

ಬೆಂಗಳೂರು: ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಂಗಳವಾರ ಯಶವಂತಪುರದ ಎಪಿಎಂಸಿ ಮಾರುಕಟ್ಟೆಗೆ ದಿಢೀರ್ ಭೇಟಿ ನೀಡಿ ಕಾರ್ಮಿಕರ ಬವಣೆ ಆಲಿಸಿರುವುದಕ್ಕೆ ಇದೀಗ ಮೆಚ್ಚುಗೆ ವ್ಯಕ್ತವಾಗಿದ್ದು, ಕರ್ನಾಟಕ ಹೈಕೋರ್ಟ್ ಸಿಎಂ ನಡೆಯನ್ನು ಬುಧವಾರ ಶ್ಲಾಘಿಸಿದೆ.
ಕಾರ್ಮಿಕರಿಗೆ ಸಂಬಂಧಿಸಿದ ಪ್ರಕರಣವೊಂದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರಿದ್ದ ಏಕಸದಸ್ಯ ಪೀಠ, 'ಎಪಿಎಂಸಿ ಮಾರುಕಟ್ಟೆಗೆ ಭೇಟಿ ನೀಡಿರುವ ಮುಖ್ಯಮಂತ್ರಿಗಳ ನಡೆಯನ್ನು ಕೆಲವರು ಗಿಮಿಕ್ ಎಂದು ಕರೆಯಬಹುದು. ಆದರೆ, ಇದು ಖಂಡಿತವಾಗಿಯೂ ಅದ್ಭುತವಾದ ಕೆಲಸ' ಎಂದು ಹೇಳಿದೆ.
'ಎಪಿಎಂಸಿಗೆ ಭೇಟಿ ನೀಡಿದ್ದ ವೇಳೆ ಶಿವಕುಮಾರ್ ಅವರು ಮಾರುಕಟ್ಟೆಯಲ್ಲಿರುವ ಈರುಳ್ಳಿ, ಬೆಳ್ಳುಳ್ಳಿ ಮತ್ತು ಶುಂಠಿಗಳ ಗುಣಮಟ್ಟ ಮತ್ತು ದರವನ್ನು ಪರಿಶೀಲಿಸಿದ್ದಾರೆ. ವ್ಯಾಪಾರಿಗಳ ಜೊತೆ ಮತ್ತು ಕಾರ್ಮಿಕ ಹೆಣ್ಣು ಮಕ್ಕಳ ಜೊತೆ ಕೂತು ಅವರ ಕಷ್ಟಸುಖ ಆಲಿಸಿದ್ದಾರೆ. ಇದೆಲ್ಲವೂ ಸಂತಸದ ವಿಷಯ' ಎಂದು ನ್ಯಾಯಾಲಯ ತಿಳಿಸಿದೆ.
'ಇಂದು ಎಪಿಎಂಸಿ ಮಳಿಗೆಗಳು ಯಾರದೋ ಹೆಸರಿನಲ್ಲಿ ಮತ್ಯಾರೋ ಬಾಡಿಗೆದಾರನ ವಾಸ ಎನ್ನುವಂತಾಗಿದೆ. ಊರಲ್ಲಿರುವ ಎಪಿಎಂಸಿಗಳು ಸತ್ತು ಹೋಗಿವೆ' ಎಂದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದೆ.
ಕಾರ್ಮಿಕರನ್ನು ಬಂಡವಾಳಶಾಹಿಗಳ ಕಪಿಮುಷ್ಟಿಯಿಂದ ಮುಕ್ತಗೊಳಿಸಬೇಕು. ಕಾರ್ಮಿಕರ ಹಿತರಕ್ಷಣೆಗಾಗಿಯೇ ಇರುವ ಕಾನೂನುಗಳನ್ನು ಚಾಚೂ ತಪ್ಪದೆ ಪಾಲಿಸಬೇಕು. ವಿಷ ಕುಡಿದು ಸಾಯಬಾರದು ಎಂದರೆ ಹೇಗೆ? ಕಾರ್ಮಿಕರಿಗೆ ಕನಿಷ್ಠ ವೇತನ ನೀಡಬೇಕು. ಕನಿಷ್ಠ ವೇತನ ಜಾರಿಯಲ್ಲಿ ಯಾವುದೇ ತಾಂತ್ರಿಕ ಅಡಚಣೆಗಳು ಕಾಣಬಾರದು. ಕಾನೂನನ್ನು ನೀವು ಗೌರವಿಸಿದರೆ ಅದು ನಿಮ್ಮನ್ನು ರಕ್ಷಿಸುತ್ತದೆ' ಎಂದು ಅರ್ಜಿದಾರರ ಪರ ವಕೀಲರಿಗೆ ತಿಳಿಸಿತು.
ಯಶವಂತಪುರ ಎಪಿಎಂಸಿಗೆ ಮಂಗಳವಾರ ದಿಢೀರ್ ಭೇಟಿ ನೀಡಿ ರೈತರೊಂದಿಗೆ ಚರ್ಚಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ಸಣ್ಣ ಮಕ್ಕಳಿಂದ ಕೆಲಸ ಮಾಡಿಸುವುದನ್ನು ತಕ್ಷಣದಿಂದಲೇ ನಿಲ್ಲಿಸಬೇಕು. ಬಾಲಕಾರ್ಮಿಕರಿಂದ ದುಡಿಸುತ್ತಿರುವವರನ್ನು ತಕ್ಷಣವೇ ಬಂಧಿಸಿ ಪ್ರಕರಣ ದಾಖಲಿಸಲು ಜಿಲ್ಲಾಧಿಕಾರಿ ಹಾಗೂ ಪೊಲೀಸರಿಗೆ ಸೂಚನೆ ನೀಡಿದ್ದೇನೆ. ರಾಜ್ಯದ ಇತರೆ ಎಪಿಎಂಸಿಗಳಿಗೆ ಸಚಿವರುಗಳು ಭೇಟಿ ನೀಡಿ ಸಮಸ್ಯೆ ಹಾಗೂ ದೂರುಗಳನ್ನು ಸರಿಪಡಿಸಲು ಸೂಚಿಸಲಾಗುವುದು' ಎಂದು ಹೇಳಿದರು.
ಟಎಪಿಎಂಸಿ ಮಾರುಕಟ್ಟೆ ರೈತರು ಹಾಗೂ ವ್ಯಾಪಾರಸ್ಥರ ನಡುವಿನ ಕೊಂಡಿ. ಬೇರೆ ಯಾವುದೇ ಮಾರುಕಟ್ಟೆಗಿಂತಲೂ ಬೆಂಗಳೂರಿನ ಮಾರುಕಟ್ಟೆಯ ಬಗ್ಗೆ ರೈತರು ಸಂತುಷ್ಟರಾಗಿದ್ದಾರೆ. ಮಧ್ಯಪ್ರದೇಶದ ಇಂದೋರ್ ಸೇರಿದಂತೆ ದೇಶದ ವಿವಿಧ ಮಾರುಕಟ್ಟೆಗಳಿಂದ ಈರುಳ್ಳಿ, ಆಲೂಗಡ್ಡೆ ಮುಂತಾದ ಕೃಷಿ ಉತ್ಪನ್ನಗಳು ಇಲ್ಲಿಗೆ ಬರುತ್ತಿದ್ದು, ಇಲ್ಲಿನ ಉತ್ಪನ್ನಗಳಿಗೂ ಬೇರೆ ಉತ್ಪನ್ನಗಳಿಗೂ ಗುಣಮಟ್ಟದಲ್ಲಿ ಹಾಗೂ ರುಚಿಯಲ್ಲಿ ಸಾಕಷ್ಟು ವ್ಯತ್ಯಾಸವಿದೆ. ಹಲವು ಉತ್ಪನ್ನಗಳು ಮೂರು ತಿಂಗಳವರೆಗೆ ಹಾಳಾಗದೆ ಉಳಿದರೆ, ಇನ್ನು ಕೆಲವು ಒಂದು ತಿಂಗಳು ಉಳಿಯುವುದಿಲ್ಲ' ಎಂದರು.