ಕಳ್ಳಬಟ್ಟಿ ದುರಂತ: ಮೃತರ ಸಂಖ್ಯೆ 84ಕ್ಕೆ ಏರಿಕೆ
ಮುಂಬೈ: ಇಲ್ಲಿನ ಸ್ಲಮ್ ನಲ್ಲಿ ಕಳ್ಳಭಟ್ಟಿ ಸೇವಿಸಿ ಮೃತಪಟ್ಟವರ ಸಂಖ್ಯೆ 84ಕ್ಕೇರಿದೆ. ಇನ್ನೂ 34 ಮಂದಿ ಪರಿಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ನಡುವೆ, ಘಟನೆ ಸಂಬಂಧ ಎಂಟು ಪೊಲೀಸರನ್ನು ಸರ್ಕಾರ ಅಮಾನತು ಮಾಡಿದೆ.
ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 84ಕ್ಕೆ ಏರಿಕೆಯಾಗಿದ್ದು, ನಗರ 8 ವಿವಿಧ ಆಸ್ಪತ್ರೆಗಳಲ್ಲಿ 34 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮುಂಬೈ ಪೊಲೀಸ್ ವಕ್ತಾರ ಧನಂಜಯ್ ಕುಲಕರ್ಣಿ ಅವರು ತಿಳಿಸಿದ್ದಾರೆ.
ಮಲಾಡ್ನ ಲಕ್ಷ್ಮಿ ನಗರ ಸ್ಲಮ್ ಪ್ರದೇಶದ ಸಮೀಪ ಇರುವ ಗಾಮ್ದೇವಿ ಜುರಾಸಿಕ್ ಪಾರ್ಕ್ನಲ್ಲಿ ಗುರುವಾರ ರಾತ್ರಿ ಕಳ್ಳಭಟ್ಟಿ ವಿತರಿಸಲಾಗಿತ್ತು. ಈ ವೇಳೆ ಅಸ್ವಸ್ಥರಾದ 13 ಮಂದಿ ರಾತ್ರಿಯೇ ಮೃತಪಟ್ಟಿದ್ದರು. ಶುಕ್ರವಾರ ಸಂಜೆ ವೇಳೆಗೆ ಆಸ್ಪತ್ರೆಗೆ ದಾಖಲಾಗಿದ್ದ ಮತ್ತೆ 40 ಮಂದಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಘಟನೆ ಹಿನ್ನೆಲೆಯಲ್ಲಿ ಕರ್ತವ್ಯದಲ್ಲಿ ನಿಲಕ್ಷ್ಯ ತೋರಿದ ಕಾರಣ ಮಾಲ್ವಾನಿ ಠಾಣೆಯ ಹಿರಿಯ ಪೊಲೀಸ್ ಇನ್ಸ್ ಪೆಕ್ಟರ್ ಹಾಗೂ ಏಳು ಮಂದಿ ಸಿಬ್ಬಂದಿಯನ್ನು ಅಮಾನತು ಮಾಡಿ ಸರ್ಕಾರ ಆದೇಶ ಹೊರಡಿಸಿದೆ ಎಂದು ನಗರ ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ. ಇದಲ್ಲದೆ ಘಟನೆಗೆ ಸಂಬಂಧಿಸಿ ಮೂವರು ಆರೋಪಿಗಳನ್ನೂ ಬಂಧಿಸಲಾಗಿದೆ.
ಇವರು ಕಳ್ಳಭಟ್ಟಿಯನ್ನು ಠಾಣೆಯಿಂದ ವಸಂತ್ ವಿಹಾರ್ ಪ್ರದೇಶಕ್ಕೆ ಸಾಗಣೆ ಮಾಡಿದ್ದರು. ಉಳಿದ ಆರೋಪಿಗಳಿಗಾಗಿ ಹುಡುಕಾಟ ಮುಂದುವರಿದಿದೆ. ಏತನ್ಮಧ್ಯೆ, ಘಟನೆಯ ಸಮಗ್ರ ತನಿಖೆ ನಡೆಸಿ ಇನ್ನೆರೆಡು ದಿನದೊಳಗೆ ವರದಿ ಸಲ್ಲಿಸುವಂತೆ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಆದೇಶಿಸಿದ್ದಾರೆ.