ ಕ್ಷೇತ್ರದಲ್ಲಿ ಕೆಲಸ ಮಾಡುತ್ತೇನೆ' ಎಂದರು.
ನಾನು ಯಾವತ್ತೂ ಅಧಿಕಾರ, ಹಣದ ಹಿಂದೆ ಹೋದವನಲ್ಲ, ಆಸ್ತಿ ಪಾಸ್ತಿ ಮಾಡಿಕೊಳ್ಳಬೇಕೆಂಬ ಯೋಚನೆ ಮಾಡಿರಲಿಲ್ಲ, 1983ರಲ್ಲಿ ಮೊದಲ ಬಾರಿ ಶಾಸಕನಾದವನು,ರಾಜಕಾರಣಕ್ಕೆ ಬಂದು ಸುಮಾರು 50 ವರ್ಷ ಆಗ್ತಾ ಬಂದಿದೆ, ನನ್ನ ರಾಜಕೀಯ ಜೀವನ ತೆರೆದ ಪುಸ್ತಕ. ಯಾವತ್ತೂ ಕೂಡ ನನ್ನ ಮೌಲ್ಯ, ಸಿದ್ಧಾಂತದಲ್ಲಿ ರಾಜೀ ಆಗಿಲ್ಲ, ಕಟ್ಟ ಕಡೆಯ ವ್ಯಕ್ತಿಗೂ ಅನ್ನ, ವಸತಿ, ಶಿಕ್ಷಣ ಒದಗಿಸಬೇಕೆಂಬ ನಂಬಿಕೆ, ಸಮಾಜದಲ್ಲಿರುವ ಎಲ್ಲಾ ಬಡವರಿಗಾಗಿ ಗ್ಯಾರಂಟಿ ಯೋಜನೆ ಜಾರಿ ಮಾಡಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಕೊಟ್ಟ ಭರವಸೆಗಳ ಈಡೇರಿಸಿದ್ದೇವೆ
ಅಸಮಾನತೆ ತೊಲಗಬೇಕಾದರೆ ಎಲ್ಲರಿಗೂ ಸಮಾನತೆ ಅವಕಾಶ ಸಿಗಬೇಕು. ಹೀಗಾಗಿ ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಭರವಸೆಗಳನ್ನು ನಾವು ಈಡೇರಿಸಿದ್ದೇವೆ. 2013ರಲ್ಲಿ ಕೊಟ್ಟಿದ್ದ 165 ಭರವಸೆಗಳಲ್ಲಿ 158 ಭರವಸೆ ಈಡೇರಿಸಿದ್ದೇನೆ. 2023ರಲ್ಲಿ ಕೊಟ್ಟಿದ್ದ 550ಕ್ಕೂ ಹೆಚ್ಚು ಭರವಸೆಗಳನ್ನು ನಾವು ಕೊಟ್ಟಿದ್ದೆವು. 550 ಭರವಸೆಗಳ ಪೈಕಿ ಸುಮಾರು 300 ಭರವಸೆಗಳನ್ನು ಈಡೇರಿಸಿದ್ದೇವೆ. ಅಲ್ಲದೇ ಚುನಾವಣೆ ವೇಳೆ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದೆವು. ಅದರಂತೆ ಐದು ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇವೆ.
ಕುವೆಂಪು ಹೇಳಿದಂತೆ ಶಾಂತಿಯ ತೋಟ ಆಗಬೇಕು
ಇಡೀ ಸಮಾಜ ಕುವೆಂಪು ಹೇಳಿದಂತೆ ಶಾಂತಿಯ ತೋಟ ಆಗಬೇಕು ಅಂತ ಬಯಸಿದವನು. ಸಮಾಮತೆಯ ಸಮಾಜ ನಿರ್ಮಾಣ ಆಗಬೇಕು. ಸಮಾನತೆಯ ಅವಕಾಧ ಎಲ್ಲರಿಗೂ ಸಿಗಬೇಕು. ಸಮಾನ ಅವಕಾಶ ಇಲ್ಲದಿರುವುದರಿಂದಲೇ ನಮ್ಮ ಸಮಾಜದಲ್ಲಿ ಅಸಮಾನತೆ ನೋಡುತ್ತಿದ್ದೇವೆ. ಈ ಅಸಮಾನತೆ ತೊಲಗಬೇಕಾದರೆ ಎಲ್ಲರಿಗೂ ಸಮಾನತೆಯ ಅವಕಾಶ ಸಿಗಲೇಬೇಕು ಎಂದರು.
ವಿಪಕ್ಷಗಳಿಗೆ ಸಿದ್ದರಾಮಯ್ಯ ಚಾಟಿ
ಜನರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ನಮ್ಮ ಗ್ಯಾರಂಟಿ ಬಗ್ಗೆ ಮೋದಿ ಸೇರಿ ವಿಪಕ್ಷಗಳು ಅಪಪ್ರಚಾರ ಮಾಡಿದ್ರು. ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲು ಆಗಲ್ಲ ಎಂದು ಹೇಳಿದ್ದರು. ಅಭಿವೃದ್ಧಿ ಕೆಲಸಗಳಿಗೆ ದುಡ್ಡು ಇರಲ್ಲ ಎಂದು ಅಪಪ್ರಚಾರ ಮಾಡಿದ್ದರು. ಅಭಿವೃದ್ಧಿ ಕೆಲಸ ಆಗಲ್ಲ ರಾಜ್ಯ ದಿವಾಳಿ ಆಗುತ್ತದೆ ಎಂದು ಹೇಳಿದರು. ಗ್ಯಾರಂಟಿ ಯೋಜನೆ ಜಾರಿ ಮಾಡಿದ ಮೇಲೆ ಇಡೀ ಕರ್ನಾಟಕ ತಲಾ ಆದಾಯದಲ್ಲಿ ನಂಬರ್ ಒನ್ ಸ್ಥಾನದಲ್ಲಿ ಇದ್ದೇವೆ ಎಂದು ವಿಪಕ್ಷಗಳಿಗೆ ಸಿದ್ದರಾಮಯ್ಯ ಚಾಟಿ ಬೀಸಿದರು.
ಸಂವಿಧಾನ ಇಲ್ಲದೆ ಹೋಗಿದ್ದರೆ ಸಿದ್ದರಾಮಯ್ಯ ಇರುತ್ತಿರಲಿಲ್ಲ
ನಾನು ಹಳ್ಳಿಯಿಂದ ಬಂದವನು. ನಾನು ಶಾಸಕ, ಸಿಎಂ ಆಗುತ್ತೇನೆ ಎಂದು ಅಂದುಕೊಂಡಿರಲಿಲ್ಲ. ನಾನು ರಾಜಕೀಯ ಬಂದಿದ್ದು ಆಕಸ್ಮಿಕ. ನಮ್ಮ ಕುಟುಂಬದಲ್ಲಿ ಯಾರೂ ರಾಜಕೀಯದಲ್ಲಿ ಇರಲಿಲ್ಲ. ರಾಜಕಾರಣಕ್ಕೆ ಬಂದಾಗಿನಿಂದಲೂ ಬುದ್ಧ, ಬಸವ, ಅಂಬೇಡ್ಕರ್, ಗಾಂಧೀಜಿ ತತ್ವ ಆದರ್ಶದಲ್ಲಿ ನಂಬಿಕೆ ಇಟ್ಟುಕೊಂಡವನು. ಸಂವಿಧಾನದಲ್ಲಿ ಅಪಾರ ಗೌರವ ಇಟ್ಟುಕೊಂಡವನು. ಎಲ್ಲರೂ ಕೂಡ ಒಂದು ಕುಟುಂಬದಂತೆ ಇರಬೇಕು ಅಂತಾ ಭಾವಿಸಿದ್ದೆ ಎಂದು ಮಾತನಾಡುತ್ತಲೇ ಸಿದ್ದರಾಮಯ್ಯ ಭಾವುಕರಾದರು.
2006ರಲ್ಲಿ ನಾನು ಕಾಂಗ್ರೆಸ್ ಸೇರಿದ್ದೆ. 2006ರಿಂದ ಕಾರ್ಯಕರ್ತರು, ಶಾಸಕರು, ಸಂಸದರು ಸೇರಿ ಎಲ್ಲರೂ ಪ್ರೀತಿ ತೋರಿಸಿದ್ದಾರೆ, ಅವಕಾಶ ಕಲ್ಪಸಿಕೊಟ್ಟಿದ್ದಾರೆ. ಅವರಿಗೆಲ್ಲರಿಗೂ ನಾನು ಧನ್ಯವಾದ ಹೇಳುತ್ತೇನೆ. 2013ರಿಂದ 18ರವರೆಗೆ ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದೆ. ಬಳಿಕ 2023ರಿಂದ ಇಲ್ಲಿವರೆಗೆ ಸಿಎಂ ಆಗಿದ್ದೆ. ಸಿಎಂ ಆಗಿದ್ದಾಗ ನನ್ನ ಜತೆ ಕೆಲಸ ಮಾಡಿದವರು ಸಹಕರಿಸಿದ್ದರು.
ಅಂದು 8 ಜನ ಶಾಸಕರು ನನ್ನ ಜತೆ ಕಾಂಗ್ರೆಸ್ ಸೇರಿದ್ದರು, ಅದರಲ್ಲಿ ಕೆಲವರು ಸತ್ತು ಹೋಗಿದ್ದಾರೆ. ಯಾರು ನನ್ನ ಜತೆ ಅಂದು ಕಾಂಗ್ರೆಸ್ ಸೇರಿದ್ದರೋ ಅವರಿಗೆ ನಾನು ಚಿರರುಣಿ. ಕೊನೆ ಉಸಿರಿರುವ ವರೆಗೂ ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಟ ಮಾಡುತ್ತೇನೆ. ಸಂವಿಧಾನ ಇವೆಲ್ಲಕ್ಕೂ ಕೂಡ ವಿರುದ್ಧವಾಗಿದೆ. ಸಂವಿಧಾನದಲ್ಲಿ ನಂಬಿಕೆ ಇಟ್ಟಿದ್ದೇನೆ.
ಒಂದು ವೇಳೆ ಸಂವಿಧಾನ ಇಲ್ಲದೆ ಹೋಗಿದ್ದರೆ ವಿದ್ಯಾವಂತ ಆಗುತ್ತಿರಲಿಲ್ಲ, ಯಾವ ಹುದ್ದೆಯನ್ನೂ ಅಲಂಕರಿಸಲಾಗುತ್ತಿರಲಿಲ್ಲ. ಕುರಿ ಮೇಯಿಸಿಕೊಂಡು ಇರುತ್ತಿದ್ದೆ. ನನ್ನ ತಂದೆ-ತಾಯಿ ಅವಿದ್ಯಾವಂತರು. ಸಂವಿಧಾನಕ್ಕೆ ಯಾರೇ ಧಕ್ಕೆ ತಂದರೂ ಅವರ ವಿರುದ್ಧ ಹೋರಾಡುತ್ತೇನೆ. ಜನರ ಸಮಾನತೆಯನ್ನು ಕಾಪಾಡುವ ಕೆಲಸ ಮಾಡುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.
Advertisement